ಇಳಕಲ್ಲ ಹೇರ್ ಡ್ರೈಯರ್‌ ಸ್ಫೋಟ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ; ಬೇರೊಬ್ಬರ ಕೊಲೆಗೆ ರೂಪಿಸಿದ ಸಂಚು : ಪ್ರೇಯಸಿಯ ಕೈ ಛಿದ್ರ…!

ಬಾಗಲಕೋಟೆ : ಜಿಲ್ಲೆಯ ಇಳಕಲ್‌ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಹೇರ್ ಡ್ರೈಯರ್ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಘಟನೆಗೆ ಕಾರಣವೇನು ಎಂಬುವುದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಮಹಿಳೆಯೊಬ್ಬರನ್ನು ಕೊಲೆ ಮಾಡಲು ನಡೆಸಿದ ರೂಪಿಸಿದ ಸಂಚು ಎಂಬುದು ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.
ಸಿದ್ದಪ್ಪ ಶೀಲವಂತ ಎಂಬಾತ ಮಹಿಳೆ ಕೊಲೆಗೆ ಸ್ಕೆಚ್ಚ ಹಾಕಿದ್ದ ಆರೋಪಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನವೆಂಬರ್‌ 15 ರಂದು ಹೇರ್​ ಡ್ರೈಯರ್​​ ಬ್ಲಾಸ್ಟ್ ಆಗಿ, ಮೃತ ಯೋಧನ ಪತ್ನಿ ಬಸಮ್ಮ (35) ಎಂಬವರ ಅವರ ಎರಡು ಕೈಗಳು ಛಿದ್ರವಾಗಿದ್ದವು. ಕೇವಲ ಹೇರ್ ಡ್ರೈಯರ್ ಬ್ಲಾಸ್ಟ್​ನಿಂದ ಇಷ್ಟೊಂದು ಬಲವಾದ ಸ್ಫೋಟ ಹೇಗೆ ಸಾಧ್ಯ ಎಂಬ ಅನುಮಾನಗಳು ಕಾಡಿದ್ದವು. ಹೀಗಾಗಿ ತನಿಖೆಗೆ ಇಳಿದ ಇಳಕಲ್ ನಗರ ಠಾಣೆ ಪೊಲೀಸರು ಸ್ಫೋಟದ ಹಿಂದಿನ ರಹಸ್ಯ ಭೇದಿಸಿದ್ದಾರೆ.

ಪ್ರಕರಣದ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಪ್ರಕರಣದ ಸಂಬಂಧ ಸಿದ್ದಪ್ಪ ಶೀಲವಂತ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಹೇರ್‌ ಡ್ರೈಯರ್‌ ಮಹಿಳೆಯೊಬ್ಬರನ್ನು ಟಾರ್ಗೆಟ್‌ ಮಾಡಲು ಹೇರ್‌ ಡ್ರೈಯರ್‌ ಸ್ಫೋಟವಾಗುವಂತೆ ಮಾಡಲು ಈತ ಸಂಚು ರೂಪಿಸಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ಮಹಿಳೆ ಹಾಗೂ ಆರೋಪಿಯ ನಡುವಿನ ಸಂಬಂಧವೇ ಕಾರಣ. ಹೇರ್ ಡ್ರೈಯರ್ ಮೂಲಕ ಬಸಮ್ಮಳ ಸ್ನೇಹಿತೆ ಶಶಿಕಲಾ ಅವರ ಕೊಲೆಗೆ ಸಂಚು ರೂಪಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಫೋಟದಿಂದ ಗಾಯಗೊಂಡಿರುವ ಬಸಮ್ಮ ಮತ್ತು ಆರೋಪಿ ಸಿದ್ದಪ್ಪನ ನಡುವೆ ಸಲುಗೆ ಇತ್ತು. ಗಾಯಾಳು ಬಸಮ್ಮ ಹಾಗೂ ಸಿದ್ದಪ್ಪ ಶೀಲವಂತ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಬಸಮ್ಮಳ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು‌. ನೀನು ಮಾಡುತ್ತಿರುವುದು ಸರಿಯಲ್ಲ ಶಶಿಕಲಾ ತನ್ನ ಸ್ನೇಹಿತೆ ಬಸಮ್ಮಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ, ಬಸಮ್ಮ ಇದರ ನಂತರ ಸಿದ್ದಪ್ಪನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಕೋಪಗೊಂಡಿದ್ದ ಆರೋಪಿ ಸಿದ್ದಪ್ಪ ಹೇರ್ ಡ್ರೈಯರ್ ನಲ್ಲಿ ಡೆಟೊನೇಟರ್‌ ಅಳವಡಿಸಿ ಕೋರಿಯರ್​ ಮಾಡುವ ಮೂಲಕ ಶಶಿಕಲಾ ಅವರನ್ನು ಮುಗಿಸಲು ಸಂಚು ರೂಪಿಸಿದ್ದ. ಆದರೆ ಅದನ್ನು ಬಸಮ್ಮ ತೆಗೆದುಕೊಂಡು ನೋಡಿದ್ದರಿಂದ ಕೈಗಳನ್ನು ಕಳೆದುಕೊಳ್ಳುವಂತಾಗಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಅಮರನಾಥ ರೆಡ್ಡಿ ಹೇಳಿದರು.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

ಹೇರ್ ಡ್ರೈಯರ್ ಮೂಲಕ ಕೊಲೆಗೆ ಸಂಚು…!
ಆರೋಪಿ ಸಿದ್ದಪ್ಪ ತಾನೇ ಹೇರ್ ಡ್ರೈಯರ್ ಖರೀದಿಸಿ, ಹೇರ್ ಡ್ರೈಯರ್ ಒಳಗೆ ಸ್ಫೋಟಗೊಳ್ಳುವಂತೆ ಡೆಟೊನೇಟರ್ ಇಟ್ಟು ಶಶಿಕಲಾ ವಿಳಾಸಕ್ಕೆ ಕೊರಿಯರ್‌ ಕಳುಹಿಸಿದ್ದಾನೆ. ಅಂದು ಶಶಿಕಲಾ ಊರಲ್ಲಿ ಇಲ್ಲದ ಕಾರಣ ತನ್ನ ಸ್ನೇಹಿತೆ ಬಸಮ್ಮಳಿಗೆ ತನಗೆ ಬಂದ ಕೊರಿಯರ್‌ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಬಸಮ್ಮ ಕೊರಿಯರ್‌ ಪಡೆದಿದ್ದಾಳೆ. ಅದರಲ್ಲಿ ಹೇರ್‌ ಡ್ರೈಯರ್‌ ಇತ್ತು. ಬಸಮ್ಮಳಿಗೆ ಅದನ್ನು ಕಂಡು ಕುತೂಹಲ ತಡೆಯಲಾಗದೇ ಹೇರ್ ಡ್ರೈಯರ್ ಆನ್ ಮಾಡಿದ್ದಾಳೆ. ಹೇರ್ ಡ್ರೈಯರ್ ಆನ್ ಮಾಡುತ್ತಿದ್ದಂತೆ ಅದರೊಳಗೆ ಅಳವಡಿಸಿದ ಡೆಟೊನೇಟರ್‌ ಬ್ಲಾಸ್ಟ್ ಆಗಿದೆ. ಹೇರ್‌ ಡ್ರೈಯರ್‌ ಇಷ್ಟೊಂದು ಬಲವಾಗಿ ಬ್ಲಾಸ್ಟ್‌ ಆಗಲು ಹೇಗೆ ಸಾಧ್ಯ ಎಂದು ಅನುಮಾನ ಮೂಡಿ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಸಿದ್ದಪ್ಪ ಮತ್ತು ಬಸಮ್ಮ ಪುರ್ತಗೇರಿ ಗ್ರಾಮದವರು. ಒಂದೇ ಊರಲ್ಲಿದ್ದಾಗ ಇಬ್ಬರ ನಡುವೆ ಸಲುಗೆ ಇತ್ತು. ಆದರೆ, ಬಸಮ್ಮ ಮನೆಯವರು ಬಾಗಲಕೋಟೆಯ ರಕ್ಕಸಗಿ ಗ್ರಾಮದ ಯೋಧ ಪಾಪಣ್ಣ ಎಂಬುವರ ಜೊತೆ ಮದುವೆ ಮಾಡಿದ್ದರು. ಆದರೆ, ಬಸಮ್ಮಳ ಗಂಡ ಪಾಪಣ್ಣ 2017ರಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದರು. 5 ವರ್ಷಗಳ ಹಿಂದೆ ಬಸಮ್ಮ- ಸಿದ್ದಪ್ಪ ಪುನಃ ಭೇಟಿಯಾಗಿದ್ದರು ಇಳಕಲ್​ನ ಬಸವನಗರದಲ್ಲಿ ವಾಸವಿದ್ದ ಬಸಮ್ಮ ಮನೆಗೆ ಆರೋಪಿ ಸಿದ್ದಪ್ಪ ಬರುತ್ತಿದ್ದ. ಆರೋಪಿ ಎಂಎ, ಬಿಇಡಿ ಮುಗಿಸಿದ್ದ ಆರೋಪಿ ಸಿದ್ದಪ್ಪ ಕೊಪ್ಪಳದಲ್ಲಿ ಡಾಲ್ಫಿನ್ ಇಂಟರ್ನ್ಯಾಷನಲ್ ಗ್ರಾನೈಟ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಹೀಗಾಗಿ ಶಶಿಕಲಾ ಅವರನ್ನು ಮುಗಿಸಲು ಹೇರ್ ಡ್ರೈಯರ್ ಒಳಗೆ ಕಲ್ಲುಗಳನ್ನು ಬ್ಲಾಸ್ಟ್ ಮಾಡಲು ಬಳಸುವ ಡೆಟೋನೇಟರ್ ಇಟ್ಟಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ” ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಭಾರಿ ಮಳೆ ; ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ಇಂದು (ಜೂ.25) ರಜೆ ಘೋಷಣೆ

4.6 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement