ಭೋಪಾಲ್: ಮಧ್ಯಪ್ರದೇಶದ ಛಿಂದ್ವಾರದಲ್ಲಿ, ಕಲಬೆರಿಕೆ ಕೆಮ್ಮಿನ ಸಿರಪ್ (Cough Syrup) ಸೇವಿಸಿದ 11 ಮಕ್ಕಳ ಸಾವಿನ ಬಗ್ಗೆ ಭಾರಿ ವಿವಾದ ಉಂಟಾಗಿದ್ದು, ಮಕ್ಕಳಿಗೆ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯರೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಹೆಚ್ಚಿನ ಮಕ್ಕಳಿಗೆ ಪರಾಸಿಯಾದಲ್ಲಿರುವ ಮಕ್ಕಳ ತಜ್ಞ ಪ್ರವೀಣ ಸೋನಿ ಅವರ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋನಿ ಸರ್ಕಾರಿ ವೈದ್ಯನಾಗಿದ್ದು, ಅವರ ಖಾಸಗಿ ಚಿಕಿತ್ಸಾಲಯಕ್ಕೆ ಬಂದಿದ್ದ ಮಕ್ಕಳಿಗೆ ಸಿರಪ್ ಅನ್ನು ಬರೆದುಕೊಟ್ಟರು ಎಂದು ಹೇಳಲಾಗಿದೆ.
ಮಧ್ಯಪ್ರದೇಶ ಸರ್ಕಾರವು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸಿದ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿರುವ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಿಸಿದೆ. ಸರ್ಕಾರವು ಈ ಹಿಂದೆ ಕೋಲ್ಡ್ರಿಫ್ ಮಾರಾಟವನ್ನು ನಿಷೇಧಿಸಿತ್ತು, ಔಷಧದ ಮಾದರಿಗಳಲ್ಲಿ 48.6% ಡೈಥಿಲೀನ್ ಗ್ಲೈಕೋಲ್ ಪತ್ತೆಯಾಗಿದ್ದು, ಇದು ವಿಷಕಾರಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ಪರೀಕ್ಷಿಸಿದ ಸಿರಪ್ ಮಾದರಿಯನ್ನು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು “ಪ್ರಮಾಣಿತ ಗುಣಮಟ್ಟದಲ್ಲಿಲ್ಲ” ಎಂದು ಹೇಳಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಆಡಳಿತವು ಸೋಮವಾರ ಕೋಲ್ಡ್ರಿಫ್ ಮತ್ತು ಇನ್ನೊಂದು ಕೆಮ್ಮಿನ ಸಿರಪ್ ‘ನೆಕ್ಟ್ರೋ-ಡಿಎಸ್’ ಮಾರಾಟವನ್ನು ನಿಷೇಧಿಸಿತು. ಕೋಲ್ಡ್ರಿಫ್ನ ಪರೀಕ್ಷಾ ವರದಿ ಶನಿವಾರ ಬಂದಿದ್ದು, ನೆಕ್ಸ್ಟ್ರಾ-ಡಿಎಸ್ನ ವರದಿಗಾಗಿ ಕಾಯಲಾಗುತ್ತಿದೆ. ಕೆಮ್ಮು ಹಾಗೂ ಜ್ವರ ಎಂದು ಬಂದ ಮಕ್ಕಳಿಗೆ ವೈದ್ಯ ಸಿರಪ್ಗಳು ಸೇರಿದಂತೆ ನಿಯಮಿತ ಔಷಧಿಗಳನ್ನು ನೀಡಿದ್ದ. ನಂತರ ಅವರು ಚೇತರಿಸಿಕೊಂಡಂತೆ ತೋರುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ, ಲಕ್ಷಣಗಳು ಮರಳಿದವು, ನಂತರ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಶುರುವಾದವು. ಬಳಿಕ ಮೂತ್ರ ಪಿಂಡದ ವೈಫಲ್ಯ ಉಂಟಾಗಿತ್ತು.
ಮೃತಪಟ್ಟವರಲ್ಲಿ 11 ಮಂದಿ ಪರಸಿಯಾ, ಇಬ್ಬರು ಛಿಂದ್ವಾರಾ ನಗರ ಮತ್ತು ಒಬ್ಬರು ಚೌರೈ ಮೂಲದವರು. ಮುಖ್ಯಮಂತ್ರಿ ಮೋಹನ ಯಾದವ್ ಘಟನೆಯನ್ನು “ದೊಡ್ಡ ದುರಂತ” ಎಂದು ಕರೆದರು ಮತ್ತು ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ