ನವದೆಹಲಿ : ವಂದೇ ಮಾತರಂಗೆ ಸಂಬಂಧಿಸಿದಂತೆ 1937ರಲ್ಲಿ ಅಂದಿನ ಕಾಂಗ್ರೆಸ್ನ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆ ಅಂಗೀಕರಿಸಿದ್ದ ನಿರ್ಣಯಕ್ಕೆ ಬದ್ಧವಾಗಿರಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಬುಧವಾರ ತೀರ್ಮಾನಿಸಿದೆ. ಇದರಂತೆ, ಇನ್ನು ಮುಂದೆ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯಾದ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ನಾಯಕರು ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆದ ಸಿಡಬ್ಲ್ಯುಸಿ (CWC) ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ಪಕ್ಷದ ನಿಲುವಿನಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. 1937ರಲ್ಲಿ ಕಾಂಗ್ರೆಸ್ನ ಅಗ್ರ ನಾಯಕತ್ವ ಕೈಗೊಂಡ ನಿರ್ಧಾರವನ್ನೇ ಪಕ್ಷ ಈಗಲೂ ಪಾಲಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
“ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. 1937ರ ನಿರ್ಣಯದ ಹಿಂದೆ ಕಾಂಗ್ರೆಸ್ನ ಅಂದಿನ ಅಗ್ರ ನಾಯಕತ್ವವಿತ್ತು. ಮಹಾತ್ಮ ಗಾಂಧೀಜಿ, ಪಂಡಿತ್ ಜವಾಹರಲಾಲ ನೆಹರು, ರವೀಂದ್ರನಾಥ ಟ್ಯಾಗೋರ್, ಸುಭಾಷಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಸೇರಿದಂತೆ ಪ್ರಮುಖ ನಾಯಕರು ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅವರು ತೆಗೆದುಕೊಂಡ ನಿರ್ಧಾರವನ್ನೇ ನಾವು ಪಾಲಿಸಲು ತೀರ್ಮಾನಿಸಿದ್ದೇವೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಅದನ್ನೇ ಅನುಸರಿಸಲಿದ್ದಾರೆ” ಎಂದು ವೇಣುಗೋಪಾಲ ಹೇಳಿದರು.
ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನೇ ಹಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು “ಹೌದು, ಮೊದಲ ಎರಡು ಚರಣಗಳು” ಎಂದು ಉತ್ತರ ನೀಡಿದರು.
ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯಾದ ಜನಗಣಮನ ಕಾಂಗ್ರೆಸ್ಗೆ ಭಾವನಾತ್ಮಕ ವಿಷಯಗಳಾಗಿವೆ. ಆದರೆ ಬಿಜೆಪಿಗೆ ಅವು ರಾಜಕೀಯ ವಿಷಯಗಳಾಗಿವೆ ಎಂದು ವೇಣುಗೋಪಾಲ ಆರೋಪಿಸಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ವಂದೇ ಮಾತರಂನ ಸಂಪೂರ್ಣ ಆವೃತ್ತಿ ಹಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಬಿಜೆಪಿ ಟೀಕಿಸಿರುವುದನ್ನೂ ವೇಣುಗೋಪಾಲ್ ತಳ್ಳಿಹಾಕಿದರು. ಇದು ದೇಶದ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಬಿಜೆಪಿ ತಂತ್ರ ಎಂದು ಅವರು ಆರೋಪಿಸಿದರು.
“ಪೇಪರ್ ಲೀಕ್ ಮತ್ತು ‘ಚಂದಾ ಚೋರಿ’ಯಂತಹ ರಾಷ್ಟ್ರೀಯ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಈ ವಿಚಾರವನ್ನು ಬಳಸುತ್ತಿದೆ” ಎಂದು ಅವರು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ್ ಕೂಡ 1937ರ ನಿರ್ಣಯವನ್ನು ಉಲ್ಲೇಖಿಸಿ ಪಕ್ಷದ ನಿಲುವನ್ನು ವಿವರಿಸಿದರು.
“ಇಂದಿನ ಸಿಡಬ್ಲ್ಯುಸಿ (CWC) ಸಭೆಯಲ್ಲೂ ಆ ನಿರ್ಣಯದ ಕುರಿತು ಚರ್ಚೆ ನಡೆಯಿತು. ಕಾಂಗ್ರೆಸ್ ಅಧ್ಯಕ್ಷರೂ ಹಿಂದಿನ ನಿರ್ಣಯದ ಒಂದು ಭಾಗವನ್ನು ಓದಿದರು. ಈ ವಿಷಯದಲ್ಲಿ ಯಾವುದೇ ವಿವಾದವಿಲ್ಲ. ಇಂದಿನ ಯುವಜನತೆ, ಪರೀಕ್ಷೆಗಳು, ‘ಚಂದಾ ಚೋರಿ’ ಮತ್ತು ವಿದೇಶಾಂಗ ನೀತಿಯ ವೈಫಲ್ಯ ಸೇರಿದಂತೆ ಪ್ರಮುಖ ವಿಚಾರಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಈ ವಿಷಯವನ್ನು ಉದ್ದೇಶಪೂರ್ವಕವಾಗಿ ವಿವಾದವನ್ನಾಗಿ ಮಾಡಲಾಗುತ್ತಿದೆ” ಎಂದು ಜೈರಾಮ ರಮೇಶ ಹೇಳಿದರು.
ಕಾಂಗ್ರೆಸ್ನ ನಿಲುವು ಮೊದಲಿನಿಂದಲೂ ಸ್ಪಷ್ಟವಾಗಿದೆ ಎಂದ ಅವರು, 1937ರ ಅಕ್ಟೋಬರ್ 28ರ ನಿರ್ಣಯದಂತೆ ಹಾಗೂ ಕಾಂಗ್ರೆಸ್ನ ಮೊದಲ ಅಧ್ಯಕ್ಷರಾಗಿದ್ದ ರಾಜೇಂದ್ರ ಪ್ರಸಾದ ಅವರು ಹೇಳಿದ್ದಂತೆ, ‘ಜನಗಣಮನ’ ರಾಷ್ಟ್ರಗೀತೆ ಮತ್ತು ‘ವಂದೇ ಮಾತರಂ’ ರಾಷ್ಟ್ರಗೀತೆ (National Song) ಎಂಬ ಸ್ಥಾನಮಾನ ಹೊಂದಿವೆ ಎಂದು ಹೇಳಿದರು.
ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡಬೇಕೆಂಬ ಬಿಜೆಪಿಯ ಒತ್ತಾಯದ ನಡುವೆಯೇ, 1937ರಲ್ಲಿ ಕಾಂಗ್ರೆಸ್ ನಾಯಕತ್ವ ಕೈಗೊಂಡ ನಿರ್ಣಯವನ್ನೇ ಮುಂದುವರಿಸುವುದಾಗಿ ಕಾಂಗ್ರೆಸ್ ಬುಧವಾರ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಪಕ್ಷದ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಮೊದಲ ಎರಡು ಚರಣಗಳಷ್ಟೇ ಹಾಡಲಾಗುವುದು ಎಂಬುದು ಸಿಡಬ್ಲ್ಯುಸಿ (CWC) ನಿರ್ಧಾರವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ