ಮಾಜಿ ಬಸ್ ಚಾಲಕನ ಮನೆಯಲ್ಲಿ ₹28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ….!

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸರ್ಕಾರಿ ಬಸ್ ಚಾಲಕನಾಗಿದ್ದು, ನಂತರ ಕಲ್ಲು ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರ ನಿವಾಸದಲ್ಲಿ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ 28.5 ಕೋಟಿ ರೂ.ಗಳಿಗೂ ಹೆಚ್ಚು ನಗದು ಮತ್ತು 15 ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ನಗದು ಎಣಿಸಲು ಬಳಸಿದ ಐದು ಹಣ ಎಣಿಕೆ ಯಂತ್ರಗಳು ಕಾರ್ಯನಿರ್ವಹಿಸಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಹಣ ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ. ಪೊಲೀಸರು ಬಿರ್ಭೂಮ್ ಜಿಲ್ಲೆಯ ಮೊಹಮ್ಮದ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಿನಾರ್ ಮಂಡಲ್ ಎಂಬಾತನ ನಿವಾಸದ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ್ದರು. ಆರಂಭದಲ್ಲಿ ಸುಮಾರು ₹5.5 ಕೋಟಿ ನಗದು ಪತ್ತೆಯಾಗಿತ್ತು. ಆದರೆ ಗುರುವಾರ ಬೆಳಗ್ಗಿನ ವೇಳೆಗೆ ನಗದು ಮೊತ್ತ ₹28 ಕೋಟಿಗೂ ಅಧಿಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಸುಮಾರು ₹21 ಕೋಟಿ ಮೌಲ್ಯದ 15 ಕೆಜಿ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಎಣಿಕೆ ಮುಂದುವರಿದಿದೆ ಎನ್ನಲಾಗಿದೆ.

ಪೊಲೀಸರು ವಶಪಡಿಸಿಕೊಂಡ ನಗದನ್ನು ಸಾಗಿಸಲು ಸುಮಾರು 35 ಚೀಲಗಳನ್ನು ಬಳಸಲಾಗಿತ್ತು. ಅಲ್ಲದೆ, ಈ ಅಪಾರ ಪ್ರಮಾಣದ ಹಣವನ್ನ ಎಣಿಸಲು 5 ನಗದು ಎಣಿಕೆ ಯಂತ್ರಗಳನ್ನೂ ಪೊಲೀಸರು ತರಿಸಬೇಕಾಯಿತು. ಜೊತೆಗೆ, ವಶಕ್ಕೆ ಪಡೆಯಲಾದ ನಗದನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು 5 ದೊಡ್ಡ ಟಿನ್ ಟ್ರಂಕ್‌ಗಳನ್ನು ತರಲಾಗಿತ್ತು ಎಂದು ವರದಿಯಾಗಿದೆ.
ದಾಳಿಯ ಬಳಿಕ ಮಿನಾರ್ ಮಂಡಲನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ, ವಶಪಡಿಸಿಕೊಳ್ಳಲಾದ ನಗದು ಮತ್ತು ಚಿನ್ನ ತನ್ನ ಸಂಬಂಧಿಕ ಟಿಲ್ಲು ಮಂಡಲ್ ಹಾಗೂ ಆತ ನಡೆಸುತ್ತಿದ್ದ ಎನ್ನಲಾದ ಅಕ್ರಮ ಸಿಂಡಿಕೇಟ್‌ಗೆ ಸೇರಿದ್ದು ಎಂದು ಮಿನಾರ್ ಮಂಡಲ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಿನಾರ್ ಮಂಡಲ್ ಮೂಲತಃ ಬಸ್ ಚಾಲಕನಾಗಿದ್ದು, ಟಿಲ್ಲು ಮಂಡಲ್ ಈತನ ಸಂಬಂಧಿಕ ಎಂದು ಹೇಳಲಾಗಿದೆ. ಟಿಲ್ಲು ಮಂಡಲ್ ಕಲ್ಲು ವ್ಯಾಪಾರಿಯಾಗಿದ್ದಾನೆ.

ಪ್ರಮುಖ ಸುದ್ದಿ :-   'ವಂದೇ ಮಾತರಂ'ಗೆ ಅವಮಾನ ಮಾಡಿದರೆ ಜೈಲು: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಿನಾರ್ ಮಂಡಲ್ ಕಲ್ಲು ವ್ಯಾಪಾರಕ್ಕೂ ಸಂಬಂಧ ಹೊಂದಿದ್ದು, ಟಿಲ್ಲು ಮಂಡಲ್‌ಗೆ ಸೇರಿದ ಕಲ್ಲು ಗಣಿಗಳು ಹಾಗೂ ಕ್ರಷರ್ ಘಟಕಗಳೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಷ್ಟೊಂದು ಪ್ರಮಾಣದ ನಗದು ಹೇಗೆ ಸಂಗ್ರಹವಾಯಿತು ಹಾಗೂ ಅದರ ಮೂಲವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ದೊಡ್ಡ ಪ್ರಮಾಣದ ಪೊಲೀಸ್ ಪಡೆ ಭಾಗವಹಿಸಿತ್ತು. ಆದರೆ ದಾಳಿಯ ನಿಖರ ಕಾರಣವೇನು ಅಥವಾ ಅಕ್ರಮ ಹಣಕಾಸು ವ್ಯವಹಾರಗಳು ಅಥವಾ ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣವೇ ಎಂಬುದನ್ನು ಪೊಲೀಸರು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

https://x.com/SuvenduWB/status/2082357697060761746/video/1

“ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ” – ಸುವೇಂದು ಅಧಿಕಾರಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬುಧವಾರ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ಮುಂದುವರಿಯಲಿದ್ದು, “ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ” ನೀತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದು ಹೇಳಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಮಾಹಿತಿ ಆಧಾರಿತ ನಿಖರ ಕಾರ್ಯಾಚರಣೆಯಲ್ಲಿ ಬಿರ್ಭೂಮ್ ಪೊಲೀಸರು ಮೊಹಮ್ಮದ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮಾಫಿಯಾ ಟಿಲ್ಲು ಮಂಡಲ್ ಅಲಿಯಾಸ್ ಮೊಹಮ್ಮದ್ ನಜೀಬುದ್ದೀನ್ ಅಡಗಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ಇದುವರೆಗೆ ₹5.5 ಕೋಟಿ ನಗದು ಹಾಗೂ 15 ಕೆಜಿ ಚಿನ್ನ ಪತ್ತೆಯಾಗಿದ್ದು, ನಗದು ಎಣಿಕೆ ಇನ್ನೂ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭೀಕರ ದುರಂತ: 6 ದಿನ ಸಾಹಸದಿಂದ ಜನರನ್ನು ರಂಜಿಸಿದ್ದ ವ್ಯಕ್ತಿ 'ಜೀವಂತ ಸಮಾಧಿ' ಸಾಹಸ ಪ್ರದರ್ಶನದಲ್ಲಿ ಸಾವು

“ಭ್ರಷ್ಟಾಚಾರ ವಿರುದ್ಧದ ನಮ್ಮ ಸರ್ಕಾರದ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ. ಸಾರ್ವಜನಿಕ ಸಂಪತ್ತನ್ನು ದುರುಪಯೋಗಪಡಿಸಿಕೊಂಡು, ಹಿಂದಿನ ಆಡಳಿತ ಪಕ್ಷದ ಪ್ರಭಾವದಿಂದ ಅಕ್ರಮ ಆಸ್ತಿ ಸಂಪಾದಿಸಿರುವ ಯಾರನ್ನೂ ಬಿಡುವುದಿಲ್ಲ. ಜನರ ಸಂಪತ್ತನ್ನು ಲೂಟಿ ಮಾಡಿದವರು ಕಾನೂನಿನ ಸಂಪೂರ್ಣ ಶಕ್ತಿಯನ್ನು ಎದುರಿಸಬೇಕಾಗುತ್ತದೆ. ಮಾಫಿಯಾ ಜಾಲಗಳ ವಿರುದ್ಧದ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳಲಿದೆ” ಎಂದು ಅವರು ಹೇಳಿದ್ದಾರೆ.

ಸಾರಿಗೆ ಇಲಾಖೆಯ ಮಾಜಿ ಉದ್ಯೋಗಿ
ಮೂಲಗಳ ಪ್ರಕಾರ, ಮಿನಾರ್ ಮಂಡಲ್ ಹಿಂದೆ ರಾಜ್ಯ ಸಾರಿಗೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಂತರ ಕಲ್ಲು ವ್ಯಾಪಾರಕ್ಕೆ ಪ್ರವೇಶಿಸಿದ್ದ. ಆತ ಇಷ್ಟೊಂದು ದೊಡ್ಡ ಪ್ರಮಾಣದ ಆಸ್ತಿಯನ್ನು ಹೇಗೆ ಸಂಪಾದಿಸಿದ ಹಾಗೂ ಆದಾಯದ ಮೂಲವೇನು ಎಂಬುದನ್ನು ತನಿಖಾ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement