ಮಂಗಳೂರು : ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಾಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಯನಗರದ ನಡೆದಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಹಿಳೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾರೆ. ಕೇರಳ ತ್ರಿಶೂರ್ ಮೂಲದ ಅಬ್ದುಲ್ ರಶೀದ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಈತ ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಯುವತಿಯನ್ನು ವಿವಾಹವಾಗಿದ್ದ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ರಶೀದ್ ತನ್ನ ಪತ್ನಿಯನ್ನು ವಿದೇಶಕ್ಕೆ ಕರೆಸಿಕೊಂಡಿದ್ದ. ನಂತರ ಎರಡನೇ ಮಗುವಿನ ಹೆರಿಗೆಗಾಗಿ ಪತ್ನಿಯನ್ನು ಸುಳ್ಯದ ಅವರ ತವರು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ತೆರಳಿದ್ದ.
ಆದರೆ ಆರು ತಿಂಗಳಿನಿಂದ ಇವರ ಮಧ್ಯೆ ಅಲ್ಪ ಸ್ವಲ್ಪ ಕಿರಿಕಿರಿ ಉಂಟಾಗಿತ್ತು ಎನ್ನಲಾಗಿದೆ. ಆದರೆ ಹಿಡಿಯರು ಹಾಗೂ ಸಂಬಂಧಿಕರು, ಇದನ್ನು ಇತ್ಯರ್ಥಪಡಿಸಿದ್ದರು. ಆದರೆ ಈಗ ಏಕಾಏಕಿ ಪತಿ ರಶೀದ್, ಪತ್ನಿಯ ಮೊಬೈಲ್ಗೆ ಮೂರು ತಲಾಖ್ನ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಸುಳ್ಯ ಪೊಲೀಸರಿಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ