ನವದೆಹಲಿ: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡುವ ಕರ್ನಾಟಕದ ಯೋಜನೆಯ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ನವೆಂಬರ್ 13) ವಜಾಗೊಳಿಸಿದೆ.
ತಮಿಳುನಾಡು ಸಲ್ಲಿಸಿದ್ದ ಮೊದಲ ಅರ್ಜಿಯಲ್ಲಿ, ಮೇಕೆದಾಟು ಯೋಜನೆಗೆ ವಿವರವಾದ ಯೋಜನಾ ವರದಿ (DPR) ತಯಾರಿಸಲು ಕೇಂದ್ರ ಜಲ ಆಯೋಗವು ದಿನಾಂಕ 22.11.2018 ರ ಪತ್ರದ ಮೂಲಕ ನೀಡಿದ ಅನುಮತಿಯನ್ನು ಪ್ರಶ್ನಿಸಲಾಗಿತ್ತು. ಎರಡನೇ ಅರ್ಜಿಯು ಮೇಕೆದಾಟು ಯೋಜನೆಯ ಅನುಷ್ಠಾನದ ವಿರುದ್ಧವಾಗಿದ್ದು, ಕರ್ನಾಟಕ ರಾಜ್ಯ ಸಲ್ಲಿಸಿದ ಡಿಪಿಆರ್ ಅನ್ನು ಹಿಂದಿರುಗಿಸುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಕೆ. ವಿನೋದ ಚಂದ್ರನ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು, ಮೇಕೆದಾಟು ಅಣೆಕಟ್ಟಿನ ಡಿಪಿಆರ್ ತಯಾರಿಕೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗ (CWC) ನೀಡಿದ ಆದೇಶವನ್ನು ತಮಿಳುನಾಡು ಪ್ರಶ್ನಿಸಿದ್ದು “ಅಕಾಲಿಕ” (premature) ಎಂದು ಅಭಿಪ್ರಾಯಪಟ್ಟಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಯೋಜನೆಯು ರಾಜ್ಯದ ಆಕ್ಷೇಪಣೆಗಳು ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಯಂತಹ ತಜ್ಞ ಸಂಸ್ಥೆಗಳ ಅಭಿಪ್ರಾಯವನ್ನು ಪರಿಗಣಿಸಿದ ನಂತರವೇ ಅನುಮೋದನೆಗೊಳ್ಳುತ್ತದೆ ಎಂದು ನ್ಯಾಯಪೀಠ ಹೇಳಿದೆ.
“ಈ ಹಂತದಲ್ಲಿ, ಸಿಡಬ್ಲ್ಯೂಸಿ ಹೊರಡಿಸಿದ ಆದೇಶದ ಪ್ರಕಾರ, ಕೇವಲ ಡಿಪಿಆರ್ ತಯಾರಿಕೆ ಮಾತ್ರ ನಡೆಯುತ್ತಿದೆ. ಅದು ಕೂಡ ತಮಿಳುನಾಡು ರಾಜ್ಯದ ಆಕ್ಷೇಪಣೆಗಳನ್ನು ಮತ್ತು ಸಿಡಬ್ಲ್ಯೂಎಂಎ ಹಾಗೂ ಸಿಡಬ್ಲ್ಯೂಆರ್ಸಿ ತಜ್ಞರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡ ನಂತರ. ಡಿಪಿಆರ್ ಅನ್ನು ಪರಿಗಣಿಸಲು ಸಿಡಬ್ಲ್ಯೂಎಂಎ ಮತ್ತು ಸಿಡಬ್ಲ್ಯೂಆರ್ಸಿ ಯ ಪೂರ್ವಾನುಮೋದನೆಯು ಪೂರ್ವಾಪೇಕ್ಷಿತವಾಗಿರುತ್ತದೆ ಎಂದು ಸಿಡಬ್ಲ್ಯೂಸಿ ಮತ್ತಷ್ಟು ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಅರ್ಜಿಯು ಅಕಾಲಿಕವಾಗಿದೆ ಎಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.
ನ್ಯಾಯಾಲಯವು ತಜ್ಞರ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಪೀಠ ಪುನರುಚ್ಚರಿಸಿತು ಮತ್ತು “ತಜ್ಞರಿಗೆ ಮೀಸಲಾದ ಕ್ಷೇತ್ರಗಳಿಂದ ನ್ಯಾಯಾಲಯವು ದೂರವಿರಬೇಕು” ಎಂದು ಹೇಳಿರುವ ತನ್ನ ಹಿಂದಿನ ಆದೇಶವನ್ನು ಉಲ್ಲೇಖಿಸಿತು.
“ಯೋಜನೆಯನ್ನು ಸಿಡಬ್ಲ್ಯೂಸಿ ಪರಿಗಣಿಸಬೇಕಾದರೆ, ಸಿಡಬ್ಲ್ಯೂಎಂಎ ಅನುಮೋದನೆ ನೀಡಿದ ನಂತರವೇ ಪರಿಗಣಿಸಲಾಗುತ್ತದೆ. ತಜ್ಞ ಸಂಸ್ಥೆಗಳು ಈ ವಿಷಯವನ್ನು ಪರಿಶೀಲಿಸುತ್ತಿರುವಾಗ, ಪ್ರಸ್ತುತ ಅರ್ಜಿಯು ಅಕಾಲಿಕವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.
ಒಂದು ವೇಳೆ ಡಿಪಿಆರ್ ಅನ್ನು ಸಿಡಬ್ಲ್ಯೂಸಿ ಅನುಮೋದಿಸಿದರೆ, ಅದನ್ನು ಕಾನೂನಿನಲ್ಲಿ ಅನುಮತಿಸಿದಂತೆ ಪ್ರಶ್ನಿಸಲು ತಮಿಳುನಾಡು ಮುಕ್ತವಾಗಿರುತ್ತದೆ ಎಂದು ನ್ಯಾಯಾಲಯ ಸೇರಿಸಿದೆ.
ತಮಿಳುನಾಡು ರಾಜ್ಯದ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು, ಉದ್ದೇಶಿತ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯು ತಮ್ಮ ಜೀವನೋಪಾಯಕ್ಕಾಗಿ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿರುವ ತಮಿಳುನಾಡಿನ ರೈತರಿಗೆ ಹಾನಿಕಾರಕವಾಗಿದೆ ಎಂದು ವಾದಿಸಿದರು.
ಕರ್ನಾಟಕ ರಾಜ್ಯದ ಪರವಾಗಿ ಹಾಜರಾದ ಹಿರಿಯ ವಕೀಲರಾದ ಶ್ಯಾಮ ದಿವಾನ್, ಮೋಹನ್ ಕಾತರಕಿ ಮತ್ತು ಅಡ್ವೊಕೇಟ್ ಜನರಲ್ ಶಶಿ ಕಿರಣ ಶೆಟ್ಟಿ ಅವರು, ತಮಿಳುನಾಡು ರಾಜ್ಯದ ಅರ್ಜಿಯು ‘ತಪ್ಪು ಕಲ್ಪನೆಯ ಅರ್ಜಿ’ (misconceived application) ಎಂದು ವಾದಿಸಿದರು. ಸೂಕ್ತ ಅನುಮತಿಗಳಿಗೆ ಒಳಪಟ್ಟು, ಜಲಾಶಯ ಯೋಜನೆಯೊಂದಿಗೆ ಮುಂದುವರಿಯಲು ಕರ್ನಾಟಕಕ್ಕೆ ಹಕ್ಕಿದೆ ಎಂದು ಅವರು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ