ಭಟ್ಕಳ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಝಾರ್ ಶಾಖೆಯಲ್ಲಿ ಅಂದಾಜು ₹ 1.50 ಕೋಟಿ ಅವ್ಯವಹಾರ ನಡೆದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಈ ಹಿಂದೆ ಶಾಖಾ ವ್ಯವಸ್ಥಾಪಕರಾಗಿದ್ದ ಮಂಗಳೂರಿನ ಕಾವೂರು ಬೊಳ್ಪುಗಡ್ಡೆ ನಿವಾಸಿ ಅನೂಪ್ ದಿನಕರ ಪೈ ವಿರುದ್ಧ ಈ ಆರೋಪ ಮಾಡಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
2019ರ ಫೆ.11ರಿಂದ 2022ರ ಏಪ್ರಿಲ್ ಅವಧಿಯಲ್ಲಿ, ಬ್ಯಾಂಕಿನಲ್ಲಿ ತುರ್ತು ಸಂದರ್ಭಕ್ಕೆಂದು ಇಡಲಾಗಿದ್ದ ಸಿಸ್ಟಮ್ ಅಕೌಂಟ್ ನಿಂದ ಹಣ ಡ್ರಾ ಮಾಡುತ್ತಿದ್ದ ಇವರು ಸುಮಾರು ಒಂದೂವರೆ ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆಸಿದ್ದಾರೆನ್ನಲಾಗಿದೆ.
ಬ್ಯಾಂಕಿನ ‘ಸಿಸ್ಟಮ್ ಸಸ್ಪೆನ್ಸ್’ ಖಾತೆಗೆ 1.50 ಕೋಟಿ ರೂ.ಗಳ ಖರ್ಚು ತೋರಿಸಿದ್ದಾರೆ. ಅಲ್ಲದೆ, ಆ ಹಣವನ್ನು ಬ್ಯಾಂಕಿನ ಗ್ರಾಹಕರ ಖಾತೆಗೆ ಜಮೆ ಮಾಡಿ ಹಣ ದುರುಪಯೋಗ ಮಾಡಿ ಬ್ಯಾಂಕಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಮುಖ್ಯ ಅಂಚೆ ಕಚೇರಿಯ ಪಕ್ಕದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯಲ್ಲಿ ಅವ್ಯವಹಾರವಾಗಿತ್ತು. ₹ 50 ಲಕ್ಷ ಅಕ್ರಮಕ್ಕೆ ಸಂಬಂಧಿಸಿ ತನಿಖೆ ನಡೆಸಿದ್ದ ಬ್ಯಾಂಕ್ ಅಧಿಕಾರಿಗಳು, ನಗದು ವಿಭಾಗದ ವ್ಯವಸ್ಥಾಪಕರನ್ನು ಸೇವೆಯಿಂದ ವಜಾಗೊಳಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ