ಆಂತರಿಕ ತನಿಖಾ ವರದಿ, ಪದಚ್ಯುತಿ ಶಿಫಾರಸ್ಸು ಪ್ರಶ್ನಿಸಿದ್ದ ನ್ಯಾ. ವರ್ಮಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟಿನ ಕಂತೆಗಳು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ವಾಗ್ದಂಡನೆ (ಮಹಾಭಿಯೋಗ) ವಿಧಿಸಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ಮಾಡಿದ್ದ ಶಿಫಾರಸು ಪ್ರಶ್ನಿಸಿ ಅಲಾಹಾಬಾದ್‌ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಘಟನೆಯ ತನಿಖೆಗೆ ಆಂತರಿಕ ಸಮಿತಿಯ ರಚನೆ ಮಾಡಿದ್ದು ಹಾಗೂ ತಾನು ಅನುಸರಿಸಿದ ಕಾರ್ಯವಿಧಾನವು ಕಾನೂನುಬಾಹಿರವಲ್ಲ ಎಂದು ನ್ಯಾಯಾಲಯ ತಿಳಿಸಿದೆ. “ಫೋಟೋಗಳು ಮತ್ತು ವಿಡಿಯೋ ಪ್ರಸಾರ ಮಾಡಿದ್ದನ್ನು ಹೊರತುಪಡಿಸಿ (ಆಂತರಿಕ ವಿಚಾರಣೆ) ಪ್ರಕ್ರಿಯೆಯನ್ನು ಮುಖ್ಯ ನ್ಯಾಯಮೂರ್ತಿಗಳು ಮತ್ತು ಆಂತರಿಕ ಸಮಿತಿ ಕಟ್ಟುನಿಟ್ಟಾಗಿ ಪಾಲಿಸಿದೆ. ಫೋಟೊ ಮತ್ತು ವಿಡಿಯೋ ಪ್ರಸಾರ ಮಾಡುವುದು ಅಗತ್ಯವಿರಲಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಆದರೆ ನೀವು ಆಗ ಅದನ್ನು ಪ್ರಶ್ನಿಸದ ಕಾರಣ ಅದನ್ನು ಏನೂ ಮಾಡಲಿಲ್ಲ. ಸಿಜೆಐ ಅವರು ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಕಳುಹಿಸುವುದು ಅಸಾಂವಿಧಾನಿಕವಲ್ಲ. ಭವಿಷ್ಯದಲ್ಲಿ ಅಗತ್ಯಬಿದ್ದಲ್ಲಿ, ನೀವು ವಿಚಾರಣಾ ಪ್ರಕ್ರಿಯೆಗೆ ಮುಂದಾಗಲು ಅಗತ್ಯವಾಗುವಂತೆ ಮುಕ್ತವಾಗಿರಿಸಿ ಕೆಲವೊಂದು ಅವಲೋಕನಗಳನ್ನು ನಾವು ಮಾಡಿದ್ದೇವೆ. ಇದರೊಂದಿಗೆ ರಿಟ್ ಅರ್ಜಿ ವಜಾಗೊಳಿಸಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.
ಆಂತರಿಕ ವ್ಯವಸ್ಥೆಯಡಿಯಲ್ಲಿನ ಹಾಲಿ ನ್ಯಾಯಮೂರ್ತಿಗಳ ನಡೆಯನ್ನು ಪ್ರಶ್ನಿಸುವ ರಿಟ್‌ ಅರ್ಜಿಯು ಊರ್ಜಿತವಾಗುವುದಿಲ್ಲ. ಆಂತರಿಕ ಪ್ರಕ್ರಿಯೆಗೆ ಕಾನೂನು ಪಾವಿತ್ರ್ಯ ಇದ್ದು ಸಾಂವಿಧಾನಿಕ ಚೌಕಟ್ಟಿನಾಚೆಗಿನ ಪ್ರಕ್ರಿಯೆಯಲ್ಲ. ಅರ್ಜಿದಾರರ (ನ್ಯಾಯಮೂರ್ತಿ ವರ್ಮಾ) ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಫೋಟೋಗಳು ಮತ್ತು ವಿಡಿಯೋ ಪ್ರಸಾರ ಮಾಡಿದ್ದನ್ನು ಹೊರತುಪಡಿಸಿ ಆಂತರಿಕ ವಿಚಾರಣೆ ಪ್ರಕ್ರಿಯೆಯನ್ನು ಸಿಜೆಐ ಮತ್ತು ಆಂತರಿಕ ಸಮಿತಿ ಕಟ್ಟುನಿಟ್ಟಾಗಿ ಪಾಲಿಸಿದೆ. ವರದಿಯನ್ನು ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸುವುದು ಕೂಡ ಸಂವಿಧಾನಬಾಹಿರವಲ್ಲ ಎಂದು ಹೇಳಿದೆ.
ಭವಿಷ್ಯದಲ್ಲಿ ಅಗತ್ಯವಿದ್ದರೆ ದೂರುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ನ್ಯಾ. ವರ್ಮಾ ಅವರಿಗೆ ಅವಕಾಶಗಳನ್ನು ನ್ಯಾಯಾಲಯವು ಕಲ್ಪಿಸಿದೆ. ಫೋಟೋಗಳು ಮತ್ತು ವಿಡಿಯೋ ಪ್ರಸಾರ ಮಾಡಿದ್ದನ್ನು ಹೊರತುಪಡಿಸಿ ಆಂತರಿಕ ವಿಚಾರಣೆ ಪ್ರಕ್ರಿಯೆಯನ್ನು ಸಿಜೆಐ ಮತ್ತು ಆಂತರಿಕ ಸಮಿತಿ ಸೂಕ್ಷ್ಮವಾಗಿ ಪಾಲಿಸಿದೆ ಎಂದು ಹೇಳಿದೆ.
ತಮ್ಮ ಅರ್ಜಿಯಲ್ಲಿ ನ್ಯಾ. ವರ್ಮಾ ಅವರು, ಮಾಜಿ ಸಿಜೆಐ ಸಂಜೀವ್ ಖನ್ನಾ ಅವರು ತಮ್ಮ ಪದಚ್ಯುತಿಗೆ ಮಾಡಿದ್ದ ಶಿಫಾರಸ್ಸನ್ನು ಅಸಾಂವಿಧಾನಿಕ ಹಾಗೂ ಕಾನೂನಿಗೆ ವಿರುದ್ಧವಾದದ್ದು ಎಂದು ಘೋಷಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಅಲ್ಲದೆ, ಸಿಜೆಐ ಅವರು ತಮ್ಮ ಪದಚ್ಯುತಿಗೆ ಶಿಫಾರಸ್ಸು ಮಾಡಲು ಆಧರಿಸಿದ್ದ ಆಂತರಿಕ ಸಮಿತಿಯ ವರದಿಯನ್ನು ಅವರು ಪ್ರಶ್ನಿಸಿದ್ದರು.
ತಮ್ಮ ಗುರುತನ್ನು ಬಹಿರಂಗಪಡಿಸದಂತೆ ಅನಾಮಧೇಯ ಹೆಸರಿನಲ್ಲಿ (XXX) ಅರ್ಜಿಯನ್ನು ಸಲ್ಲಿಸಿದ ನ್ಯಾಯಾಧೀಶರು, ವಿಚಾರಣೆಯು ಕಾರ್ಯವಿಧಾನದ ದೋಷಪೂರಿತವಾಗಿದೆ ಮತ್ತು ಔಪಚಾರಿಕ ದೂರು ಇಲ್ಲದೆ ಕೇವಲ ಊಹಿಸಬಹುದಾದ ಪ್ರಶ್ನೆಗಳನ್ನು ಆಧರಿಸಿದೆ ಎಂದು ಹೇಳಿದ್ದರು.
ಮಾರ್ಚ್ 14 ರಂದು ದೆಹಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಾಗ ಸುಮಾರು 1.5 ಅಡಿಗಿಂತ ಹೆಚ್ಚಿನ ನಗದು ರಾಶಿಗಳು ಪತ್ತೆಯಾಗಿದ್ದವು. ಆಗ ನ್ಯಾಯಾಧೀಶರು ಅವರ ನಿವಾಸದಲ್ಲಿ ಇರಲಿಲ್ಲ.
ಈ ಪ್ರಕರಣದ ನಂತರ ಸುಪ್ರೀಂ ಕೋರ್ಟ್ ಸ್ಥಾಪಿಸಿದ ಆಂತರಿಕ ವಿಚಾರಣಾ ಸಮಿತಿಯು, ಆರೋಪಗಳಲ್ಲಿ “ಸಾಕಷ್ಟು ವಿಷಯ” ಇದೆ ಎಂಬುದು ಕಂಡುಬಂದಿದೆ ಎಂದು ಹೇಳಿದೆ. ನ್ಯಾಯಮೂರ್ತಿ ವರ್ಮಾ ಮತ್ತು ಅವರ ಕುಟುಂಬ ಸದಸ್ಯರು ನಗದು ಪತ್ತೆಯಾದ ಕೋಣೆಯ ಮೇಲೆ ಸಕ್ರಿಯ ನಿಯಂತ್ರಣ ಹೊಂದಿದ್ದಾರೆ ಎಂದು ತೀರ್ಮಾನಿಸಿತು ಮತ್ತು ಅವರನ್ನು ತೆಗೆದುಹಾಕಲು ಶಿಫಾರಸು ಮಾಡಿತು.
ಸುಪ್ರೀಂ ಕೋರ್ಟ್ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿತು ಮತ್ತು ಅವರಿಂದ ಎಲ್ಲಾ ನ್ಯಾಯಾಂಗ ಕೆಲಸಗಳನ್ನು ಹಿಂತೆಗೆದುಕೊಂಡಿತು.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement