ತಾಶ್ಕೆಂಟ್ : ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹೊಸ ಮೈಲಿಗಲ್ಲು ತಲುಪಿದ್ದು, ಉಜ್ಬೇಕಿಸ್ತಾನ್ನಿಂದ ಭಾರತಕ್ಕೆ ದೀರ್ಘಾವಧಿಯ ಯುರೇನಿಯಂ ಪೂರೈಕೆಗೆ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿವೆ.
ತಾಶ್ಕೆಂಟ್ನಲ್ಲಿ ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಅವರ ಜೊತೆ ನಡೆದ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಈ ಮಹತ್ವದ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.
ಇಂಧನ, ಮಹತ್ವದ ಖನಿಜಗಳು (Critical Minerals), ಮೂಲಸೌಕರ್ಯ, ರಕ್ಷಣಾ ಕ್ಷೇತ್ರ, ತಂತ್ರಜ್ಞಾನ ಸೇರಿದಂತೆ ಹಲವು ವಲಯಗಳಲ್ಲಿ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಇದೇ ವೇಳೆ ಭಾರತ ಮತ್ತು ಉಜ್ಬೇಕಿಸ್ತಾನ್ ತಮ್ಮ ಸಂಬಂಧವನ್ನು “ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ” (Comprehensive Strategic Partnership) ಮಟ್ಟಕ್ಕೆ ಏರಿಸಲು ನಿರ್ಧರಿಸಿವೆ.
ಪ್ರಸ್ತುತ 1 ಬಿಲಿಯನ್ ಅಮೆರಿಕನ್ ಡಾಲರ್ಗಿಂತ ಅಧಿಕವಾಗಿರುವ ಉಭಯ ದೇಶಗಳ ವಾರ್ಷಿಕ ವ್ಯಾಪಾರ ವಹಿವಾಟನ್ನು 2030ರ ವೇಳೆಗೆ 5 ಬಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿಯನ್ನೂ ನಿಗದಿಪಡಿಸಲಾಗಿದೆ. ಭಾರತವು ತನ್ನ ನಾಗರಿಕ ಅಣುಶಕ್ತಿ ಯೋಜನೆಗಳಿಗೆ ಯುರೇನಿಯಂ ಆಮದು ಮೂಲಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ಯುರೇನಿಯಂ ಪೂರೈಕೆ ಒಪ್ಪಂದವು ವಿಶೇಷ ಮಹತ್ವ ಪಡೆದಿದೆ.
ಮಾತುಕತೆ ವೇಳೆ ಪ್ರಧಾನಿ ಮೋದಿ, “ಯುರೇನಿಯಂ ಪೂರೈಕೆಗೆ ದೀರ್ಘಾವಧಿಯ ವ್ಯವಸ್ಥೆಯನ್ನು ನಾವು ಸ್ಥಾಪಿಸಲಿದ್ದೇವೆ” ಎಂದು ಘೋಷಿಸಿದರು. ಹೊಸ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಡಿ ಸ್ಪಷ್ಟ ಗುರಿಗಳನ್ನು ರೂಪಿಸಬೇಕೆಂದು ಅವರು ಕರೆ ನೀಡಿದರು.
ಇದೇ ವೇಳೆ ಉಭಯ ದೇಶಗಳ ನಡುವಿನ ಸಹಕಾರಕ್ಕೆ ಮಾರ್ಗದರ್ಶನ ನೀಡಲು ವಿದೇಶಾಂಗ ಸಚಿವರ ಮಟ್ಟದಲ್ಲಿ ಸಮನ್ವಯ ಮಂಡಳಿ (Coordination Council) ಸ್ಥಾಪಿಸುವ ಪ್ರಸ್ತಾವವನ್ನೂ ಪ್ರಧಾನಿ ಮೋದಿ ಮುಂದಿಟ್ಟರು. ಜೊತೆಗೆ, ಈಗ ಕಾರ್ಯದರ್ಶಿ ಮಟ್ಟದಲ್ಲಿರುವ ಜಂಟಿ ಆಯೋಗವನ್ನು ಸಚಿವರ ಮಟ್ಟಕ್ಕೆ ಉನ್ನತೀಕರಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ಭಾರತ ಮತ್ತು ಉಜ್ಬೇಕಿಸ್ತಾನ್ ಕಂಪನಿಗಳ ಭಾಗವಹಿಸುವಿಕೆಯಲ್ಲಿ ಜಂಟಿಯಾಗಿ ವ್ಯಾಪಾರ ಶೃಂಗಸಭೆ (Business Summit) ಆಯೋಜಿಸಲು ಸಹ ನಿರ್ಧರಿಸಲಾಗಿದೆ.
ಯುರೇನಿಯಂ ಸಹಕಾರದ ಹೊರತಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure), ಕೃತಕ ಬುದ್ಧಿಮತ್ತೆ (AI), ಮಹತ್ವದ ಖನಿಜಗಳು, ಶುದ್ಧ ಇಂಧನ, ಬಾಹ್ಯಾಕಾಶ ಹಾಗೂ ಅಣುಶಕ್ತಿ ಕ್ಷೇತ್ರಗಳಲ್ಲಿಯೂ ಸಹಕಾರ ವಿಸ್ತರಿಸುವ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಭಾರತದ ಗಿಫ್ಟ್ ಸಿಟಿ (GIFT City) ಮತ್ತು ಉಜ್ಬೇಕಿಸ್ತಾನ್ನ ನ್ಯೂ ತಾಶ್ಕೆಂಟ್ (New Tashkent) ಯೋಜನೆಗಳ ನಡುವೆ ನಗರಾಭಿವೃದ್ಧಿ, ತಂತ್ರಜ್ಞಾನ ಹಾಗೂ ಆಡಳಿತ ಅನುಭವ ಹಂಚಿಕೊಳ್ಳುವ ಅವಕಾಶಗಳಿವೆ ಎಂದು ಅವರು ಹೇಳಿದರು.
ಅಧ್ಯಕ್ಷ ಮಿರ್ಜಿಯೊಯೆವ್ ಮಾತನಾಡಿ, ಇಂಧನ, ಮಹತ್ವದ ಖನಿಜಗಳು, ಔಷಧೋದ್ಯಮ, ಆಭರಣ ಉದ್ಯಮ ಹಾಗೂ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾರ್ಯಯೋಜನೆಗಳನ್ನು (Sector-Specific Roadmaps) ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು. ಬಾಹ್ಯಾಕಾಶ, ಡಿಜಿಟಲ್ ನವೋದ್ಯಮ, ಕೃತಕ ಬುದ್ಧಿಮತ್ತೆ ಮತ್ತು ಸ್ಟಾರ್ಟ್ಅಪ್ ಕ್ಷೇತ್ರಗಳಲ್ಲಿಯೂ ಸಹಕಾರ ವೃದ್ಧಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು.
ಉಭಯ ನಾಯಕರ ನಡುವಿನ ಮಾತುಕತೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ, ಮೂಲಸೌಕರ್ಯ, ಗಣಿಗಾರಿಕೆ, ಮಹತ್ವದ ಖನಿಜಗಳು, ರಕ್ಷಣಾ ಮತ್ತು ಭದ್ರತೆ, ಕೃಷಿ, ಔಷಧೋದ್ಯಮ, ಆರೋಗ್ಯ ಸೇವೆ, ಮಾಹಿತಿ ತಂತ್ರಜ್ಞಾನ, ಯುಪಿಐ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಬಗ್ಗೆ ಸವಿಸ್ತಾರ ಚರ್ಚೆ ನಡೆಯಿತು.
ಭಾರತದ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳ ಸಾಮರ್ಥ್ಯವು ಉಜ್ಬೇಕಿಸ್ತಾನ್ನ ತೋಟಗಾರಿಕಾ ಅನುಭವಕ್ಕೆ ಪೂರಕವಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಉಜ್ಬೇಕಿಸ್ತಾನ್ನ ಔಷಧೀಯ ಸಸ್ಯಗಳ ಕ್ಷೇತ್ರ ಮತ್ತು ಭಾರತದ ಆಯುರ್ವೇದ ಪರಿಣತಿಯ ನಡುವೆ ಸಹಕಾರ ವಿಸ್ತರಿಸುವ ಸಾಧ್ಯತೆಯನ್ನೂ ಅವರು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಗಣಿಗಾರಿಕೆ, ಸಂಸ್ಕೃತಿ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆಯುರ್ವೇದ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಒಪ್ಪಂದಗಳಿಗೆ ಉಭಯ ನಾಯಕರು ಸಾಕ್ಷಿಯಾದರು. ಜೊತೆಗೆ ಉಜ್ಬೇಕಿಸ್ತಾನ್ನಲ್ಲಿರುವ ಐತಿಹಾಸಿಕ ಬೌದ್ಧ ತಾಣಗಳಾದ ಫಯಾಜ್ ತೆಪಾ (Fayaz Tepa) ಮತ್ತು ಕಾರಾ ತೆಪಾ (Kara Tepa)ಗಳ ಪುನಶ್ಚೇತನ ಹಾಗೂ ಸಂರಕ್ಷಣೆಗೆ ಉದ್ದೇಶಿತ ಪತ್ರ (Letter of Intent) ಮೇಲೂ ಒಪ್ಪಿಗೆ ಸೂಚಿಸಲಾಯಿತು.
ಇದೇ ವೇಳೆ ಮೂರು ಸಿಸ್ಟರ್ ಸಿಟಿ (Sister City) ಮತ್ತು ಸಿಸ್ಟರ್ ಸ್ಟೇಟ್ (Sister State) ಸಹಭಾಗಿತ್ವಗಳನ್ನು ಸ್ಥಾಪಿಸಲು ಉಭಯ ದೇಶಗಳು ನಿರ್ಧರಿಸಿವೆ. ನಗರ ಆಡಳಿತ, ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನೇರ ಸಂಪರ್ಕಗಳನ್ನು ಬೆಳೆಸುವ ಸ್ಪಷ್ಟ ಕಾರ್ಯಯೋಜನೆಗಳನ್ನು ಈ ಪಾಲುದಾರಿಕೆಗಳು ಹೊಂದಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಅಧ್ಯಕ್ಷ ಮಿರ್ಜಿಯೊಯೆವ್, ಜನರ ನಡುವಿನ ಸಂಪರ್ಕ, ನೇರ ವಿಮಾನ ಸೇವೆಗಳು ಮತ್ತು ಪ್ರವಾಸೋದ್ಯಮ ವಲಯಗಳನ್ನು ಬಲಪಡಿಸುವ ಕುರಿತು ಸಹ ಚರ್ಚಿಸಲಾಗಿದೆ ಎಂದು ತಿಳಿಸಿದರು. ಉಜ್ಬೇಕಿಸ್ತಾನ್ ಜಾರಿಗೆ ತಂದಿರುವ 30 ದಿನಗಳ ವೀಸಾ-ಮುಕ್ತ ಪ್ರವೇಶ ವ್ಯವಸ್ಥೆಯನ್ನು ಉಲ್ಲೇಖಿಸಿದ ಅವರು, ಈ ಭೇಟಿಯ ವೇಳೆ ಕೈಗೊಂಡ ನಿರ್ಧಾರಗಳ ಅನುಷ್ಠಾನಕ್ಕಾಗಿ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು ಎಂದರು.
ಇದೇ ವೇಳೆ ತಾಶ್ಕೆಂಟ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಜ್ಬೇಕಿಸ್ತಾನ್ನ ಅತ್ಯುನ್ನತ ನಾಗರಿಕ ಗೌರವವಾದ “ಒಲಿ ದರಾಜಲಿ ದುಸ್ತ್ಲಿಕ್” (Order of Oliy Darajali Dustlik) ಪ್ರಶಸ್ತಿಯನ್ನು ಅಧ್ಯಕ್ಷ ಮಿರ್ಜಿಯೊಯೆವ್ ಪ್ರದಾನ ಮಾಡಿದರು.
ಇದಕ್ಕೂ ಮೊದಲು ತಾಶ್ಕೆಂಟ್ನ ʼಕುಕ್ಸರೋಯ್ ಅಧ್ಯಕ್ಷೀಯ ಅರಮನೆ (Kuksaroy Presidential Palace)ʼಯಲ್ಲಿ ಪ್ರಧಾನಿ ಮೋದಿ ಅವರಿಗೆ ಅಧ್ಯಕ್ಷ ಮಿರ್ಜಿಯೊಯೆವ್ ಭವ್ಯ ಸ್ವಾಗತ ಕೋರಿದರು. ಅವರಿಗೆ ಸಾಂಪ್ರದಾಯಿಕ ಗೌರವ ವಂದನೆಯನ್ನೂ ನೀಡಲಾಯಿತು.
ಈ ಭೇಟಿ ಭಾರತ–ಉಜ್ಬೇಕಿಸ್ತಾನ್ ಸಂಬಂಧಗಳ ವಿಸ್ತರಣೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ