
ನವದೆಹಲಿ: ದೆಹಲಿಯ ಪಿತಾಂಪುರ ಪ್ರದೇಶದಲ್ಲಿರುವ ರೆಸ್ಟೋರೆಂಟ್ಗೆ ದಂಪತಿಗೆ ಸಾಂಪ್ರದಾಯಿಕ ಭಾರತೀಯ ಉಡುಗೆ ತೊಟ್ಟಿದ್ದಕ್ಕಾಗಿ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ದೆಹಲಿಯ ಪಿತಾಂಪುರ ಪ್ರದೇಶದಲ್ಲಿರುವ ರೆಸ್ಟೋರೆಂಟ್ಗೆ ಪ್ರವೇಶ ನಿರಾಕರಿಸಿದ ನಂತರ ದಂಪತಿ ತಮಗೆ ಆದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾರೆ.
ಇತರರನ್ನು ಒಳಗೆ ಬಿಡುತ್ತಿದ್ದಾಗ, ರೆಸ್ಟೋರೆಂಟ್ ಮ್ಯಾನೇಜರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದಂಪತಿ ಹೇಳಿಕೊಂಡಿದ್ದು, ಕ್ಲಿಪ್ ರೆಕಾರ್ಡ್ ಮಾಡಿದ ವ್ಯಕ್ತಿ ಭಾರತೀಯ ಉಡುಗೆ ತೊಟ್ಟ ಜನರಿಗೆ ಅವಕಾಶ ನೀಡದ ರೆಸ್ಟೋರೆಂಟ್ ಕಾರ್ಯನಿರ್ವಹಿಸಲು ಯಾವುದೇ ಹಕ್ಕನ್ನು ಹೊಂದಿಲ್ಲ ಮತ್ತು ಅದನ್ನು ತಕ್ಷಣವೇ ಮುಚ್ಚಬೇಕು ಎಂದು ಹೇಳಿದ್ದಾರೆ.

ವೀಡಿಯೊ ವೈರಲ್ ಆದ ನಂತರ, ದೆಹಲಿ ಕ್ಯಾಬಿನೆಟ್ ಸಚಿವ ಕಪಿಲ್ ಮಿಶ್ರಾ ಘಟನೆಯನ್ನು ಒಪ್ಪಿಕೊಂಡರು ಮತ್ತು ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
“ದೆಹಲಿಯಲ್ಲಿ ಇದು ಸ್ವೀಕಾರಾರ್ಹವಲ್ಲ. ಪಿತಂಪುರದ ರೆಸ್ಟೋರೆಂಟ್ನಲ್ಲಿ ಭಾರತೀಯ ಉಡುಪುಗಳ ಮೇಲೆ ನಿಷೇಧ ಹೇರಿರುವುದನ್ನು ತೋರಿಸುವ ವೀಡಿಯೊವೊಂದು ಕಾಣಿಸಿಕೊಂಡಿದೆ. ಇದು ಸ್ವೀಕಾರಾರ್ಹವಲ್ಲ. ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಮಿಶ್ರಾ X ನಲ್ಲಿ ಹೇಳಿದ್ದಾರೆ.
ನಂತರದ ಪೋಸ್ಟ್ನಲ್ಲಿ, ರೆಸ್ಟೋರೆಂಟ್ ಮಾಲೀಕರು ಇನ್ನು ಮುಂದೆ ತಮ್ಮ ಸಂಸ್ಥೆಗೆ ಗ್ರಾಹಕರ ಪ್ರವೇಶಕ್ಕೆ ಯಾವುದೇ ಉಡುಪುಗಳ ಮೇಲೆ ನಿಷೇಧ ಹೇರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.
“ಈ ಪಿತಂಪುರದ ರೆಸ್ಟೋರೆಂಟ್ನ ನಿರ್ವಾಹಕರು ಇನ್ನು ಮುಂದೆ ಉಡುಪಿನ ಆಧಾರದ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಮತ್ತು ಭಾರತೀಯ ಉಡುಪುಗಳಲ್ಲಿ ಬರುವ ನಾಗರಿಕರಿಗೆ ಪ್ರವೇಶ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ರಕ್ಷಾಬಂಧನದಂದು, ಭಾರತೀಯ ಉಡುಪುಗಳಲ್ಲಿ ಬರುವ ಸಹೋದರಿಯರಿಗೆ ಅವರು ಕೆಲವು ರಿಯಾಯಿತಿಗಳನ್ನು ಸಹ ನೀಡುತ್ತಾರೆ” ಎಂದು ಮಿಶ್ರಾ ಹೇಳಿದರು.
ಏತನ್ಮಧ್ಯೆ, ರೆಸ್ಟೋರೆಂಟ್ ಮಾಲೀಕ ನೀರಜ ಅಗರ್ವಾಲ್ ಆರೋಪಗಳನ್ನು ನಿರಾಕರಿಸಿದ್ದಾರೆ. ದಂಪತಿ ಸ್ಥಳ ಕಾಯ್ದಿರಿಸದ ಕಾರಣ ಪ್ರವೇಶ ನಿರಾಕರಿಸಲಾಗಿದೆ ಎಂದು ಹೇಳಿದರು. ರೆಸ್ಟೋರೆಂಟ್ನಲ್ಲಿ ಡ್ರೆಸ್ ಕೋಡ್ ಇಲ್ಲ ಮತ್ತು ರೆಸ್ಟೋರೆಂಟ್ ಎಲ್ಲಾ ಗ್ರಾಹಕರನ್ನು ಸ್ವಾಗತಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಚರ್ಚೆಗೆ ನಾಂದಿ ಹಾಡಿತು, ಮುಖ್ಯಮಂತ್ರಿಯ ಮಧ್ಯಪ್ರವೇಶದ ನಂತರವೂ ಕೆಲವು ಬಳಕೆದಾರರು ರೆಸ್ಟೋರೆಂಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ