ಗೋಕರ್ಣ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಎಲ್ಲ ಬೀಚ್ಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಒಂದು ತಿಂಗಳ ಕಾಲ ಗೋಕರ್ಣದ ಎಲ್ಲ ಬೀಚುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದೆ. ಪ್ರವಾಸಿಗರು ಮುಂದಿನ ಒಂದು ತಿಂಗಳು ಸಮುದ್ರ ತೀರಗಳನ್ನು ಪ್ರವೇಶಿಸುವಂತಿಲ್ಲ.
ಗೋಕರ್ಣದ ಓ ಬೀಚ್, ಕಉಡ್ಲೆ ಬೀಚ್, ಹಾಫ್ ಬೀಚ್ ಹಾಗೂ ಮೇನ್ ಬೀಚ್ ಗಳಿಗೆ ಯಾರೂ ಪ್ರವೇಶಿದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅದೇರೀತಿ ಕುಮಟಾ ತಾಲೂಕಿನ ಅಘನಾಶಿನಿ, ಗುಡೇಅಂಗಡಿ, ಕಾಗಾಲ್ ಹಾಗೂ ಧಾರೇಶ್ವರ ಬೀಚ್ಗಳನ್ನೂ ನಿಷೇಧಿಸಲಾಗಿದೆ.
ಈ ಬೀಚ್ಗಳಲ್ಲಿ ಪ್ರವಾಸಿಗರು ಸಾಯುವುದನ್ನು ತಪ್ಪಿಸಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅನುಮತಿ ಪಡೆಯದೇ ಯಾರೂ ಗೋಕರ್ಣ ಬೀಚಿಗೆ ತೆರಳುವಂತಿಲ್ಲ. ರಾಜ್ಯ ಹಾಗೂ ಹೊರ ರಾಜ್ಯದ ಹಲವು ಪ್ರವಾಸಿಗರು ಗೋಕರ್ಣದಲ್ಲಿ ಸಮುದ್ರಕ್ಕಿಳಿದು ಜೀವ ಕಳೆದುಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪೊಲೀಸರು ಹಾಗೂ ಲೈಫ್ ಗಾರ್ಡ್ಸ್ ಸಿಬ್ಬಂದಿ ತಡೆದರೂ ಕಣ್ತಪ್ಪಿಸಿ ಸಮುದ್ರಕ್ಕಿಳಿದು ಜೀವ ಕಳೆದುಕೊಳ್ಳುತ್ತಿದ್ದರು. ಈ ಕಾರಣದಿಂದ ಸೇಫ್ ಬೀಚ್ ಹಾಗೂ ಡೇಂಜರ್ ಬೀಚ್ ಎಂದು ಸಮುದ್ರ ತೀರವನ್ನು ವಿಂಗಡಿಸಿದ್ದಾರೆ. ಆದರೂ ಸದ್ಯದ ಮಟ್ಟಿಗೆ ಯಾರೂ ಸಮುದ್ರಕ್ಕಿಳಿಯದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ವಾರಾಂತ್ಯಗಳಂದು ಬೆಂಗಳೂರು ಮತ್ತಿತರ ನಗರಗಳು ಮತ್ತು ಉತ್ತರ ಕರ್ನಾಟಕದ ಭಾಗದಿಂದ ನೂರಾರು ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುತ್ತಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ಹಲವು ಪ್ರವಾಸಿಗರು ಸಮುದ್ರ ಪಾಲಾದ ಘಟನೆ ನಡೆದಿದೆ. ಇತ್ತೀಚಿಗಷ್ಟೇ ಸೆಲ್ಪಿ ತೆಗೆಯಲು ಹೋದ ಪ್ರವಾಸಿಗನೋರ್ವ ಸಮುದ್ರದಲ್ಲಿ ಎಲ್ಲರ ಎದುರೇ ಕೊಚ್ಚಿಕೊಂಡು ಹೋದ ಘಟನೆಯೂ ನಡೆದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ