ಮೈಸೂರು : ಆನೆಯ ಕಾಲಿನ ಚಿಕಿತ್ಸೆಗಾಗಿ ಪಶು ವೈದ್ಯರೊಬ್ಬರು ಅಳವಡಿಸಿಕೊಂಡಿರುವ ವಿಭಿನ್ನವಾದ ಕ್ರಮವು ಮೆಚ್ಚುಗೆಗೆ ಪಾತ್ರವಾಗಿದೆ. ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲೆಂದು ಅವರು ಪಾದರಕ್ಷೆ ತಯಾರಿಸಿದ್ದಾರೆ.
ಹುಣಸೂರು ತಾಲೂಕಿನ ದೊಡ್ಡ ಹರವೆ ಆನೆ ಕ್ಯಾಂಪ್ನಲ್ಲಿರುವ 60 ವರ್ಷದ ಕುಮಾರಿ ಆನೆಯ ಕಾಲಿಗೆ ಗಾಯವಾಗಿತ್ತು. ಕುಮಾರಿ ಆನೆಯನ್ನು 2015ರಲ್ಲಿ ಕೇರಳ ಮೂಲದ ಸರ್ಕಸ್ ಕಂಪನಿಯಿಂದ ರಕ್ಷಣೆ ಮಾಡಿ ಕರೆತರಲಾಗಿತ್ತು. ಅಂದಿನಿಂದ ಕುಮಾರಿ ಆನೆ ದೊಡ್ಡ ಹರವೆ ಆನೆ ಕ್ಯಾಂಪ್ನಲ್ಲಿ ಅಶ್ರಯ ಪಡೆದಿದೆ.
ಕೆಲ ದಿನಗಳ ಹಿಂದೆ ಕುಮಾರಿ ಆನೆಯ ಬಲಗಾಲಿಗೆ ಗಾಯವಾಗಿದೆ. ತಕ್ಷಣ ವೈದ್ಯರ ತಂಡದಿಂದ ಔಷಧ ಹಚ್ಚಲಾಗಿತ್ತು. ಆದರೆ ಗಾಯದ ಸ್ಥಳದಲ್ಲಿ ಔಷಧಿ ನಿಲ್ಲದೆ ಮಣ್ಣು ಪಾಲಾಗುತಿತ್ತು. ಇದರಿಂದ ಆನೆಯ ಕಾಲಿನ ಗಾಯ ವಾಸಿಯಾಗಿರಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರು ಆನೆಯ ಕಾಲಿಗೆ ಔಷಧಿಯನ್ನು ಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಈಗ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೈದ್ಯರಾಗಿರುವ ಡಾ. ರಮೇಶ ಎಂಬವರು ಇದಕ್ಕೆ ಹೊಸ ಪರಿಹಾರಕ್ಕೆ ಮುಂದಾಗಿದ್ದಾರೆ. ಅವರು ಆನೆಗಾಗಿ ವಿಶೇಷ ಪಾದರಕ್ಷೆಯನ್ನು ತಯಾರಿಸಿದ್ದಾರೆ. ವಾಹನದ ಟೈರ್ ಬಳಸಿಕೊಂಡು ಪಾದರಕ್ಷೆಯೊಂದನ್ನು ತಯಾರಿಸಿದ್ದಾರೆ. ನಂತರ ಔಷಧಿಯನ್ನು ಪಾದರಕ್ಷೆಗೆ ಹಚ್ಚಿ ಕುಮಾರಿ ಆನೆಯ ಕಾಲಿಗೆ ಅದನ್ನು ಅಳವಡಿಸಿದ್ದಾರೆ. ಡಾ.ರಮೇಶ ಪ್ರಯತ್ನ ಯಶಸ್ವಿಯಾಗಿದೆ. ಔಷಧಿಯ ಪರಿಣಾಮ ಬೀರಿದ್ದು, ಕುಮಾರಿ ಆನೆಯ ಕಾಲಿಗ ಗಾಯ ವಾಸಿಯಾಗುತ್ತಿದೆ. ಕುಮಾರಿ ಆನೆ ನೋವು ಕಡಿಮೆಯಾಗಿದ್ದು ಮತ್ತೆ ಉತ್ಸಾಹದಿಂದ ಓಡಾಡುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ