
ರಾವಲಕೋಟ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ): ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ನಾಗರಿಕ ಸಮಾಜದ ಪ್ರಮುಖ ಒಕ್ಕೂಟ ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ (JAAC) ಯನ್ನು ಅಲ್ಲಿನ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ತೀವ್ರ ಘರ್ಷಣೆಯಲ್ಲಿ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸುಮಾರು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಾರ್ವಜನಿಕ ಸುವ್ಯವಸ್ಥೆ ಮತ್ತು ಭದ್ರತೆಯ ನೆಪವೊಡ್ಡಿ ಅಧಿಕಾರಿಗಳು ಕಳೆದ ವಾರವಷ್ಟೇ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ (JAAC) ಯನ್ನು ಕಾನೂನುಬಾಹಿರ ಎಂದು ಘೋಷಿಸಿ ನಿಷೇಧಿಸಿದ್ದರು. ಇದರ ನಡುವೆ, ಶುಕ್ರವಾರ ರಾತ್ರಿ ಕಾನೂನು ಜಾರಿ ಅಧಿಕಾರಿಗಳ ಜೊತೆ ನಡೆದ ಸಂಘರ್ಷದಲ್ಲಿ ಸ್ಥಳೀಯ ವರ್ತಕರೊಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದರು. ಈ ಘಟನೆಯಿಂದ ರಾವಲಕೋಟ್ ನಗರದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಭಾನುವಾರ ಭೀಕರ ಹಿಂಸಾಚಾರಕ್ಕೆ ಕಾರಣವಾಯಿತು.

ರಾವಲಕೋಟ್ನ ಉನ್ನತ ನಾಗರಿಕ ಅಧಿಕಾರಿಯಾಗಿರುವ ಕಮಿಷನರ್ ಸರ್ದಾರ್ ವಾಹಿದ್ ಖಾನ್ ಅವರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿ, “ಪೊಲೀಸ್ ಗುಂಡಿನ ದಾಳಿಗೆ ಬಲಿಯಾದ ವರ್ತಕನ ಮೃತದೇಹವನ್ನು ಇರಿಸಲಾಗಿದ್ದ ಆಸ್ಪತ್ರೆಯ ಶವಾಗಾರದ ಹೊರಗೆ ಜೆಎಎಸಿ ಬೆಂಬಲಿಗರು ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಯತ್ನಿಸಿದಾಗ, ಸಂಘಟನೆಯ ಕಾರ್ಯಕರ್ತರು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಆಟೋಮ್ಯಾಟಿಕ್ ರೈಫಲ್ಗಳು, ಪೆಟ್ರೋಲ್ ಬಾಂಬ್ಗಳು ಮತ್ತು ಇತರೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು,” ಎಂದು ತಿಳಿಸಿದ್ದಾರೆ.
“ಇದಕ್ಕೆ ಪ್ರತಿಯಾಗಿ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಕ್ರಮದಲ್ಲಿ ಆರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ” ಎಂದು ಖಾನ್ ಸ್ಪಷ್ಟಪಡಿಸಿದ್ದು, ಈ ಕಾರ್ಯಾಚರಣೆಯ ಸಮಯದಲ್ಲಿ ಹಲವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಸ್ಥಳೀಯ ನಿವಾಸಿಗಳು ಮತ್ತು ಜೆಎಎಸಿ ಬೆಂಬಲಿಗರು ಅಧಿಕೃತ ಹೇಳಿಕೆಯನ್ನು ತಿರಸ್ಕರಿಸಿದ್ದು, ನಾಗರಿಕರ ಸಾವಿನ ಸಂಖ್ಯೆ ಸರ್ಕಾರ ಹೇಳುವುದಕ್ಕಿಂತ ಅತ್ಯಂತ ಹೆಚ್ಚಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ ಮತ್ತು ಬೇಡಿಕೆಗಳು:
ಜುಲೈ 27 ರಂದು ಪಿಒಕೆಯ ಶಾಸನಸಭೆಯ 45 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 12 ಸ್ಥಾನಗಳನ್ನು ನಿರಾಶ್ರಿತರಿಗೆ ಮೀಸಲಿಟ್ಟಿರುವುದನ್ನು ವಿರೋಧಿಸಿ ಜೆಎಎಸಿ ಸೋಮವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಈ ಪ್ರತಿಭಟನೆಯ ಹಿಂದಿನ ದಿನವೇ ಹಿಂಸಾಚಾರ ಸಂಭವಿಸಿದೆ.
ಕಳೆದ ಕೆಲವು ವರ್ಷಗಳಿಂದ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿರುವ ಜೆಎಎಸಿ, ಕೇವಲ ಮೀಸಲಾತಿ ಮಾತ್ರವಲ್ಲದೆ ಇಂಟರ್ನೆಟ್ ನಿಷೇಧ, ಸಂಘಟನೆಯ ಮೇಲಿನ ನಿಷೇಧ, ವಿದ್ಯುತ್ ಅಭಾವ, ಹಣದುಬ್ಬರ (ಬೆಲೆ ಏರಿಕೆ), ನಿರುದ್ಯೋಗ, ಪ್ರಾದೇಶಿಕ ಸಂಪನ್ಮೂಲಗಳ ಶೋಷಣೆ ಮತ್ತು ರಾಜಕೀಯ ಪಾರ್ಶ್ವೀಕರಣದಂತಹ ಗಂಭೀರ ವಿಷಯಗಳ ವಿರುದ್ಧವೂ ಧ್ವನಿ ಎತ್ತಿತ್ತು. ತಮ್ಮ ಸಂಘಟನೆಯನ್ನು ‘ಭಯೋತ್ಪಾದಕ ಗುಂಪು’ ಎಂದು ಪಟ್ಟಿ ಮಾಡಿರುವುದನ್ನು “ದಬ್ಬಾಳಿಕೆ” ಎಂದು ಕರೆದಿರುವ ಒಕ್ಕೂಟದ ಸದಸ್ಯರು, ನಾವು ಕೇವಲ ನಮ್ಮ ಕಾನೂನುಬದ್ಧ ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾನವ ಹಕ್ಕುಗಳ ಆಯೋಗದ ತೀವ್ರ ಕಳವಳ:
ಪ್ರಾದೇಶಿಕ ಸರ್ಕಾರವು ಭಯೋತ್ಪಾದನಾ ನಿರೋಧಕ ಕಾಯ್ದೆಯಡಿ ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ಯನ್ನು ನಿಷೇಧಿಸಿರುವುದಕ್ಕೆ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (HRCP) ತೀವ್ರ ಕಳವಳ ವ್ಯಕ್ತಪಡಿಸಿದೆ.
ಸೋಮವಾರ ಪ್ರಕಟಣೆ ಹೊರಡಿಸಿರುವ ಆಯೋಗವು, ಸರ್ಕಾರ ಅತಿಯಾದ ಬಲಪ್ರಯೋಗ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದೆ. ನಾಗರಿಕರು ಮತ್ತು ಕಾನೂನು ಜಾರಿ ಸಿಬ್ಬಂದಿಯ ಸಾವು ಹಾಗೂ ಸಂವಹನ ವ್ಯವಸ್ಥೆಯನ್ನು ಸಂಪೂರ್ಣ ಕಡಿತಗೊಳಿಸಿರುವುದರ (ಬ್ಲ್ಯಾಕೌಟ್) ವಿರುದ್ಧ ಆಕ್ರೋಶ ಹೊರಹಾಕಿದೆ.
“ಯಾವುದೇ ಸಮಸ್ಯೆಗೆ ಮಾತುಕತೆ ಅತ್ಯಗತ್ಯ. ಆದರೆ ಈ ಭಾಗದ ಜನರ ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವಾಗ ಅರ್ಥಪೂರ್ಣ ಮಾತುಕತೆ ಸಾಧ್ಯವಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಗೌರವಿಸಬೇಕು ಮತ್ತು ಜನರ ಕುಂದುಕೊರತೆಗಳನ್ನು ಪಾರದರ್ಶಕವಾಗಿ ಬಗೆಹರಿಸಬೇಕು,” ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (HRCP) ಹೇಳಿದೆ.
ಸ್ಥಳೀಯ ಮತ್ತು ಫೆಡರಲ್ ಸರ್ಕಾರಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವುದನ್ನು ತಡೆಯಬೇಕು, ಜನರ ಮೂಲಭೂತ ಹಕ್ಕುಗಳನ್ನು ಗೌರವಿಸಬೇಕು ಮತ್ತು ಎಲ್ಲರನ್ನೂ ಒಳಗೊಂಡ ಪ್ರಾಮಾಣಿಕ ಮಾತುಕತೆಗೆ ಮುಂದಾಗಬೇಕು ಎಂದು ಆಯೋಗವು ಒತ್ತಾಯಿಸಿದೆ. ಅಲ್ಲದೆ, ಪ್ರಸ್ತುತ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಪರಿಶೀಲಿಸಲು ಶೀಘ್ರದಲ್ಲೇ ಸ್ಥಳಕ್ಕೆ ಸತ್ಯಶೋಧನಾ ಸಮಿತಿಯೊಂದನ್ನು (Fact-finding mission) ಕಳುಹಿಸುವುದಾಗಿ ಆಯೋಗ ಪ್ರಕಟಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ