ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, “ದಿಮಾಗಿ ನಕ್ಸಲ್” ಬಗ್ಗೆ ಎಚ್ಚರಿಸಿದ್ದಾರೆ. ದೇಶದ ಅರಣ್ಯ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ಹೋರಾಡುತ್ತಿದ್ದ ನಕ್ಸಲರನ್ನು ಬಹುತೇಕ ಮಟ್ಟಹಾಕಲಾಗಿದೆ. ಆದರೆ ಅಧಿಕಾರದ ಕಾರಿಡಾರ್ಗಳಲ್ಲಿ ನೆಲೆಸಿರುವ ‘ದಿಮಾಗಿ ನಕ್ಸಲ್’ಗಳು (ಬೌದ್ಧಿಕ ನಕ್ಸಲರು) ಇನ್ನೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರನ್ನು ಗುರುತಿಸಿ, ಪ್ರತ್ಯೇಕಗೊಳಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶನಿವಾರ ದೆಹಲಿಯ ಕೆಂಪುಕೋಟೆಯ ಕೋಟೆಬಾಗಿಲಿನಿಂದ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದ ಯುವಕರನ್ನು ತಪ್ಪು ದಾರಿಗೆಳೆಯುವ ಹಾಗೂ ಸಮಾಜದಲ್ಲಿ ಹಿಂಸಾಚಾರ ಮತ್ತು ಅಶಾಂತಿಗೆ ಕಾರಣವಾಗುವ ಇಂತಹ ಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಕರೆ ನೀಡಿದರು.
‘ಕೆಂಪು ಭಯೋತ್ಪಾದನೆ’ಯು ದೇಶದ ಹಲವು ಭಾಗಗಳನ್ನು ಬಂದೂಕಿನ ನಳಿಕೆಯ ಮೂಲಕ ವರ್ಷಗಳ ಕಾಲ ಒತ್ತೆಯಾಳಾಗಿಸಿತ್ತು ಎಂದು ಪ್ರಧಾನಿ ಹೇಳಿದರು. ಜನರನ್ನು ರಕ್ಷಿಸುವ ಕಾರ್ಯಾಚರಣೆಗಳಲ್ಲಿ 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದಲ್ಲಿ ಸಾವಿಗೀಡಾದವರ ಸಂಖ್ಯೆಯನ್ನೂ ಇದು ಮೀರಿದೆ ಎಂದು ಅವರು ಹೇಳಿದರು.
2014ರಲ್ಲಿ ಅಧಿಕಾರಕ್ಕೆ ಬಂದಾಗಲೇ ದೇಶವನ್ನು ನಕ್ಸಲ್ವಾದದಿಂದ ಮುಕ್ತಗೊಳಿಸುವ ಸಂಕಲ್ಪ ಮಾಡಿದ್ದೆವು ಎಂದು ಹೇಳಿದ ಮೋದಿ, ಮಾವೋವಾದಿ ಹಿಂಸಾಚಾರ ಇದೀಗ ತನ್ನ ಕೊನೆಯ ಉಸಿರೆಳೆಯುತ್ತಿದೆ, ನಕ್ಸಲ್ ಪ್ರಭಾವದಿಂದ ಮುಕ್ತವಾಗಿರುವ ಹಲವು ಪ್ರದೇಶಗಳು ಇದೀಗ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗುತ್ತಿವೆ ಎಂದು ತಿಳಿಸಿದರು.
ವರ್ಷಗಳ ಕಾಲ ‘ನಕ್ಸಲ್ ಮನಸ್ಥಿತಿ’ ಹೊಂದಿದ್ದವರಿಗೆ ಅಧಿಕಾರದ ಕಾರಿಡಾರ್ಗಳಲ್ಲೂ ಸ್ಥಾನವಿತ್ತು ಎಂದು ಪ್ರಧಾನಿ ಆರೋಪಿಸಿದರು. ಅವರು ಸರ್ಕಾರದ ವಿವಿಧ ಸಮಿತಿಗಳಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಮಾವೋವಾದಿ ಚಿಂತನೆಗಳು ನೀತಿ ರೂಪಿಸುವಿಕೆಯ ಮೇಲೂ ಪ್ರಭಾವ ಬೀರಿದ್ದವು ಎಂದು ಅವರು ಹೇಳಿದರು.
“ಕಾಡುಗಳಲ್ಲಿ ಶಸ್ತ್ರ ಹಿಡಿದ ನಕ್ಸಲರನ್ನು ಮಟ್ಟಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೆ ‘ದಿಮಾಗಿ ನಕ್ಸಲರು’ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರು ಹಿಂಸಾಚಾರ, ಅಶಾಂತಿ ಸೃಷ್ಟಿಸಲು ಮತ್ತು ಸಮಾಜವನ್ನು ತಪ್ಪು ದಾರಿಗೆ ಎಳೆಯಲು ಬಯಸುತ್ತಾರೆ” ಎಂದು ಪ್ರಧಾನಿ ಹೇಳಿದರು.
ಇಂತಹ ‘ದಿಮಾಗಿ ನಕ್ಸಲರನ್ನು’ ಗುರುತಿಸಿ, ಸಮಾಜದಿಂದ ಪ್ರತ್ಯೇಕಿಸಬೇಕು. ದೇಶದ ಯುವಜನರನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಅವರನ್ನು ಒಗ್ಗೂಡಿಸಬೇಕು ಎಂದು ಮೋದಿ ಕರೆ ನೀಡಿದರು.
ನಕ್ಸಲಿಸಂನ ಪ್ರಾಬಲ್ಯದಿಂದಾಗಿ ಅಭಿವೃದ್ಧಿ ತಲುಪುವುದು ಅಸಾಧ್ಯವೆಂದು ಒಮ್ಮೆ ಭಾವಿಸಲಾಗಿದ್ದ ದೇಶದ ದೂರದ ಪ್ರದೇಶಗಳಲ್ಲಿಯೂ ಈಗ ಅಭಿವೃದ್ಧಿಯ ಹೆಜ್ಜೆಗುರುತುಗಳು ಕಾಣಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಇದೇ ಪ್ರದೇಶಗಳಲ್ಲಿ ಇಂದು ಅಭಿವೃದ್ಧಿಯ ಧ್ವಜ ಹಾರಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಪಡೆದು 80 ವರ್ಷಗಳಾಗಿರುವ ಸಂದರ್ಭದಲ್ಲಿ ದೇಶವು ಹಿಂದೆ ನಕ್ಸಲಿಸಂನಂತಹ ಹಿಂಸಾತ್ಮಕ ಸವಾಲುಗಳ ಹಿಡಿತದಲ್ಲಿದ್ದುದನ್ನು ನೆನಪಿಸಿದ ಮೋದಿ, ಜನರ ಸುರಕ್ಷತೆಗಾಗಿ ಸಾವಿರಾರು ಭದ್ರತಾ ಸಿಬ್ಬಂದಿ ಬಲಿದಾನ ಮಾಡಿದ್ದಾರೆ ಎಂದು ಹೇಳಿದರು. ಇದೀಗ ಆ ಹಿಂಸೆಯ ಅಂತ್ಯ ಸಮೀಪಿಸಿದ್ದು, ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಪ್ರಧಾನಿ ಒತ್ತಿಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ