ಬೆಂಗಳೂರು: ಭಗತ್ ಸಿಂಗ್ ಅವರ ಬಗ್ಗೆ ಇರುವ ಪಾಠವನ್ನು ಪಠ್ಯದಿಂದ ತೆಗೆದು ಹಾಕಿಲ್ಲ. ಆದರೆ ಹೆಗಡೇವಾರ್ ಅವರ ಕುರಿತ ವಿಚಾರವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.
ಇಂದು, ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದಿನ ಸಮಿತಿಯವರು ಪಠ್ಯದಲ್ಲಿದ್ದ ಡಾ.ಬಿ.ಆರ್. ಅಂಬೇಡ್ಕರ ಮತ್ತು ಗಾಂಧಿ ಅವರ ಉದಾತ್ತ ಚಿಂತನೆಗಳನ್ನು ತೆಗೆದು ಹಾಕಿದ್ದರು. ಆದರೆ ಈಗ ಮತ್ತೆ ಅಂತಹ ಮಹಾನ್ ಪುರುಷರ ವಿಚಾರಧಾರೆಗಳನ್ನು ಮತ್ತೆ ಪಠ್ಯದಲ್ಲಿ ಸೇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟಿಪ್ಪು ಸುಲ್ತಾನ್ ಬಲವಂತವಾಗಿ ಟಿಪ್ಪು ಸುಲ್ತಾನ್ ಮತಾಂತರ ಮಾಡುತ್ತಿದ್ದ ಬಗ್ಗೆ ಉಲ್ಲೇಖಗಳಿವೆ. ಕೊಡಗು, ಮೈಸೂರಿನಲ್ಲಿ ಟಿಪ್ಪು ಮತಾಂತರ ಮಾಡಿದ್ದು ಸತ್ಯ. ಅವರ ಬಗ್ಗೆ ನಿಗ ಸಂಗತಿ ಬರೆಯಬೇಕಿತ್ತು. ಬ್ರಿಟಿಷರ ವಿರುದ್ದ ಹೋರಾಡಿದ್ದ ಸಂಗೊಳ್ಳಿ ರಾಯಣ್ಣ, ಅಬ್ಬಕ್ಕ,ಮದಕರಿ, ಎಲ್ಲರೂ ಬ್ರಿಟೀಷರ ವಿರುದ್ದ ಹೋರಾಡಿದವರೆ. ಅವರನ್ನೆಲ್ಲ ಕೈಬಿಟ್ಟು, ಟಿಪ್ಪು ಬಗ್ಗೆ ಮಾತ್ರ ಆರು ಪುಟದ ಪಠ್ಯ ಸೇರಿಸಿದ್ದರು. ಟಿಪ್ಪು ಸುಲ್ತಾನ್ ಪಠ್ಯ ತೆಗೆದಿಲ್ಲ. ಆದರೆ ಆತನ ಬಗ್ಗೆ ಇರುವ ಸತ್ಯ ವಿಷಯವನ್ನು ಅಳವಡಿಸಿದ್ದೇವೆ ಎಂದು ಸಚಿವ ಬಿ.ಸಿ. ನಾಗೇಶ ಸ್ಪಷ್ಟನೆ ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರ ಲೇಖನವನ್ನು ಪಠ್ಯದಲ್ಲಿ ಸೇರಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಸೂಲಿಬೆಲೆ ಕ್ರಾಂತಿಕಾರಿಗಳ ಬಗ್ಗೆ ಬರೆದಿದ್ದಾರೆ. ಹೀಗಾಗಿ ಅವರನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರದ ಕೆಲಸಗಳನ್ನು ಸಹಿಸಿಕೊಳ್ಳದೆ ಅನವಶ್ಯಕವಾಗಿ ಸುಳ್ಳು ಪ್ರಚಾರ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ನಾರಾಯಣಗುರು, ಭಗತ್ ಸಿಂಗ್ ಇವರ ಜೊತೆ ಕ್ರಾಂತಿಕಾರಿಗಳಾದ ರಾಜದೇವ್, ಸುಖದೇವ್ ಅವರ ಪಾಠವನ್ನೂ ಅಳವಡಿಸಿದ್ದೇವೆ. ಕ್ರಾಂತಿಕಾರಿಗಳ ಬಗ್ಗೆ ವಿಪಕ್ಷ ನಾಯಕರು ಮಾತಾಡುತ್ತಿರುವುದು ಸಂತೋಷ. ಹೀಗೆ ಅವರ ಬಗ್ಗೆ ಮಾತಾಡಲಿ ಎಂದು ಹೇಳಲು ಬಯಸುತ್ತೇನೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಕುವೆಂಪು ಬಗ್ಗೆ ಒಂದೇ ಒಂದು ಲೈನ್ ಬದಲಾವಣೆ ಮಾಡಿದ್ದೆವೆಯೇ? ಜಾತಿ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅವರ ಪಠ್ಯ ಕೈಬಿಟಿದ್ದಾರೆ, ಇವರ ವಿಷಯ ಕೈಬಿಟ್ಟಿದ್ದಾರೆ ಎಂದು ಹೇಳುವವರು ಬರಗೂರು ರಾಮಚಂದ್ರಪ್ಪ ಅವರಿದ್ದಾಗ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಸಚಿವರು ಪ್ರಶ್ನಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ