ಬೆಂಗಳೂರು: ವೃತ್ತಿಯಲ್ಲಿ ವೈದ್ಯರಾಗಿರುವ ಬೆಳಗಾವಿ ಜಿಲ್ಲೆಯ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರು ಗೋವಾ-ನವದೆಹಲಿ ವಿಮಾನ ಹಾರಾಟದ ವೇಳೆ ತೀವ್ರ ಅಸ್ವಸ್ಥೆಗೆ ಒಳಗಾಗಿದ್ದ ಅಮೆರಿಕಾದ ಮಹಿಳಾ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದ್ದಾರೆ.
ಡಾ. ನಿಂಬಾಳ್ಕರ್ ಅವರು, ಭಾನುವಾರ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ “ವೋಟ್ ಚೋರಿ” ರ್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಪ್ರಸ್ತುತ ಗೋವಾ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿಯ ಎಐಸಿಸಿ ಕಾರ್ಯದರ್ಶಿ ಸಹ-ಪ್ರಭಾರಿಯಾಗಿದ್ದಾರೆ.
ವಿಮಾನದಲ್ಲಿ ಸಹ ಪ್ರಯಾಣಿಕರಾದ ಅಮೆರಿಕನ್ ಮಹಿಳೆ ಆಯಾಸ ಮತ್ತು ನಡುಕದ ತೊಂದರೆ ಅನುಭವಿಸಿದರು, ತಕ್ಷಣವೇ ಅವರ ಪ್ರಜ್ಞೆ ತಪ್ಪಿ ಅವರ ನಾಡಿಮಿಡಿತ ನಿಂತುಹೋಯಿತು. ತಕ್ಷಣವೇ ಡಾ. ನಿಂಬಾಳ್ಕರ್ ಅವರು ವೈದ್ಯಕೀಯ ಸಹಾಯಕ್ಕೆ ಧಾವಿಸಿ, ಮಹಿಳೆಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಅನ್ನು ನಿರ್ವಹಿಸಿ, ಅವರ ಪ್ರಾಣ ಉಳಿಸಿದರು.
ವಿಮಾನ ಇಳಿಯುವವರೆಗೂ ಡಾ. ನಿಂಬಾಳ್ಕರ್ ಅವರು ಆ ಮಹಿಳೆಯ ವೈದ್ಯಕೀಯ ಅಗತ್ಯಗಳನ್ನು ನೋಡಿಕೊಳ್ಳುತ್ತಾ ಅವರ ಬಳಿಯೇ ಇದ್ದರು ಎಂದು ವರದಿಗಳು ತಿಳಿಸಿವೆ.
ದೆಹಲಿಯಲ್ಲಿ ವಿಮಾನದಿಂದ ಇಳಿದ ತಕ್ಷಣ, ಅಸ್ವಸ್ಥರಾಗಿದ್ದ ಆ ವಿದೇಶಿ ಪ್ರಯಾಣಿಕರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.
ಡಾ. ನಿಂಬಾಳ್ಕರ್ ಅವರ ಈ ಸಮಯೋಚಿತ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅವರು ಡಾ. ಅಂಜಲಿ ನಿಂಬಾಳ್ಕರ್ ಅವರ ಮಾನವೀಯ ಕಾರ್ಯವನ್ನು ‘X’ ನಲ್ಲಿ ಶ್ಲಾಘಿಸಿದ್ದಾರೆ.
“ಗೋವಾ-ನವದೆಹಲಿ ವಿಮಾನದಲ್ಲಿ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ತೋರಿದ ಮೆಚ್ಚುವಂತಹ ವಿವೇಚನೆ ಮತ್ತು ಸಹಾನುಭೂತಿಯ ಬಗ್ಗೆ ಕೇಳಿ ನನಗೆ ಅತೀವ ಸಂತೋಷವಾಗಿದೆ ಮತ್ತು ಹೆಮ್ಮೆಯೆನಿಸಿದೆ. ವಿಮಾನದ ಹಾರಾಟದ ಮಧ್ಯದಲ್ಲಿ ಅಮೆರಿಕನ್ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ತೊಂದರೆ ಉಂಟಾದಾಗ, ಡಾ. ಅಂಜಲಿ ಅವರು ತಕ್ಷಣವೇ ಅದಕ್ಕೆ ಸ್ಪಂದಿಸಿ, ಸಮಯಕ್ಕೆ ಸರಿಯಾಗಿ ಸಿಪಿಆರ್ ನೀಡುವ ಮೂಲಕ ಅಮೂಲ್ಯ ಜೀವವನ್ನು ಉಳಿಸಿದ್ದಾರೆ ಎಂದು ಸಿದ್ದರಾಮಯ್ಯ ಬರೆದಿದ್ದಾರೆ.
“ಅವರು ವೈದ್ಯಕೀಯ ವೃತ್ತಿಯಿಂದ ದೂರ ಸರಿದು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ, ಅವರೊಳಗಿನ ವೈದ್ಯರು ಎರಡನೇ ಆಲೋಚನೆಯಿಲ್ಲದೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಈ ಘಟನೆಯನ್ನು ಇನ್ನಷ್ಟು ಸ್ಫೂರ್ತಿದಾಯಕವಾಗಿಸಿದೆ. ಈ ನಿಸ್ವಾರ್ಥ ಕಾರ್ಯವು ವೃತ್ತಿಪರ ಪರಿಣತಿಯನ್ನು ಮಾತ್ರವಲ್ಲದೆ, ಸಹಮಾನವರ ಕಡೆಗೆ ಆಳವಾದ ಮಾನವೀಯತೆ, ಸೇವೆ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಅವರು ಪ್ರಶಂಸಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ