ಜಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ

ಬೆಳಗಾವಿ: ಜಿಲ್ಲೆಯ ಗೋಕಾಕ ಮಹಾಲಕ್ಷ್ಮೀ ಜಾತ್ರೆಯಲ್ಲಿ ಜನಸಂದಣಿಯ ಮಧ್ಯೆಯೇ ಶನಿವಾರ ಶಾಸಕ ರಮೇಶ ಜಾರಕಿಹೊಳಿ ಅವರ ಪುತ್ರ ಸಂತೋಷ, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ದಶಕದ ಬಳಿಕ ಗೋಕಾಕದಲ್ಲಿ ಅದ್ದೂರಿ ಜಾತ್ರೆ ನಡೆಯುತ್ತಿದ್ದು, ಜಾರಕಿಹೊಳಿ ಕುಟುಂಬದವರೇ ಮುಂದಾಳತ್ವ ವಹಿಸಿದ್ದಾರೆ. ಉತ್ಸವದ ಆರನೇ ದಿನವಾದ ಶನಿವಾರ ಸಂತೋಷ ಜಾರಕಿಹೊಳಿ ಭಂಡಾರದ ಓಕುಳಿಯಲ್ಲಿ ಪಾಲ್ಗೊಂಡರು. ಈ ವೇಳೆ ಬಂದೂಕು ಹಿಡಿದುಕೊಂಡು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು. ಸುತ್ತ ಸೇರಿದ್ದ ಅವರ ಬೆಂಬಲಿಗರೆಲ್ಲ ಮಹಾಲಕ್ಷ್ಮೀಗೆ ಜೈ ಎಂದು ಕುಣಿದಾಡಿ ಸಂಭ್ರಮಿಸಿದರು. ಇದರ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.
ಜಾತ್ರೆಯಲ್ಲಿ ಸಾವಿರಾರು ಜನರ ನಡುವೆ ಗಾಳಿಯಲ್ಲಿ ಗುಂಡುಹಾರಿಸಲಾಗಿದೆ. ಹೀಗಾಗಿ ರಮೇಶ್​​ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ವಿರುದ್ಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement