ಅಯೋಧ್ಯಾ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ನ ಮತ್ತೊಬ್ಬ ಪ್ರಮುಖ ಸದಸ್ಯ ಅನಿಲ ಮಿಶ್ರಾ ತಮ್ಮ ಸ್ಥಾನಗಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯಲ್ಲಿ ಭಾರಿ ಪ್ರಮಾಣದ ಹಣ ಕಳ್ಳತನವಾಗಿದೆ ಎಂಬ ಆರೋಪದ ನಂತರ ಉತ್ತರ ಪ್ರದೇಶ ಸರ್ಕಾರ ರಚಿಸಿದ ವಿಶೇಷ ತನಿಖಾ ದಳ (SIT) ಎಂಟು ಜನರನ್ನು ಬಂಧಿಸಿದ ಬೆನ್ನಲ್ಲೇ ಈ ಇಬ್ಬರು ಪ್ರಮುಖರು ರಾಜೀನಾಮೆ ನೀಡಿದ್ದಾರೆ.
ರಾಮಮಂದಿರಕ್ಕೆ ಹರಿದುಬರುತ್ತಿರುವ ದೇಣಿಗೆಯ ನಿರ್ವಹಣೆ, ಲೆಕ್ಕಪತ್ರ ಮತ್ತು ಕಣ್ಗಾವಲು ಪ್ರಕ್ರಿಯೆಯಲ್ಲಿ ಗಂಭೀರ ಸ್ವರೂಪದ ಲೋಪಗಳು ನಡೆದಿರುವುದನ್ನು ಎಸ್ಐಟಿ ತನ್ನ ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಠಿಣ ನಿಲುವು ಮತ್ತು ಕಳ್ಳತನದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಾಥಮಿಕ ವರದಿಯನ್ನು ಸಲ್ಲಿಸಿದ ನಂತರ ಟ್ರಸ್ಟ್ನೊಳಗಿನ ಆಡಳಿತದ ಮೇಲಿನ ಒತ್ತಡ ತೀವ್ರಗೊಂಡಿದ್ದರಿಂದ ಈ ರಾಜೀನಾಮೆಗಳು ಬಂದಿವೆ ಎನ್ನಲಾಗಿದೆ.
ಮೊದಲ ಎಫ್ಐಆರ್ ದಾಖಲು
ಎಸ್ಐಟಿ ನೀಡಿದ ಶಿಫಾರಸುಗಳ ಆಧಾರದ ಮೇಲೆ ಪ್ರಕರಣದ ಮೊದಲ ಎಫ್ಐಆರ್ (FIR) ದಾಖಲಿಸಲಾಗಿದೆ. ಮಾಜಿ ಟ್ರಸ್ಟಿ ಕಾಮೇಶ್ವರ ಚೌಪಾಲ್ ಅವರ ನಿಧನದ ನಂತರ ಸೆಪ್ಟೆಂಬರ್ 2025 ರಲ್ಲಿ ಟ್ರಸ್ಟ್ಗೆ ಸೇರ್ಪಡೆಗೊಂಡಿದ್ದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯ ಕೃಷ್ಣ ಮೋಹನ ಅವರು ಈ ಅಧಿಕೃತ ದೂರನ್ನು ದಾಖಲಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 306, 316(5), 317(4), 317(5), 61 ಮತ್ತು 3(5) ಸೇರಿದಂತೆ ಹಲವು ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗದು ಎಣಿಕೆಗೆ ಕಾರಣರಾದ ಆರು ದೇವಾಲಯ ಸಿಬ್ಬಂದಿ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ಅವಿನಾಶ ಶುಕ್ಲಾ, ಅನುಕಲ್ಪ ಮಿಶ್ರಾ, ಲವಕುಶ ಮಿಶ್ರಾ, ಮನೀಶಕುಮಾರ ಯಾದವ್, ಕರುಣೇಶ ಪಾಂಡೆ, ರಾಮಶಂಕರ ಮಿಶ್ರಾ, ಸುಭಾಷ ಶ್ರೀವಾಸ್ತವ ಮತ್ತು ರಾಮಶಂಕರ ಯಾದವ್ ಅಲಿಯಾಸ್ ಟಿನ್ನು ಯಾದವ್ ಅವರನ್ನು ಬಂಧಿಸಲಾಗಿದೆ. ಸುಮಾರು 7ರಿಂದ 7.5 ಕೋಟಿ ರೂ. ಕಳ್ಳತನವಾಗಿದೆ ಎಂದು ವರದಿಗಳು ಸೂಚಿಸುತ್ತವೆ.


ನಿಮ್ಮ ಕಾಮೆಂಟ್ ಬರೆಯಿರಿ