
ಶಿರಸಿ: ಅಡಕೆಗೆ ತಗುಲಿದ ಎಲೆಚುಕ್ಕೆ ರೋಗ ನಿವಾರಣೆ ಸಂಬಂಧ ವೃಕ್ಷೋತ್ಪಾತ ಶಾಂತಿ ಹವನವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶ್ರೀಕ್ಷೇತ್ರ, ಕರ್ನಾಟಕದ ತಿರುಪತಿ ಮಂಜುಗುಣಿಯ ಶ್ರೀವೇಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನೆರವೇರಿತು.
ಶ್ರೀದೇವರ ಸನ್ನಿಧಾನದಲ್ಲಿ ಸ್ವರ್ಣಪಾದುಕೆ ಹಾಗೂ ಕ್ಷೀರಭಸ್ಮಕ್ಕೆ ಪೂಜೆಯ ಜೊತೆಗೆ ರೋಗ ನಿವಾರಣೆಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ಭಟ್ಟರು ಮಾಡಿಕೊಂಡರು. ಬಂದಂತಹ ಎಲ್ಲ ತೋಟಿಗರಿಗೆ, ಶ್ರೀ ದೇವರ ಉದ್ಭವ ಸ್ಥಾನ ಗಿಳಿಗುಂಡಿಯಲ್ಲಿ ದೊರಕುವ ಕ್ಷೀರಭಸ್ಮ, ಹಾಗೂ ರಕ್ಷಾಮಂತ್ರಾಕ್ಷತೆಯನ್ನು ಜಮೀನಿಗೆ ಹಾಕಲು ನೀಡಲಾಯಿತು.

ಅದೇ ರೀತಿ ರೋಗ ನಿವಾರಣೆಗಾಗಿ ಮರಕ್ಕೊಂದು ಅಡಕೆಯಂತೆ, 1 ಎಕರೆಗೆ ಅಂದಾಜು 3 ಕೆಜಿ ಅಡಕೆಯನ್ನು ಸಮರ್ಪಿಸುವುದರ ಜೊತೆಗೆ
ತೆಂಗಿನಕಾಯಿ, ಅಡಕೆ ಹಾಗೂ ನಾಣ್ಯದಿಂದ ಶ್ರೀದೇವರಿಗೆ ಪ್ರತ್ಯೇಕ ಮೂರು ತುಲಾಭಾರ ಹಾಗೂ ಪೂಗ ಪುಷ್ಪ (ಸಿಂಗಾರ) ರಥೋತ್ಸವ ಸೇರಿ ಒಟ್ಟು ಮೂರು ಹರಕೆಗಳನ್ನು ಶ್ರೀದೇವರಿಗೆ ಇದೇ ವೇಳೆ ಹೇಳಿಕೊಳ್ಳಲಾಯಿತು.
ಪ್ರಾರ್ಥನೆ ಮಾಡಿದ ಹರಕೆಯನ್ನು 2027ನೇ ಇಸವಿ ಪರಾಭವ ಸಂವತ್ಸರದ ಮಾಘ ಮಾಸದ ಒಳಗೆ ಸಮರ್ಪಿಸುವುದು ಎಂಬುದಾಗಿ ಭಗವಂತನಲ್ಲಿ ಅರಿಕೆ ಮಾಡಲಾಯಿತು. ಸುಮಾರು ಸಾವಿರಕ್ಕೂ ಅಧಿಕ ತೋಟಿಗರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ