ದೀದಿ ಪಕ್ಷದಲ್ಲಿ ಬಣ ರಾಜಕೀಯದ ಸದ್ದು ; ಆಂತರಿಕ ತಲ್ಲಣದಿಂದ ದುರ್ಬಲವಾಗುತ್ತಿದೆಯೇ ಟಿಎಂಸಿ..?

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸದ್ಯ ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಿರಿಯ ಸಂಸದರಾದ ಕಾಕಲಿ ಘೋಷ್ ದಸ್ತಿದಾರ್ ಮತ್ತು ಕಲ್ಯಾಣ ಬ್ಯಾನರ್ಜಿ ನಡುವಿನ ಬಹಿರಂಗ ಜಗಳ ಹಾಗೂ ಅದರ ಬೆನ್ನಲ್ಲೇ ದಸ್ತಿದಾರ್ ಅವರ ಬಹಿರಂಗ ಬಂಡಾಯ, ಟಿಎಂಸಿ ಪಕ್ಷದೊಳಗಿನ ಆಂತರಿಕ ವೈರುಧ್ಯಗಳನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಈ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಸೈದ್ಧಾಂತಿಕ ಬದ್ಧತೆಗಿಂತ ಹೆಚ್ಚಾಗಿ ಅಧಿಕಾರ, ಹಿತಾಸಕ್ತಿಗಳ ಜಾಲ, ಭ್ರಷ್ಟಾಚಾರ, ಹಣದ ಬಲ ಹಾಗೂ ನಾಯಕತ್ವದ ಸುತ್ತಲಿನ ಭಟ್ಟಂಗಿತನ ಸಂಸ್ಕೃತಿಯೇ ಈ ಪಕ್ಷದ ಅವನತಿಗೆ ಕಾರಣ ಎಂಬುದು ಈ ಬೆಳವಣಿಗೆಯಿಂದ ಮತ್ತಷ್ಟು ಕಾಣತೊಡಗಿದೆ.
ಎಡಪಂಥೀಯರ ವಿರುದ್ಧದ ಪ್ರಾದೇಶಿಕ ಚಳವಳಿಯಾಗಿ ಆರಂಭವಾದ ಟಿಎಂಸಿ, ಕಾಲಾನಂತರದಲ್ಲಿ ಕೇವಲ ವೈಯಕ್ತಿಕ ಲಾಭ ಹಾಗೂ ಪ್ರಭಾವದ ಆಧಾರದ ಮೇಲೆ ನಡೆಯುವ ರಾಜಕೀಯ ವ್ಯವಸ್ಥೆಯಾಗಿ ಬದಲಾಯಿತು. ಪಕ್ಷಕ್ಕೆ ಹಿನ್ನಡೆಯಾಗುವ ಮುನ್ಸೂಚನೆ ಸಿಕ್ಕಾಗಲೆಲ್ಲಾ ನಾಯಕರು ನಿಷ್ಠೆಗಿಂತ ಪಕ್ಷಾಂತರಕ್ಕೇ ಆದ್ಯತೆ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆ ಹಾಗೂ 2021ರ ವಿಧಾನಸಭಾ ಚುನಾವಣೆಯ ಸಮಯದಲ್ಲೂ ಇದೇ ನಡೆದಿತ್ತು. ಆದರೆ, ಇತ್ತೀಚಿನ ಚುನಾವಣೆಯಲ್ಲಿ ಎದುರಿಸಿದ ಭಾರಿ ಸೋಲಿನ ನಂತರ, ನಾಯಕರು ಮತ್ತು ಕಾರ್ಯಕರ್ತರು ಮಮತಾ ಬ್ಯಾನರ್ಜಿ ಅವರ ಜೊತೆ ನಿಲ್ಲುವ ಬದಲು ಪಕ್ಷದಿಂದ ವೇಗವಾಗಿ ಕಣ್ಮರೆಯಾಗುತ್ತಿದ್ದಾರೆ. ಪಕ್ಷದ ಅನೇಕ ನಾಯಕರು ಪಕ್ಷ ತೊರೆಯುವ ಆಲೋಚನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಪಕ್ಷದಲ್ಲಿ ಆಳವಾದ ಆಂತರಿಕ ಬಿಕ್ಕಟ್ಟನ್ನುಮತ್ತೊಮ್ಮೆ ಬಹಿರಂಗಪಡಿಸಿದೆ.

ಅಧಿಕಾರದ ಲಾಲಸೆ, ಭೀತಿ ಮತ್ತು ಬಣ ರಾಜಕೀಯ
bimba pratibimbaರಾಜಕೀಯ ಒತ್ತಡದ ಸಂದರ್ಭಗಳಲ್ಲೆಲ್ಲಾ ಟಿಎಂಸಿಯ ಬಣ ರಾಜಕೀಯ ಸಾರ್ವಜನಿಕವಾಗಿ ಸ್ಫೋಟಗೊಂಡಿದೆ. ಸೌಗತ ರಾಯ್ ಪಕ್ಷದೊಳಗಿನ ಕೆಲವು ನಿರ್ಧಾರಗಳನ್ನು ಬಹಿರಂಗವಾಗಿ ಟೀಕಿಸಿದ್ದು, ಮಹುವಾ ಮೊಯಿತ್ರಾ ಮತ್ತು ಕಲ್ಯಾಣ ಬ್ಯಾನರ್ಜಿ ನಡುವಿನ ತೀವ್ರ ಸಂಘರ್ಷ, ಸಂಸದ ಸುದೀಪ ಬ್ಯಾನರ್ಜಿ ಮತ್ತು ಶಾಸಕ ಕುನಾಲ್ ಘೋಷ್ ನಡುವಿನ ಜಗಳ ಹಾಗೂ ಕಲ್ಯಾಣ ಬ್ಯಾನರ್ಜಿ ಮತ್ತು ಕಾಕಲಿ ಘೋಷ್ ದಸ್ತಿದಾರ್ ನಡುವಿನ ಜಗಳಗಳು ಇದಕ್ಕೆ ಸಾಕ್ಷಿ.
ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರತಿಭಟನೆಯ ಸಂದರ್ಭದಲ್ಲಿ ಸುಖೇಂದು ರಾಯ್ ಮತ್ತು ಶಂತನು ಸೇನ್ ಪಕ್ಷದ ನಿಲುವಿಗೆ ವಿರುದ್ಧವಾಗಿ ಧ್ವನಿ ಎತ್ತಿದ್ದರು. ಮಾಜಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ ರಾಜ್ಯದ ರಾಜಕೀಯ ಹಿಂಸಾಚಾರದ ಸಂಸ್ಕೃತಿಯನ್ನು ಬಹಿರಂಗವಾಗಿಯೇ ಖಂಡಿಸಿದ್ದರು. ಈ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಸಂಸತ್ ಹಾಗೂ ಚುನಾವಣಾ ಆಯೋಗದಂತಹ ಸಾಂಸ್ಥಿಕ ವೇದಿಕೆಗಳಿಗೂ ಕೊಂಡೊಯ್ದಿದ್ದಾರೆ.

ಇದರ ಹಿಂದೆ ಮಮತಾ ಬ್ಯಾನರ್ಜಿ ಅವರ ಹಳೆಯ ನಿಷ್ಠಾವಂತರು ಮತ್ತು ಅಭಿಷೇಕ ಬ್ಯಾನರ್ಜಿ ಅವರಂತಹ ಉದಯೋನ್ಮುಖ ಯುವ ನಾಯಕರ ನಡುವಿನ ತೀವ್ರ ಅಧಿಕಾರ ಸಂಘರ್ಷವಿದೆ. ಮುಕುಲ್ ರಾಯ್ ಮತ್ತು ಅಭಿಷೇಕ ಬ್ಯಾನರ್ಜಿ ನಡುವಿನ ತಿಕ್ಕಾಟ, 2020ರಲ್ಲಿ ಸುವೇಂದು ಅಧಿಕಾರಿ ಪಕ್ಷ ತೊರೆಯುವ ಮುನ್ನ ಅಭಿಷೇಕ ಜೊತೆಗಿನ ಸಂಘರ್ಷ ಇವೆಲ್ಲವೂ ಪಕ್ಷದ ಮೇಲಿನ ಮಮತಾ ಬ್ಯಾನರ್ಜಿ ಅವರ ಹಿಡಿತ ಸಡಿಲವಾಗುತ್ತಿರುವುದರ ಸಂಕೇತವಾಗಿದೆ. 2026ರ ಚುನಾವಣಾ ಫಲಿತಾಂಶದ ನಂತರ ರಾಷ್ಟ್ರೀಯ ವಕ್ತಾರ ರಿಜು ದತ್ತಾ ಅಸಮಾಧಾನ ಹೊರಹಾಕುವುದರೊಂದಿಗೆ ಆರಂಭವಾದ ಈ ಬಿರುಕು, ಈಗ ಕಾಕಲಿ ಘೋಷ್ ದಸ್ತಿದಾರ್ ಅವರ ಬಂಡಾಯ ಹಾಗೂ ಅವರ ಬೆನ್ನಲ್ಲೇ ಶಂತನು ಸೇನ್ ಅವರ ರಾಜೀನಾಮೆಯ ಮೂಲಕ ಮತ್ತಷ್ಟು ದೊಡ್ಡದಾಗಿದೆ.
ದಸ್ತಿದಾರ್ ಮತ್ತು ಅವರ ಪತಿ ಡಾ. ಸುದರ್ಶನ್ ಘೋಷ್ ದಸ್ತಿದಾರ್ ದಶಕಗಳಿಂದ ಮಮತಾ ಬ್ಯಾನರ್ಜಿ ಅವರೊಂದಿಗೆ ಗುರುತಿಸಿಕೊಂಡಿದ್ದ ಹಳೆಯ ನಿಷ್ಠಾವಂತರ ಬಳಗಕ್ಕೆ ಸೇರಿದವರು. ಇಂತಹ ಹಿರಿಯ ಮುಖಗಳೇ ಈಗ ಅಸಮಾಧಾನಗೊಂಡು ಹೊರನಡೆಯುತ್ತಿರುವುದು ಪಕ್ಷದಲ್ಲಿ ಕೇವಲ ಬಣ ರಾಜಕೀಯವಲ್ಲ, ಬದಲಿಗೆ ನಾಯಕತ್ವದ ಮೇಲಿನ ವಿಶ್ವಾಸದ ಬಿಕ್ಕಟ್ಟು ತಲೆದೋರಿದೆ ಎಂಬುದನ್ನು ತೋರಿಸುತ್ತದೆ. 2019 ರಲ್ಲಿ ಬಿಜೆಪಿ ಬಂಗಾಳದಲ್ಲಿ ಮುನ್ನಡೆ ಸಾಧಿಸಿದಾಗ ಮುಕುಲ್ ರಾಯ್ ಪಕ್ಷ ತೊರೆದಿದ್ದರು. ಬಂಗಾಳ ರಾಜಕೀಯದಲ್ಲಿ ‘ಬಣ ರಾಜಕೀಯದ ಪಿತಾಮಹ’ ಎಂದೇ ಕರೆಯಲ್ಪಡುವ ಮುಕುಲ್ ರಾಯ್ ಅವರ ನಿರ್ಗಮನ ಟಿಎಂಸಿಗೆ ದೊಡ್ಡ ಪೆಟ್ಟಾಗಿತ್ತು. ಪ್ರಸ್ತುತ, ಪಕ್ಷದ ಸೋಲಿನ ಬೆನ್ನಲ್ಲೇ ಹಲವು ನಾಯಕರು ಆಡಳಿತ ಪಕ್ಷದ ಕ್ಯಾಂಪ್‌ಗಳ ಜೊತೆ ಬ್ಯಾಕ್‌ಚಾನೆಲ್ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

‘ಅಭಿಷೇಕ ಬ್ಯಾನರ್ಜಿ’ ಎಂಬ ಅಂಶ ಮತ್ತು ಐ-ಪ್ಯಾಕ್ (I-PAC) ಪ್ರಭಾವ
ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ ಬ್ಯಾನರ್ಜಿ ಅವರ ಬೆಳವಣಿಗೆಯು ಪಕ್ಷದಲ್ಲಿ ಮತ್ತೊಂದು ಪರ್ಯಾಯ ಅಧಿಕಾರ ಕೇಂದ್ರವನ್ನು ಸೃಷ್ಟಿಸಿತು. ಐ-ಪ್ಯಾಕ್ (I-PAC) ನಂತಹ ಕಾರ್ಪೊರೇಟ್ ತಂತ್ರಜ್ಞರು ಮತ್ತು ಡೇಟಾ ಆಪರೇಟರ್‌ಗಳ ಪ್ರವೇಶದಿಂದಾಗಿ, ಬೀದಿ ಹೋರಾಟದ ಮೂಲಕ ಪಕ್ಷ ಕಟ್ಟಿದ ಹಿರಿಯ ನಾಯಕರು ಮೂಲೆಗುಂಪಾದರು. ಪ್ರೆಸೆಂಟೇಷನ್ ರಾಜಕಾರಣದ ಮುಂದೆ ತಮ್ಮ ಶ್ರಮಕ್ಕೆ ಬೆಲೆಯಿಲ್ಲದಂತಾಯಿತು ಎಂದು ಹಿರಿಯ ನಾಯಕರು ಅಸಮಾಧಾನಗೊಂಡರು.
ದಿನೇಶ ತ್ರಿವೇದಿ ಪ್ರಜಾಸತ್ತಾತ್ಮಕ ಮೌಲ್ಯಗಳ ಕೊರತೆಯನ್ನು ದೂರಿ ಹೊರನಡೆದರೆ, ಗ್ರಾಮೀಣ ಭಾಗದಲ್ಲಿ ಪಕ್ಷ ಬಲಪಡಿಸಿದ್ದ ಮುಕುಲ್ ರಾಯ್ ಮತ್ತು ಸುವೇಂದು ಅಧಿಕಾರಿ ಬಿಜೆಪಿಗೆ ಸೇರಿದರು. ಈ ನಾಯಕರ ನಿರ್ಗಮನಕ್ಕಿಂತ ಹೆಚ್ಚಾಗಿ, ಹಳೆಯ ನಿಷ್ಠಾವಂತರನ್ನು ಕೇವಲ ‘ಬಳಸಿ ಬಿಸಾಡುವ’ ಪಕ್ಷದ ಧೋರಣೆ ಇನ್ನುಳಿದವರಲ್ಲಿ ಆತಂಕ ಮೂಡಿಸಿತು. ಇದರ ನಡುವೆ, ಸಂಘಟನಾತ್ಮಕ ಶಕ್ತಿ ಕಳೆದುಕೊಳ್ಳುತ್ತಿದ್ದ ಪಕ್ಷವು ಸಿನಿ ತಾರೆಗಳು, ಸೆಲೆಬ್ರಿಟಿಗಳು ಮತ್ತು ಸೋಶಿಯಲ್ ಮೀಡಿಯಾ ಮುಖಗಳಿಗೆ ಮಣೆ ಹಾಕಲು ಶುರು ಮಾಡಿತು. ಇದು ನಗರ ಪ್ರದೇಶಗಳಲ್ಲಿ ಮತ ತಂದುಕೊಟ್ಟರೂ, ನಿಷ್ಠಾವಂತ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿತು.

ಮತ್ತೊಂದೆಡೆ ಸೈದ್ಧಾಂತಿಕ ಹಿನ್ನೆಲೆ ಇಲ್ಲದ ಕಾರಣ ಟಿಎಂಸಿ ರಾಷ್ಟ್ರೀಯ ಪಕ್ಷವಾಗಿ ಬೆಳೆಯಲು ವಿಫಲವಾಯಿತು ಮತ್ತು ಕೇವಲ ಬಂಗಾಳದ ಪ್ರಾದೇಶಿಕ ರಾಜಕಾರಣಕ್ಕೆ ಸೀಮಿತವಾಯಿತು.
ಟಿಎಂಸಿಯ ಅತ್ಯಂತ ದೊಡ್ಡ ದುರ್ಬಲತೆಯೆಂದರೆ ಅದರ ಸೈದ್ಧಾಂತಿಕ ಶೂನ್ಯತೆ. ಸಿಪಿಐ(ಎಂ) ಪಕ್ಷವು ಚುನಾವಣೆಯಲ್ಲಿ ಸೋತರೂ ತನ್ನ ಸೈದ್ಧಾಂತಿಕ ಬದ್ಧತೆ ಮತ್ತು ಶಿಸ್ತಿನ ಕಾರ್ಯಕರ್ತರನ್ನು ಉಳಿಸಿಕೊಂಡಿದೆ. ಆದರೆ, ಟಿಎಂಸಿಗೆ ಅಂತಹ ಸೈದ್ಧಾಂತಿಕ ಬದ್ಧತೆಯ ಕಾರ್ಯಕರ್ತರ ಕೊರತೆಯಿದೆ. ಹೀಗಾಗಿ ಪಕ್ಷ ದುರ್ಬಲಗೊಳ್ಳುತ್ತಿದ್ದಂತೆ ಪಕ್ಷದೊಳಗಿನ ಇಡೀ ವ್ಯವಸ್ಥೆ ಕುಸಿಯಲಾರಂಭಿಸಿದೆ.
ನೇಮಕಾತಿ ಹಗರಣಗಳು, ಭ್ರಷ್ಟಾಚಾರದ ವಿವಾದಗಳು, ಹಿಂಸಾಚಾರದ ಆರೋಪಗಳು ಮತ್ತು ಜಿಲ್ಲಾ ಮಟ್ಟದ ನಾಯಕರ ನಡುವಿನ ಆಂತರಿಕ ವೈಷಮ್ಯಗಳು ಈ ಪತನದ ವೇಗವನ್ನು ಹೆಚ್ಚಿಸಿವೆ. ಪ್ರಸ್ತುತ ಟಿಎಂಸಿ ಒಂದೇ ರಾತ್ರಿಯಲ್ಲಿ ಸಂಪೂರ್ಣವಾಗಿ ಧೂಳೀಪಟವಾಗದೇ ಇರಬಹುದು, ಆದರೆ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಅದು ವಿಪಕ್ಷಗಳ ಕಾರಣದಿಂದಲ್ಲ, ಬದಲಾಗಿ ತನ್ನದೇ ಆದ ಆಂತರಿಕ ಬಿಕ್ಕಟ್ಟು ಮತ್ತು ದುರ್ಬಲತೆಗಳಿಂದಾಗಿ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement