ಮುಂಬೈ: ಮುಂಬೈ ನ್ಯಾಯಾಲಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಸಮನ್ಸ್ ನೀಡಿದ್ದು, ಮಾರ್ಚ್ 2ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
2021ರ ಡಿಸೆಂಬರ್ನಲ್ಲಿ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಎದ್ದುನಿಂತು ಗೌರವ ತೋರಿಸಲಿಲ್ಲ. ಈ ಮೂಲಕ ರಾಷ್ಟ್ರಗೀತೆಗೆ ಅವಮಾನಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿರುವ ನ್ಯಾಯಾಲಯ, ಆರೋಪಿ ವಿರುದ್ಧ ಮುಂದಿನ ಪ್ರಕ್ರಿಯೆ ನಡೆಸಲು ಯಾವುದೇ ಅಡ್ಡಿಯೂ ಇಲ್ಲ ಎಂದು ಹೇಳಿದೆ.
ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಂಬೈ ಘಟಕದ ಕಾರ್ಯಕಾರಿ ವಿವೇಕಾನಂದ ಗುಪ್ತಾ ಡಿಸೆಂಬರ್ನಲ್ಲಿ ಮುಂಬೈ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿದ್ದರು. ಮಮತಾ ವಿರುದ್ಧ ಎಫ್ಐಆರ್ ದಾಖಲಿಸುವಂತೆಯೂ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅಂದು ರಾಷ್ಟ್ರಗೀತೆ ಹಾಡುವಾಗ ಅವರು ಥಟ್ಟನೆ ನಿಲ್ಲಿಸಿ, ವೇದಿಕೆಯಿಂದ ನಿರ್ಗಮಿಸಿದ್ದು ಯೂಟ್ಯೂಬ್, ಡಿವಿಡಿಯಲ್ಲಿರುವ ವಿಡಿಯೋ ಕ್ಲಿಪ್ನಿಂದ ಸ್ಪಷ್ಟವಾಗಿದೆ. ಈ ವಿಡಿಯೋಗಳನ್ನು ದೂರುದಾರರು ನಮಗೆ ನೀಡಿದ್ದಾರೆ ಎಂದು ಕೋರ್ಟ್ ಹೇಳಿದೆ.
ಯಾವುದೇ ಸಂದರ್ಭದಲ್ಲಿ ಯಾರಾದರೂ ರಾಷ್ಟ್ರಗೀತೆ ಹಾಡುತ್ತಿರಲಿ ಅಥವಾ ಇನ್ಯಾವುದೇ ಮೂಲದಿಂದ ಅದು ಪ್ರಸಾರವಾಗುತ್ತಿರಲಿ, ಆ ಸಮಯದಲ್ಲಿ ಅದನ್ನು ಕೇಳುತ್ತಿರುವವರು ಎದ್ದುನಿಲ್ಲಬೇಕು ಎಂದು 2015ರಲ್ಲಿ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಅದನ್ನು ಮಮತಾ ಬ್ಯಾನರ್ಜಿ ಉಲ್ಲಂಘಿಸಿದ್ದಾರೆ ಎಂದು ವಿವೇಕಾನಂದ ಗುಪ್ತಾ ಆರೋಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ