ಬೆಂಗಳೂರು: ಯುದ್ಧಪೀಡಿತ ಉಕ್ರೇನ್ನಲ್ಲಿ ಈವರೆಗೆ ರಾಜ್ಯದ 346 ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೋಡಲ್ ಅಧಿಕಾರ ಮನೋಜ್ ರಂಜನ್ ತಿಳಿಸಿದ್ದಾರೆ.
ಉಕ್ರೇನ್ನಲ್ಲಿರುವವರ ಬಗ್ಗೆ ಶುಕ್ರವಾರ ಮಧ್ಯಾಹ್ನ 3 ಗಂಟೆ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕರೆಗಳು ಬಂದಿವೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ಗೆ ತೆರಳಿರುವವರ ವಿದ್ಯಾರ್ಥಿಗಳ ತಂದೆ-ತಾಯಿ, ಪೋಷಕರು, ಸಂಬಂಧಿಕರು, ಸ್ನೇಹಿತರಿಂದ ಕರೆಗಳು ಬರುತ್ತಿವೆ. ಆ ಆಧಾರದಲ್ಲಿ ಉಕ್ರೇನ್ನಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬಹುದು ಎಂದು ಅಂದಾಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ 115, ಮೈಸೂರಿನ 30, ವಿಜಯಪುರ 24, ಬಾಗಲಕೋಟೆ 22, ತುಮಕೂರು 16, ಹಾವೇರಿ 14, ದಾವಣಗೆರೆ- 12, ಚಿಕ್ಕಮಗಳೂರು, ಹಾಸನ ಮತ್ತು ರಾಯಚೂರಿನ ತಲಾ 10 ವಿದ್ಯಾರ್ಥಿಗಳು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ತಲಾ 9, ಧಾರವಾಡ ಮತ್ತು ಉಡುಪಿಯ ತಲಾ 5, ಚಾಮರಾಜನಗರ, ಕೋಲಾರ ಮತ್ತು ಮಂಡ್ಯ ತಲಾ 4, ಬೀದರ್, ಚಿತ್ರದುರ್ಗ, ಶಿವಮೊಗ್ಗದ ತಲಾ 3, ರಾಮನಗರ ಮತ್ತು ಉತ್ತರ ಕನ್ನಡದ ತಲಾ ಇಬ್ಬರು, ಬೆಂಗಳೂರು ಗ್ರಾಮಾಂತರ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ತಲಾ ಒಬ್ಬರು ವಿದ್ಯಾರ್ಥಿಗಳ ಪರವಾಗಿ ದೂರವಾಣಿ ಕರೆಗಳು ಬಂದಿವೆ.
ಸಿಲುಕಿಕೊಂಡಿರುವವರ ಕರ್ನಾಟಕದವರ ಸಹಾಯಕ್ಕಾಗಿ https://ukraine.karnataka.tech ಎಂಬ ವೆಬ್ ಪೋರ್ಟಲ್ ತೆರೆಯಲಾಗಿದೆ. ಸಂಬಂಧಪಟ್ಟವರು ಉಕ್ರೇನ್ನಲ್ಲಿ ಸಮಸ್ಯೆಗೆ ಸಿಲುಕಿರುವವರ ಮಾಹಿತಿಯನ್ನು ನೀಡಬಹುದು ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ