ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪಾಕಿಸ್ತಾನ ಬೆಂಬಲಿತ ಶಂಕಿತ ಬೇಹುಗಾರಿಕಾ ಜಾಲದ ಪ್ರಮುಖ ಗುರಿಯಾಗಿದ್ದರು ಎಂದು ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ (STF) ಗಂಭೀರ ಮಾಹಿತಿ ಹೊರಹಾಕಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಅಶಾಂತಿ ಸೃಷ್ಟಿಸಲು ಶಂಕಿತರು ನಡೆಸಿದ ಸಂಚಿನ ಹಿಂದಿನ ನಂಟಿನ ಬಗ್ಗೆಯೂ ತನಿಖೆ ಮುಂದುವರಿದಿದೆ.
ಪೂರ್ವ ವರ್ಧಮಾನ ಜಿಲ್ಲೆಯಿಂದ ಜೈಶ್-ಎ-ಮೊಹಮ್ಮದ್ (JeM) ಸಂಘಟನೆಯ ಶಂಕಿತ ಉಗ್ರ ಮೊಹಮ್ಮದ್ ಹಮಿಮ್ ಮೊಂಡಲ್ ಎಂಬಾತನನ್ನು ಎಸ್ಟಿಎಫ್ ಬಂಧಿಸಿದ ಒಂದು ದಿನದ ನಂತರ ಈ ಮಹತ್ವದ ಬೆಳವಣಿಗೆಯಾಗಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆರೆಯ ಜಾರ್ಖಂಡ್ದಿಂದ ಅರ್ಪಿತಾ ಸರ್ಕಾರ್ ಎಂಬ ಮಹಿಳೆಯನ್ನು ಕೂಡ ಬಂಧಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಟಿಎಫ್ ಐಜಿ ಗೌರವ ಶರ್ಮಾ, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಹಿಟ್ಲಿಸ್ಟ್ನಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಹೆಸರಿತ್ತು ಎಂದು ಖಚಿತಪಡಿಸಿದ್ದಾರೆ.
“ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪಾಕ್ ಮೂಲದ ಉಗ್ರ ಸಂಘಟನೆಗಳ ಗುರಿಯಾಗಿದ್ದರು. ದೆಹಲಿಯ ಜಂತರ್ ಮಂತರ್ ವಿದ್ಯಾರ್ಥಿ ಪ್ರತಿಭಟನೆಯಲ್ಲೂ ಗಲಭೆ ಸೃಷ್ಟಿಸಲು ಇದೇ ಜಾಲ ಯತ್ನಿಸಿತ್ತು. ಈ ಪ್ರಕರಣದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಪ್ರಮುಖ ವ್ಯಕ್ತಿಗಳು ಸಹ ಶಂಕಿತರ ಗುರಿಯಲ್ಲಿರುವುದು ತನಿಖೆಯಿಂದ ತಿಳಿದುಬಂದಿದೆ” ಎಂದು ಐಜಿ ಗೌರವ್ ಶರ್ಮಾ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವರ್ಧಮಾನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಐಎಸ್ಐ (ISI) ಬೆಂಬಲಿತ ಬೇಹುಗಾರಿಕಾ ಜಾಲದ ತನಿಖಾ ಅಂಶಗಳು
ವಿಐಪಿಗಳ ಸಂಚಾರದ ಮೇಲೆ ಕಣ್ಣಿಡುವುದು, ಬಿಜೆಪಿ ನಾಯಕರ ಬಗ್ಗೆ ಗುಪ್ತಚರ ಮಾಹಿತಿ ಕಲೆಹಾಕುವುದು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಅಡಿಪಾಯ ಹಾಕಲು ಐಎಸ್ಐ ಬೆಂಬಲಿತ ಜಾಲಕ್ಕೆ ಹಮಿಮ್ ಮೊಂಡಲ್ ಸಹಾಯ ಮಾಡುತ್ತಿದ್ದನೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಹಮಿಮ್ ಜೊತೆ ಸಂಪರ್ಕ ಹೊಂದಿರುವ ಪಾಕಿಸ್ತಾನದ ಹ್ಯಾಂಡ್ಲರ್ಗಳನ್ನು ‘ರಾಣಾ’, ‘ಉಜೈರ್’, ‘ಅಬಿದ್ ಜಾಟ್ 333’ ಮತ್ತು ‘ಹಮದ್’ ಎಂದು ಗುರುತಿಸಲಾಗಿದೆ ಎನ್ನಲಾಗಿದೆ. ಇವರು ಪಾಕಿಸ್ತಾನದ ಶಹಜಾದ್ ಭಟ್ಟಿ ಗ್ಯಾಂಗ್ಗೆ ಸೇರಿದವರೆಂದು ಶಂಕಿಸಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಲು ಎಸ್ಟಿಎಫ್ 14 ದಿನಗಳ ಪೊಲೀಸ್ ವಶಕ್ಕೆ ಪಡೆದುಕೊಂಡಿದೆ.
ಆತನ ಬಳಿಯಿದ್ದ ಐಫೋನ್ ಹಾಗೂ ಇತರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಡಿಜಿಟಲ್ ಹಾಗೂ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಮಾರು ಒಂದು ವರ್ಷದ ಹಿಂದೆ ಪಾಕಿಸ್ತಾನಿ ಹ್ಯಾಂಡ್ಲರ್ಗಳ ಸಂಪರ್ಕಕ್ಕೆ ಬಂದಿದ್ದ ಈತ, ಎನ್ಕ್ರಿಪ್ಟ್ ಮಾಡಲಾದ ಸಂದೇಶಗಳ ಮೂಲಕ ಉಗ್ರ ಸಿದ್ಧಾಂತಕ್ಕೆ ಬ್ರೈನ್ವಾಶ್ ಆಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಸಿಎಂ ಸುವೇಂದು ಅಧಿಕಾರಿ ಮತ್ತು ಇತರೆ ವಿಐಪಿಗಳ ಮೇಲೆ ನಿಗಾ
ರಾಜಕೀಯ ನಾಯಕರಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಹಿಂದೆ ಈ ಪ್ರಕರಣ ಅತ್ಯಂತ ಸೂಕ್ಷ್ಮ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ ಎಂದು ಸುವೇಂದು ಅಧಿಕಾರಿ ಪ್ರತಿಕ್ರಿಯಿಸಿದ್ದರು. ತಮ್ಮ ಮೇಲೆ ಮಾತ್ರವಲ್ಲದೆ, ರಾಜ್ಯದ ಕೆಲ ಸಚಿವರು ಮತ್ತು ಪ್ರಮುಖ ವಿಐಪಿಗಳ ಮೇಲೂ ನಿಗಾ ಇಡಲಾಗಿತ್ತು ಎಂದು ಅವರು ತಿಳಿಸಿದ್ದರು.
ಇದಲ್ಲದೆ, ಪಾಕಿಸ್ತಾನಿ ಏಜೆನ್ಸಿಯ ಹೆಸರಿನಲ್ಲಿ ಬೆದರಿಕೆ ಕರೆಗಳನ್ನು ಸ್ವೀಕರಿಸಿ, ಬಿಜೆಪಿ ಕಚೇರಿಗಳ ಮೇಲೆ ದಾಳಿಯ ಎಚ್ಚರಿಕೆ ಪಡೆದಿದ್ದ ರಾಜ್ಯ ಸಚಿವ ಉಮೇಶ್ ರಾಯ್ ಅವರ ಬೆದರಿಕೆ ಪ್ರಕರಣಕ್ಕೂ ಹಮಿಮ್ಗೂ ಏನಾದರೂ ನಂಟಿದೆಯೇ ಎಂಬ ಕೋನದಲ್ಲೂ ತನಿಖೆ ನಡೆಯುತ್ತಿದೆ.
‘ಹನಿ-ಟ್ರ್ಯಾಪ್’ ಜಾಲದ ಸುಳಿವು ನೀಡಿದ ಮಹಿಳೆಯ ಬಂಧನ
ಜಾರ್ಖಂಡ್ನ ಸಾಹೇಬ್ಗಂಜ್ ಜಿಲ್ಲೆಯಿಂದ ಅರ್ಪಿತಾ ಸರ್ಕಾರ್ ಎಂಬಾಕೆಯನ್ನು ಎಸ್ಟಿಎಫ್ ಬಂಧಿಸುವುದರೊಂದಿಗೆ ತನಿಖೆಯ ದಿಕ್ಕು ಬದಲಾಯಿತು.
ವಾಟ್ಸಾಪ್ ಮೂಲಕ ಹಮಿಮ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಈಕೆಯ ಚಾಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಪ್ರಭಾವಿ ರಾಜಕೀಯ ನಾಯಕರಿಗೆ ಗಾಳ ಹಾಕಲು ಮತ್ತು ಅವರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಲು ಹಮಿಮ್ ಈ ಮಹಿಳೆಯನ್ನು ಬಳಸಿಕೊಳ್ಳುತ್ತಿದ್ದನೆಂದು ಆರೋಪಿಸಲಾಗಿದೆ. ಟಾರ್ಗೆಟ್ಗಳನ್ನು ಸೆಳೆಯಲು ಮತ್ತು ಸೂಕ್ಷ್ಮ ಮಾಹಿತಿಯನ್ನು ಕಲೆಹಾಕಲು ಈಕೆಯನ್ನು ‘ಹನಿ-ಟ್ರ್ಯಾಪ್’ ಜಾಲವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಯಲ್ಲಿ ಅಶಾಂತಿ ಸೃಷ್ಟಿಸಲು ಸಂಚು
ಪೊಲೀಸ್ ಸಮವಸ್ತ್ರವನ್ನು ಧರಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ನುಗ್ಗಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿದ್ದರು ಎಂದು ಎಸ್ಟಿಎಫ್ ಬಹಿರಂಗಪಡಿಸಿದೆ. ಈ ನಿಟ್ಟಿನಲ್ಲಿ ಪೊಲೀಸ್ ಸಮವಸ್ತ್ರವನ್ನು ವ್ಯವಸ್ಥೆಗೊಳಿಸುವಂತೆ ಹಮಿಮ್ಗೆ ಪಾಕ್ ಹ್ಯಾಂಡ್ಲರ್ಗಳು ಸೂಚನೆ ನೀಡಿದ್ದರು.
ಸದ್ಯ ವಿದೇಶಿ ಫೋನ್ ನಂಬರ್ಗಳು, ಡಿಜಿಟಲ್ ಸಾಕ್ಷ್ಯಗಳು ಮತ್ತು ಶಂಕಿತರ ಜಾಲದ ಸಂಪೂರ್ಣ ಮಾಹಿತಿ ಪತ್ತೆಹಚ್ಚಲು ಎಸ್ಟಿಎಫ್ನ ತೀವ್ರ ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ