ಫರಿದಾಬಾದ್: ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ಶಿಕ್ಷಕಿಯೊಬ್ಬರನ್ನು ವ್ಯಕ್ತಿಯೊಬ್ಬ 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಹಾಡಹಗಲೇ ಶಾಲಾ ಆವರಣದಲ್ಲೇ ನಡೆದ ಈ ಭೀಕರ ಕೃತ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದು, ಆತನನ್ನು ಅಮಿತ್ ಎಂದು ಗುರುತಿಸಿದ್ದಾರೆ. ಹರಿಯಾಣದ ಕೋಟೆ ಗ್ರಾಮದ ನಿವಾಸಿಯಾಗಿರುವ ಅಮಿತ್, ಶಾಲೆಗೆ ಬಂದಾಗ ತನ್ನ ತಲೆ, ಮುಖ ಮತ್ತು ಭುಜಗಳನ್ನು ಬಿಳಿ ಬಟ್ಟೆಯಿಂದ ಮುಚ್ಚಿಕೊಂಡಿದ್ದ ಎನ್ನಲಾಗಿದೆ. ಹತ್ಯೆಯಾದ ಸಂಧ್ಯಾ ಶರ್ಮಾ ಅವರು ಫರಿದಾಬಾದ್ ಜಿಲ್ಲೆಯ ಸಿಕ್ರೋನಾ ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಶಾಲೆಯೊಳಗೆ ಬಂದು ದಾಳಿ
ಶಾಲಾ ಆಡಳಿತ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ಸೋಮವಾರ ಬೆಳಗ್ಗೆ ಸುಮಾರು 9:30ರ ವೇಳೆಗೆ ಅಮಿತ್ ಶಾಲಾ ಆವರಣಕ್ಕೆ ಆಗಮಿಸಿ ಶಿಕ್ಷಕಿ ಸಂಧ್ಯಾ ಅವರನ್ನು ಭೇಟಿಯಾಗಬೇಕೆಂದು ಕೇಳಿದ್ದ. ಹಾಗೂ ಸಂಧ್ಯಾ ಅವರ ಪತಿಯ ಹೆಸರು ಹೇಳಿದ್ದ. ಆಗ ಶಾಲಾ ಸಿಬ್ಬಂದಿ ಈ ವಿಷಯವನ್ನು ಸಂಧ್ಯಾ ಅವರಿಗೆ ತಿಳಿಸಿದಾಗ, ಅವರು ಆತನನ್ನು ಭೇಟಿಯಾಗಲು ಹೊರಗೆ ಬಂದಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿ ಶಾಲೆಯ ಲಾಬಿ ಪ್ರದೇಶದಲ್ಲಿ ಕುಳಿತು ಸಂಧ್ಯಾ ಅವರಿಗಾಗಿ ಕಾಯುತ್ತಿದ್ದ. ಆತ ತನ್ನ ಗುರುತು ಮರೆಮಾಚಲು ತಲೆ, ಮುಖ ಮತ್ತು ಭುಜಗಳನ್ನು ಬಿಳಿ ಬಟ್ಟೆಯಿಂದ ಮುಚ್ಚಿಕೊಂಡಿದ್ದ. ಸಂಧ್ಯಾ ಹೊರಬಂದ ಕೆಲವೇ ಕ್ಷಣಗಳಲ್ಲಿ ಆರೋಪಿ ಏಕಾಏಕಿ ಆಕೆಯ ಕುತ್ತಿಗೆ ಹಿಡಿದು ಹೊರಗೆ ಎಳೆದೊಯ್ದು ಆಕೆಯ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಆತ ಸಂಧ್ಯಾ ಅವರ ಮುಖ, ಕುತ್ತಿಗೆ ಮತ್ತು ಎದೆ ಭಾಗಗಳಿಗೆ ಪದೇಪದೇ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ. ವರದಿಗಳ ಪ್ರಕಾರ, ಆರೋಪಿ ಆಕೆಯ ಮೇಲೆ 27 ಬಾರಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಶಿಕ್ಷಕಿ ನೆಲಕ್ಕೆ ಬಿದ್ದ ನಂತರವೂ ಆರೋಪಿ ಹಲ್ಲೆ ಮುಂದುವರಿಸಿದ್ದಾನೆ.
ತಡೆಯಲು ಬಂದ ಆಡಳಿತಾಧಿಕಾರಿಗೆ ಬೆದರಿಕೆ
ಸಂಧ್ಯಾ ಅವರ ಕಿರುಚಾಟ ಕೇಳಿ ಶಾಲಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಶಾಲೆಯ ಆಡಳಿತಾಧಿಕಾರಿ ಆರೋಪಿ ತಡೆಯಲು ಮುಂದಾಗಿದ್ದು, ಅವರ ಮೇಲೂ ಚಾಕುವಿನಿಂದ ದಾಳಿ ಮಾಡುವುದಾಗಿ ಅಮಿತ್ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಆಡಳಿತಾಧಿಕಾರಿ ಹೇಳುವ ಪ್ರಕಾರ, ಅವರು ಕಚೇರಿಯಲ್ಲಿದ್ದಾಗ ಕಾರಿಡಾರ್ನಿಂದ ಸಹಾಯಕ್ಕಾಗಿ ಕೂಗುವ ಧ್ವನಿ ಕೇಳಿಸಿತು. ಸ್ಥಳಕ್ಕೆ ತೆರಳಿ ನೋಡಿದಾಗ, ಶಿಕ್ಷಕಿ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದು, ಆರೋಪಿ ಇನ್ನೂ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಅವರು ಆರೋಪಿಯನ್ನು ತಡೆಯಲು ಮುಂದಾದಾಗ ಆತ ಚಾಕು ತೋರಿಸಿ ಅವರಿಗೆ ಬೆದರಿಸಿದ್ದಾನೆ. ಬಳಿಕ ಮತ್ತೆ ಸಂಧ್ಯಾ ಅವರ ಮೇಲೆ ದಾಳಿ ನಡೆಸಿ, ನೋಂದಣಿ ಸಂಖ್ಯೆ ಫಲಕವಿಲ್ಲದ ಮೋಟಾರ್ಸೈಕಲ್ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆ ಬಳಿಕ ಪೊಲೀಸರು ತನಿಖೆ ಆರಂಭಿಸಿ, ಕೇವಲ ಎರಡು ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಮಿತ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆಯೇ ಸಂಚು
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಅಮಿತ್ ಈ ಹತ್ಯೆಗೆ ಸುಮಾರು ಎರಡು ತಿಂಗಳುಗಳ ಹಿಂದೆಯೇ ಸಂಚು ರೂಪಿಸಿದ್ದ ಎಂಬುದು ಬೆಳಕಿಗೆ ಬಂದಿದೆ. ದಾಳಿ ನಡೆಸಲು ಆತ ಚಾಕುವೊಂದನ್ನು ಖರೀದಿಸಿ, ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಗೆ ಹೋಗುವಾಗ ಅಥವಾ ಮನೆಗೆ ಹಿಂದಿರುಗುವಾಗ ಸಂಧ್ಯಾ ಅವರ ಮೇಲೆ ದಾಳಿ ನಡೆಸಲು ಮೊದಲು ಯೋಜಿಸಿದ್ದ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಸಿಕ್ಕಿಬೀಳುವ ಭಯದಿಂದ ಶಾಲೆಯೊಳಗೆ ನುಗ್ಗಿ ದಾಳಿ ನಡೆಸಲು ನಿರ್ಧರಿಸಿದ್ದ ಎಂದು ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಅಮಿತ್ ಈ ಹಿಂದೆ ಸಂಧ್ಯಾ ಅವರಿಗೆ ಪ್ರೇಮ ನಿವೇದನೆ ಮಾಡಿದ್ದ. ಆದರೆ ಸಂಧ್ಯಾ ಅದನ್ನು ನಿರಾಕರಿಸಿದ್ದರು. ಅಲ್ಲದೆ, ಅಮಿತ್ ವಿರುದ್ಧ ಸಂಧ್ಯಾ ಈ ಹಿಂದೆ ಕಿರುಕುಳದ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಅಮಿತ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ ಎನ್ನಲಾಗಿದೆ. ನಂತರ ಸಂಧ್ಯಾ ತಮ್ಮ ಶಾಲೆ ಮತ್ತು ಮನೆಯನ್ನು ಬದಲಾಯಿಸಿದ್ದರು. ಇದರಿಂದ ಆರೋಪಿ ತೀವ್ರ ಆಕ್ರೋಶಗೊಂಡಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ವಿಚಾರಣೆ ವೇಳೆ, ಸಂಧ್ಯಾ ಅವರನ್ನು ಪತಿಯ ಹೆಸರನ್ನು ಹೇಳಿ ತರಗತಿಯಿಂದ ಹೊರಗೆ ಕರೆಸಿಕೊಂಡಿದ್ದಾಗಿ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ. ಅವರು ಹೊರಗೆ ಬಂದ ತಕ್ಷಣ ಅವರ ಕೂದಲು ಹಿಡಿದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, “ಆರೋಪಿ ಅತಿಯಾದ ಆಕ್ರೋಶದಲ್ಲಿದ್ದ. ಚಾಕು ಬಾಗಿದ ನಂತರವೂ ಆತ ದಾಳಿ ಮುಂದುವರಿಸಿದ್ದ” ಎಂದು ತಿಳಿಸಿದ್ದಾರೆ. ಹತ್ಯೆಗೆ ಬಳಸಿದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯ ಬೈಕ್ ಮತ್ತು ರಕ್ತಸಿಕ್ತ ಬಟ್ಟೆಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
ಪತಿಯ ಆಕ್ರಂದನ: ಮುಂಚೆಯೇ ಕ್ರಮ ಕೈಗೊಂಡಿದ್ದರೆ ಘಟನೆ ತಪ್ಪಿಸಬಹುದಿತ್ತು
ಸಂಧ್ಯಾ ಅವರ ಪತಿ ವಿಕಿ ಗುರ್ಜರ್ ಮಾತನಾಡಿ, ಸಂಧ್ಯಾ ಅವರು ಈ ಹಿಂದೆ ಸಿರೋಹಿ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಅಮಿತ್ ಪರಿಚಯವಾಗಿದ್ದ ಎಂದು ತಿಳಿಸಿದ್ದಾರೆ. “ಈ ಹಿಂದೆ ದೂರು ನೀಡಿದಾಗಲೇ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು” ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಫಿರೋಜಪುರ ಗ್ರಾಮದ ವಿಕಾಸ್ ಮತ್ತು ಸಂಧ್ಯಾ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ 7 ವರ್ಷದ ಮಗ ಮತ್ತು 5 ವರ್ಷದ ಮಗಳಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ