ನವದೆಹಲಿ: ಬೈಕ್ಗೆ ಮಹೀಂದ್ರಾ ಸ್ಕಾರ್ಪಿಯೊ ಕಾರು ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಿನ್ನೆ ನಡೆದಿದ್ದು, ಬೈಕ್ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಇದೇಘಟನೆ ಸಂಬಂಧ ಇಂದು. ಸೋಮವಾರ ಪ್ರಕರಣ ದಾಖಲಾಗಿದೆ.
ರಾಷ್ಟ್ರ ರಾಜಧಾನಿಯ ಅರ್ಜನ್ ಗಢ್ ಮೆಟ್ರೋ ನಿಲ್ದಾಣದಲ್ಲಿ ಬಳಿ, ಭಾನುವಾರ ನಡೆದ ಘಟನೆಯ ಈ ವಿಡಿಯೋವನ್ನು, ಗಾಯಗೊಂಡ ಬೈಕ್ ಸವಾರನ ಸ್ನೇಹಿತ ಚಿತ್ರೀಕರಣ ಮಾಡಿದ್ದಾನೆ. ವೀಡಿಯೊ ವೈರಲ್ ಆದ ಬಳಿಕ ದೆಹಲಿ ಪೊಲೀಸರು, ಲಿಖಿತ ದೂರು ದಾಖಲಿಸುವಂತೆ ಗಾಯಗೊಂಡ ಬೈಕ್ ಸವಾರನ ಬಳಿ ಕೇಳಿಕೊಂಡಿದ್ದರು. ಇಂದು ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ನಿನ್ನೆ ಕೆಲ ಯುವಕರು ಬೈಕ್ಗಳ ಮೂಲಕ ದೆಹಲಿಗೆ ಬರುತ್ತಿದ್ದರು. ಗಾಯಗೊಂಡ ಬೈಕ್ ಸವಾರನ ಸ್ನೇಹಿತ ಮತ್ತೊಂದು ಬೈಕ್ನಲ್ಲಿದ್ದುಕೊಂಡು ಮಾಡಿರುವ ವೀಡಿಯೊ ಪ್ರಕಾರ, ಬೈಕ್ ಸವಾರರು ಮಹೀಂದ್ರಾ ಸ್ಕಾರ್ಪಿಯೋ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ಕಾರು ಮತ್ತು ಬೈಕ್ ಸವಾರರು ವೇಗವಾಗಿ ಹೋಗುವ ವೇಳೆ ಕಾರು ಚಾಲಕ ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದು ಮತ್ತಷ್ಟು ವೇಗವಾಗಿ ಹೋಗಿದ್ದಾನೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಬೈಕ್ನಿಂದ ಎಸೆಯಲ್ಪಟ್ಟು ಕೆಳಗೆ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.
ಈ ಬಗ್ಗೆ ಗಾಯಗೊಂಡ ಬೈಕ್ ಸವಾರ ಶ್ರೆಯಾಂಶ್ ಎಂಬವರು ಮಾತನಾಡಿ, ನಾನು ಮತ್ತು ನನ್ನ ಕೆಲ ಸ್ನೇಹಿತರು ಗುರುಗ್ರಾಮ್ನಿಂದ ದೆಹಲಿಗೆ ಹಿಂತಿರುಗುತ್ತಿದ್ದೆವು. ಈ ವೇಳೆ ಕಾರು ಚಾಲಕ ನಮ್ಮೊಂದಿಗೆ ರಾಶ್ ಡ್ರೈವಿಂಗ್ ಪ್ರಾರಂಭಿಸಿದ್ದಾನೆ. ಆತ ನನ್ನ ಸ್ನೇಹಿತನಿಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನನ್ನ ಸ್ನೇಹಿತರು ಅವರ ಬೈಕ್ ಸ್ವಲ್ಪ ನಿಧಾನಗೊಳಿಸಿದ್ದಾರೆ. ಆದರೆ ನಾನು ಮುಂದೆ ವೇಗವಾಗಿ ರೈಡ್ ಮಾಡಿದೆ. ಈ ವೇಳೆ ಆ ವ್ಯಕ್ತಿ ವೇಗವಾಗಿ ಬಂದು ನನ್ನ ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ ತಿಳಿಸಿದ್ದಾರೆ. ದೆಹಲಿ ಪೊಲೀಸರು ಆತನಿಗೆ ಶೋಧ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ