7 ದಿನದಲ್ಲಿ ಅಫಿಡವಿಟ್ ಕೊಡಿ ಇಲ್ಲವೇ ಕ್ಷಮೆಯಾಚಿಸಿ :’ಮತಗಳ್ಳತನ’ ಆರೋಪಕ್ಕೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗದ ಸೂಚನೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ “ಮತಗಳ್ಳತನ” ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು ಭಾನುವಾರ ಅವರಿಗೆ ಏಳು ದಿನಗಳ ಗಡುವು ನೀಡಿದ್ದು, ಅಫಿಡವಿಟ್‌ ನೀಡಬೇಕು ಇಲ್ಲದಿದ್ದರೆ ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದೆ.
ಅವರು “ಅಫಿಡವಿಟ್ ನೀಡಬೇಕು ಅಥವಾ ದೇಶಕ್ಕೆ ಕ್ಷಮೆಯಾಚಿಸಬೇಕು. ಮೂರನೇ ಆಯ್ಕೆ ಇಲ್ಲ. 7 ದಿನಗಳಲ್ಲಿ ಅಫಿಡವಿಟ್ ಸ್ವೀಕರಿಸದಿದ್ದರೆ, ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದರ್ಥ” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಭಾನುವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತರು, ಡಬಲ್ ವೋಟಿಂಗ್ ಮತ್ತು “ಮತ ಕಳ್ಳತನ”ದ ಆರೋಪಗಳನ್ನು ಆಧಾರರಹಿತವೆಂದು ತಿರಸ್ಕರಿಸಿದರು. ಮತ್ತು ಎಲ್ಲಾ ಪಾಲುದಾರರು ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಪಾರದರ್ಶಕ ರೀತಿಯಲ್ಲಿ ಯಶಸ್ವಿಯಾಗಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದರು.

ರಾಹುಲ್‌ ಗಾಂಧಿಯವರ ಹೇಳಿಕೆಗಳನ್ನು “ಸಂವಿಧಾನಕ್ಕೆ ಅವಮಾನ” ಎಂದು ಕರೆದ ಅವರು, “ಮತಗಳ್ಳತನ”ದಂತಹ ಪದಗಳು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತವೆ. ರಾಜಕೀಯ ಲಾಭಕ್ಕಾಗಿ ಮತದಾರರನ್ನು ಗುರಿಯಾಗಿಸಲು ಚುನಾವಣಾ ಆಯೋಗವನ್ನು ವೇದಿಕೆಯಾಗಿ ಬಳಸುತ್ತಿದೆ ಎಂದು ಜ್ಞಾನೇಶಕುಮಾರ ಆರೋಪಿಸಿದರು.
ಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕು ಹಿಡಿದು ಭಾರತದ ಮತದಾರರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿರುವಾಗ, ಚುನಾವಣಾ ಆಯೋಗವು ಎಲ್ಲರಿಗೂ ಸ್ಪಷ್ಟಪಡಿಸಲು ಬಯಸುತ್ತದೆ. ಬಡವರು, ಶ್ರೀಮಂತರು, ವೃದ್ಧರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ವಿಭಾಗಗಳ ಮತ್ತು ಎಲ್ಲಾ ಧರ್ಮಗಳ ಎಲ್ಲಾ ಮತದಾರರ ಮುಂದೆ ಚುನಾವಣಾ ಆಯೋಗವು ನಿರ್ಭಯವಾಗಿ ಬಂಡೆಯಂತೆ ನಿಂತಿದೆ. ಯಾವುದೇ ತಾರತಮ್ಯವಿಲ್ಲದೆ ನಿಂತಿದೆ ಮತ್ತು ನಿಲ್ಲುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಡಬಲ್ ಮತದಾನದ ಕ್ಲೇಮುಗಳಿಗೆ ಪ್ರತಿಕ್ರಿಯಿಸಿದ ಜ್ಞಾನೇಶಕುಮಾರ, ಕೆಲವು ಮತದಾರರು ಕಳವಳ ವ್ಯಕ್ತಪಡಿಸಿದ್ದರೂ, ಯಾವುದೇ ಪುರಾವೆಗಳನ್ನು ಒದಗಿಸಲಾಗಿಲ್ಲ ಎಂದು ಹೇಳಿದರು. “ಚುನಾವಣಾ ಆಯೋಗವಾಗಲಿ ಅಥವಾ ಭಾರತದ ಮತದಾರರಾಗಲಿ ಅಂತಹ ಸುಳ್ಳು ಆರೋಪಗಳಿಗೆ ಹೆದರುವುದಿಲ್ಲ” ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ತಮ್ಮಿಂದ ಮಾತ್ರ ಅಫಿಡವಿಟ್ ಕೇಳುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದ ಕೆಲವೇ ಗಂಟೆಗಳ ನಂತರ ಈ ಹೇಳಿಕೆಗಳು ಬಂದವು. ಬಿಹಾರದ ಸಸಾರಾಮ್‌ನಲ್ಲಿ ತಮ್ಮ ಮತದಾರರ ಅಧಿಕಾರ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಗಾಂಧಿಯವರು, ಆಯೋಗವನ್ನು ಆಯ್ದ ನಡವಳಿಕೆ ಬಗ್ಗೆ ಆರೋಪಿಸಿದರು.

“ಮತ ಕಳ್ಳತನದ ಕುರಿತು ನಾನು ಪತ್ರಿಕಾಗೋಷ್ಠಿ ನಡೆಸಿದಾಗ, ಚುನಾವಣಾ ಆಯೋಗವು ನನ್ನಿಂದ ಅಫಿಡವಿಟ್ ಕೇಳಿತು. ಆದರೆ ಕೆಲವು ದಿನಗಳ ಹಿಂದೆ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿದಾಗ, ಅವರಿಂದ ಯಾವುದೇ ಅಫಿಡವಿಟ್ ಕೇಳಲಾಗಿಲ್ಲ. ‘ನಿಮ್ಮ ಡೇಟಾ ಸರಿಯಾಗಿದೆ ಎಂದು ಅಫಿಡವಿಟ್ ಸಲ್ಲಿಸಿ’ ಎಂದು ಆಯೋಗ ಹೇಳುತ್ತದೆ. ಈ ಡೇಟಾ ಚುನಾವಣಾ ಆಯೋಗಕ್ಕೆ ಸೇರಿದೆ. ನನ್ನಿಂದ ಅಫಿಡವಿಟ್ ಏಕೆ ಕೇಳಲಾಗುತ್ತಿದೆ?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಆರೋಪಿತ ಚುನಾವಣಾ ಅಕ್ರಮಗಳನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿರುವ ಮತದಾರರ ಅಧಿಕಾರ ಯಾತ್ರೆಯು ಚುನಾವಣೆ ನಡೆಯಲಿರುವ ಬಿಹಾರದ 20 ಕ್ಕೂ ಹೆಚ್ಚು ಜಿಲ್ಲೆಗಳನ್ನು ಒಳಗೊಂಡಿದೆ. ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಆರ್‌ಜೆಡಿ ನಾಯಕರಾದ ಲಾಲುಪ್ರಸಾದ ಯಾದವ್ ಮತ್ತು ತೇಜಸ್ವಿ ಯಾದವ್ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement