
ನವದೆಹಲಿ: ಪ್ರಸ್ತುತ ಭಾರತದಾದ್ಯಂತ ಹಲವು ಪ್ರದೇಶಗಳಲ್ಲಿ ತೀವ್ರವಾದ ಬಿಸಿಗಾಳಿ (Heatwave) ಆವರಿಸಿದೆ. ರಿಯಲ್-ಟೈಮ್ ಜಾಗತಿಕ ತಾಪಮಾನ ಶ್ರೇಯಾಂಕದ ಪ್ರಕಾರ, ಭಾರತವು ಪ್ರಸ್ತುತ ಜಾಗತಿಕ ತಾಪಮಾನ ಏರಿಕೆಯ ಕೇಂದ್ರಬಿಂದುವಾಗಿದೆ. ವಿಶ್ವದ 100 ಅತ್ಯಂತ ಹೆಚ್ಚು ತಾಪಮಾನ ಇರುವ ನಗರಗಳ ಪಟ್ಟಿಯಲ್ಲಿ ಬರೋಬ್ಬರಿ 95 ನಗರಗಳು ಭಾರತದ್ದೇ ಆಗಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ಜಾಗತಿಕ ತಾಪಮಾನದ ಏರಿಳಿತಗಳನ್ನು ಗಮನಿಸಿದರೆ, ಭಾರತವು ಪ್ರಸ್ತುತ ಜಾಗತಿಕ ಬಿಸಿಗಾಳಿಯ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಇಲ್ಲಿ ದಾಖಲೆ ಮಟ್ಟದ ತಾಪಮಾನ ವರದಿಯಾಗುತ್ತಿದೆ.
ದೇಶದ ಅನೇಕ ಭಾಗಗಳಲ್ಲಿ ಉಷ್ಣಾಂಶವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಕೆಲವು ಕಡೆಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ಸಮೀಪಿಸುತ್ತಿದೆ. ಇದು ಬೇಸಿಗೆಗೂ ಮುನ್ನವೇ ಕಂಡುಬರುತ್ತಿರುವ ತೀವ್ರ ಹವಾಮಾನ ವೈಪರೀತ್ಯದ ಸಂಕೇತವಾಗಿದೆ.
ದೆಹಲಿ, ಉತ್ತರ ಪ್ರದೇಶದ ಲಕ್ನೋ, ಮಹಾರಾಷ್ಟ್ರದ ನಾಗ್ಪುರ ಮತ್ತು ಅಕೋಲಾ, ಒಡಿಶಾದ ಭುವನೇಶ್ವರ ಹಾಗೂ ಮಧ್ಯಪ್ರದೇಶದ ಭೋಪಾಲ ಸೇರಿದಂತೆ ಹಲವು ನಗರಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ.

ಏಪ್ರಿಲ್ 24 ರಂದು ಸಂಜೆ 5:00 ಗಂಟೆಗೆ AQI.in ಬಿಡುಗಡೆ ಮಾಡಿದ ಅಂಕಿಅಂಶಗಳು ಉಪಖಂಡದ ಬಹುತೇಕ ಭಾಗಗಳಲ್ಲಿ ವ್ಯಾಪಿಸಿರುವ ತೀವ್ರವಾದ ಬಿಸಿಗಾಳಿಯ ಪ್ರಮಾಣವನ್ನು ಎತ್ತಿ ತೋರಿಸಿವೆ.
ಮಧ್ಯ ಭಾರತದಿಂದ ಇಂಡೋ-ಗಂಗಾ ಬಯಲು ಪ್ರದೇಶದವರೆಗೆ, ಹತ್ತಾರು ನಗರಗಳಲ್ಲಿ ತಾಪಮಾನವು 40°C ಗಿಂತ ಹೆಚ್ಚಾಗಿದ್ದು, ಹಲವಾರು ಸ್ಥಳಗಳಲ್ಲಿ 45°C ಸಮೀಪಿಸುತ್ತಿದೆ.
ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳು ತಾಪಮಾನ ಹೆಚ್ಚಳದಿಂದ ಅತಿ ಹೆಚ್ಚು ತೊಂದರೆಗೊಳಗಾಗಿವೆ. ಕೇವಲ ಮಹಾನಗರಗಳಲ್ಲದೆ ಸಣ್ಣ ಪಟ್ಟಣಗಳೂ ಸಹ ಜಾಗತಿಕ ‘ಟಾಪ್ 100’ ಬಿಸಿ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಭಾರತದಲ್ಲಿ ಟಾಪ್ 10 ಹೆಚ್ಚು ತಾಪಮಾನ ಕಂಡಬಂದ ನಗರಗಳು
ಅಕೋಲಾ, ಮಹಾರಾಷ್ಟ್ರ : 45.6°C
ಅಮರಾವತಿ, ಮಹಾರಾಷ್ಟ್ರ : 45.6°C
ವಾರ್ಧಾ, ಮಹಾರಾಷ್ಟ್ರ : 45.5°C
ಫರೀದ್ಕೋಟ್, ಪಂಜಾಬ್ : 45.2°C
ರೋಹ್ಟಕ್, ಹರಿಯಾಣ: 44.6°C
ಜರ್ಸುಗುಡ, ಒಡಿಶಾ: 44.6°C
ಸುರೇಂದ್ರನಗರ, ಗುಜರಾತ್: 44.4°C
ಅಹಮದಾಬಾದ್, ಗುಜರಾತ್: 43.8°C
ನಾಗ್ಪುರ, ಮಹಾರಾಷ್ಟ್ರ: 44.2°C
ಇಂದೋರ್, ಮಧ್ಯಪ್ರದೇಶ: 42.2°C
ಬಿಸಿಗಾಳಿಗೆ ಕಾರಣವೇನು?
ಹವಾಮಾನ ತಜ್ಞರ ಪ್ರಕಾರ ಈ ಹಠಾತ್ ತಾಪಮಾನ ಏರಿಕೆಗೆ ಈ ಕೆಳಗಿನ ಅಂಶಗಳು ಕಾರಣವಾಗಿವೆ:
ಸತತವಾಗಿ ಬೀಸುತ್ತಿರುವ ಶುಷ್ಕ ಮಾರುತಗಳು.
ಮೋಡಗಳಿಲ್ಲದ ಶುಭ್ರ ಆಕಾಶ (ನೇರ ಸೂರ್ಯನ ಕಿರಣಗಳು).
ಮಾನ್ಸೂನ್ ಪೂರ್ವ (Pre-monsoon) ಮಳೆಯ ವಿಳಂಬ.
ಮಳೆಯ ಕೊರತೆಯಿಂದಾಗಿ ಹಗಲು ತಾಪಮಾನ ಏರುತ್ತಿದ್ದರೆ, ಬೆಚ್ಚಗಿನ ರಾತ್ರಿಗಳು ಭೂಮಿಯನ್ನು ತಂಪಾಗಿಸಲು ಬಿಡುತ್ತಿಲ್ಲ.
ಎಚ್ಚರಿಕೆ ಮತ್ತು ಅಪಾಯ:
ಭಾರತೀಯ ಹವಾಮಾನ ಇಲಾಖೆ (IMD) ಈಗಾಗಲೇ ಹಲವು ರಾಜ್ಯಗಳಲ್ಲಿ ‘ಹೀಟ್ ವೇವ್’ ಎಚ್ಚರಿಕೆಯನ್ನು ನೀಡಿದೆ. ಈ ಪರಿಸ್ಥಿತಿ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ. ಸತತವಾಗಿ ಇಂತಹ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ವಯಸ್ಸಾದವರು, ಮಕ್ಕಳು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರಿಗೆ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯವಿದೆ.
ತಜ್ಞರ ಆತಂಕ ಮತ್ತು ಭವಿಷ್ಯದ ಮುನ್ಸೂಚನೆ:
ನಗರಗಳಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ಕಾಡು (Urban Heat Island effect), ಕ್ಷೀಣಿಸುತ್ತಿರುವ ಹಸಿರು ಮತ್ತು ಬದಲಾಗುತ್ತಿರುವ ಹವಾಮಾನ ವ್ಯವಸ್ಥೆಗಳು ಈ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ದಿನಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಇದು ತಾತ್ಕಾಲಿಕ ಉಪಶಮನ ನೀಡಬಹುದು. ಆದರೆ ಮಾನ್ಸೂನ್ ಆಗಮನದವರೆಗೆ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡುಬರುವುದು ಅನುಮಾನ ಎನ್ನಲಾಗಿದೆ.
ಸದ್ಯಕ್ಕೆ, ಭಾರತವು “ಭೂಮಿಯ ಮೇಲಿನ ಅತ್ಯಂತ ಬಿಸಿ ಸ್ಥಳವಾಗಿ ಉಳಿದಿದೆ, ಇದು ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ನಮಗೆ ನೆನಪಿಸುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ