ಹಿಂಸಾಚಾರ ಪೀಡಿತ ನೇಪಾಳದಿಂದ ಹೊರಹೊಮ್ಮಿದ ಕೆಲವು ವೀಡಿಯೊ ದೃಶ್ಯಗಳಲ್ಲಿ, ಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರು ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡ ಪಲಾಯನ ಮಾಡಲು ಸೇನಾ ಹೆಲಿಕಾಪ್ಟರ್ನ ರಕ್ಷಣಾ ಜೋಲಿ ಹಿಡಿದುಕೊಂಡು ನೇತಾಡಿರುವುದು ಕಂಡುಬಂದಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ಅಲ್ಪಾವಧಿಯ ನಿಷೇಧವು ಕಠ್ಮಂಡುವಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದ್ದು, ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ನೇಪಾಳ ಸೈನಿಕರು ಕಠ್ಮಂಡುವಿನ ಬೀದಿಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಿಂಸಾಚಾರ ಮತ್ತು ಅವ್ಯವಸ್ಥೆಯಿಂದ ಕೂಡಿದ್ದ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಜನರಿಗೆ ಮನೆಯಲ್ಲಿಯೇ ಇರಲು ಆದೇಶಿಸಿದ್ದಾರೆ.
ಮಂಗಳವಾರ, ‘ಜನರಲ್ ಝಡ್’ ಪ್ರತಿಭಟನಾಕಾರರ ನೇತೃತ್ವದಲ್ಲಿ ಹತ್ತಾರು ಸಾವಿರ ಜನರ ಸಮೂಹ ಹಲವಾರು ಸರ್ಕಾರಿ ಅಧಿಕಾರಿಗಳು, ಸಚಿವರ ಮನೆಗಳನ್ನು ಧ್ವಂಸ ಮಾಡಿ ಸಂಸತ್ತಿನ ಕಟ್ಟಡಕ್ಕೆ ಬೆಂಕಿ ಹಚ್ಚಿತು. ಅವರು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಅವರ ಮನೆಗೆ ಬೆಂಕಿ ಹಚ್ಚಿದರು, ಉಪ ಪ್ರಧಾನಿ ಮತ್ತು ಹಣಕಾಸು ಸಚಿವ ಬಿಷ್ಣು ಪೌಡೆಲ್ ಅವರ ನಿವಾಸದ ಮೇಲೆ ಕಲ್ಲು ತೂರಿದರು, ನೇಪಾಳ ರಾಷ್ಟ್ರೀಯ ಬ್ಯಾಂಕ್ ಗವರ್ನರ್ ಬಿಸ್ವೋ ಪೌಡೆಲ್ ಮತ್ತು ಮಾಜಿ ಗೃಹ ಸಚಿವ ರಮೇಶ ಲೇಖಕ್ ಅವರ ಮನೆಯ ಮೇಲೆ ದಾಳಿ ಮಾಡಿದರು.
ಒಂದು ವೀಡಿಯೊದಲ್ಲಿ ನೇಪಾಳ ಹಣಕಾಸು ಸಚಿವರನ್ನು ಬೀದಿಯಲ್ಲಿ ಓಡಿಸಿ ಪ್ರತಿಭಟನಾಕಾರರು ಒದೆಯುತ್ತಿರುವುದನ್ನು ತೋರಿಸಲಾಗಿದೆ. ಇನ್ನೊಂದು ವೀಡಿಯೊದಲ್ಲಿ ನೇಪಾಳದ ವಿದೇಶಾಂಗ ಸಚಿವೆ ಆರ್ಜು ರಾಣಾ ಡ್ಯೂಬಾ ಮತ್ತು ಅವರ ಪತಿ, ಮಾಜಿ ಪ್ರಧಾನಿ ಮತ್ತು ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ಡ್ಯೂಬಾ ಅವರ ಮೇಲೆ ಕಾಠ್ಮಂಡುವಿನ ಮನೆಯಲ್ಲಿ ಗುಂಪೊಂದು ದಾಳಿ ಮಾಡುವುದನ್ನು ತೋರಿಸಲಾಗಿದೆ.
ಈ ಮಧ್ಯೆ ಸೇನಾ ಹೆಲಿಕಾಪ್ಟರ್ಗಳು ಕೆಲವು ಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾದವು.
ಒಂದು ವೀಡಿಯೊದಲ್ಲಿ, ಡ್ಯೂಬಾ ಅವರ ಮುಖದಿಂದ ರಕ್ತಸ್ರಾವವಾಗುತ್ತಿದ್ದು, ಅವರನ್ನು ರಕ್ಷಿಸಲು ಅಧಿಕಾರಿಗಳು ಸ್ಥಳಕ್ಕೆ ಬರುವ ಮೊದಲು ಹೊಲದಲ್ಲಿ ಅಸಹಾಯಕರಾಗಿ ಕುಳಿತಿರುವುದು ಕಂಡುಬಂದಿದೆ. ಮತ್ತೊಂದು ವೀಡಿಯೊದಲ್ಲಿ ಹೆಲಿಕಾಪ್ಟರ್ ಕೆಲವು ಅಧಿಕಾರಿಗಳನ್ನು ರಕ್ಷಿಸುತ್ತಿರುವುದನ್ನು ತೋರಿಸಲಾಗಿದೆ.
ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ನಂತರ ಕಾರ್ಯಪ್ರವೃತ್ತರಾದ ಸೈನಿಕರು ಅವರ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ತಡೆದರು ಹಾಗೂ ಅವರನ್ನು ಮತ್ತು ಕೈದಿಗಳನ್ನು ವಿವಿಧ ಜೈಲುಗಳಿಗೆ ವರ್ಗಾಯಿಸಿದರು.
ಸರ್ಕಾರವು ಫೇಸ್ಬುಕ್, ಎಕ್ಸ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರ್ಬಂಧಿಸಿದ ನಂತರ ಪ್ರತಿಭಟನೆಗಳು ಪ್ರಾರಂಭವಾದವು, ಆ ಕಂಪನಿಗಳು ತಮ್ಮನ್ನು ನೋಂದಾಯಿಸಿಕೊಳ್ಳಲು ಮತ್ತು ಸರ್ಕಾರದ ಮೇಲ್ವಿಚಾರಣೆಗೆ ಒಳಪಡಲು ವಿಫಲವಾಗಿವೆ ಎಂದು ಸರ್ಕಾರ ಹೇಳಿತು. ಸರ್ಕಾರದಲ್ಲಿನ ವ್ಯಾಪಕ ಭ್ರಷ್ಟಾಚಾರದ ವಿರುದ್ಧ ಕಳೆದ ಕೆಲವು ದಿನಗಳಿಂದ ಕುದಿಯುತ್ತಿದ್ದ ಆಕ್ರೋಶ ಭುಗಿಲೆದ್ದಿತು.
ನೆಪೋ ಮಕ್ಕಳು ಎಂದು ಕರೆಯಲ್ಪಡುವ ರಾಜಕೀಯ ನಾಯಕರ ಮಕ್ಕಳು ಐಷಾರಾಮಿ ಜೀವನಶೈಲಿ ಮತ್ತು ಹಲವಾರು ಪ್ರಯೋಜನಗಳನ್ನು ಪಡೆಯುತ್ತಿರುವುದರ ಬಗ್ಗೆ ಯುವ ಸಮೂಹ ಕೋಪಗೊಂಡಿದೆ, ಯಾಕೆಂದರೆ ಹೆಚ್ಚಿನ ಯುವಕರು ಕೆಲಸ ಹುಡುಕಲು ಹೆಣಗಾಡುತ್ತಿದ್ದಾರೆ. ವಿಶ್ವಬ್ಯಾಂಕ್ ಪ್ರಕಾರ, ಕಳೆದ ವರ್ಷ ಸುಮಾರು 20 ಪ್ರತಿಶತದಷ್ಟು ಯುವ ನಿರುದ್ಯೋಗ ಇರುವ ನೇಪಾಳದಿಂದ ಮಧ್ಯಪ್ರಾಚ್ಯ ಅಥವಾ ಆಗ್ನೇಯ ಏಷ್ಯಾದಲ್ಲಿ ಕೆಲಸ ಹುಡುಕಲು ಪ್ರತಿದಿನ 2,000 ಕ್ಕೂ ಹೆಚ್ಚು ಯುವಕರು ದೇಶವನ್ನು ತೊರೆಯುತ್ತಾರೆ ಎಂದು ಸರ್ಕಾರ ಅಂದಾಜಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ