ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಮೂವರು ರೋಗಿಗಳ ಕುಟುಂಬಕ್ಕೆ 5 ಲಕ್ಷ ರೂ. ಗಳ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಈ ಕುರಿತಾಗಿ ಮಾತನಾಡಿದ ಅವರು, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ವಿಮ್ಸ್ನಲ್ಲಿ ವಿದ್ಯುತ್ ಹಾಗೂ ಜನರೇಟರ್ ಕೈಕೊಟ್ಟ ಪರಿಣಾಮ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ವಿಮ್ಸ್ನಲ್ಲಿ ಬುಧವಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಕರೆಂಟ್ ಇರಲಿಲ್ಲ. ಜನರೇಟರ್ ಇದ್ದರೂ ಅದು ಕೆಲಸ ಮಾಡುತ್ತಿರಲಿಲ್ಲ. ಪರಿಣಾಮ ಐಸಿಯುನಲ್ಲಿದ್ದ ವೆಂಟಿಲೇಟರ್ಗಳು ಸ್ಥಗಿತಗೊಂಡಿದ್ದವು. ಈ ವೇಳೆ ಮೂವರು ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಮೃತರನ್ನು ಮೌಲಾ ಹುಸೇನ್, ಚಿಟ್ಟೆಮ್ಮ ಹಾಗೂ ಚಂದ್ರಮ್ಮ ಎಂದು ಗುರುತಿಸಲಾಗಿದೆ.
ಈ ವಿಚಾರ ವಿಧಾನಸಭೆಯಲ್ಲಿ ಗುರುವಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಶೂನ್ಯವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಮೃತರಿಗೆ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು. ಜೊತೆಗೆ ಆರೋಗ್ಯ ಇಲಾಖೆ ಮೂವರು ರೋಗಿಗಳ ಸಾವಿನ ಹೊಣೆ ಹೊತ್ತುಕೊಂಡು ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಸದನದಲ್ಲಿ ಈ ವಿಚಾರ ತೀವ್ರ ಗದ್ದಲಕ್ಕೆ ಕಾರಣವಾಗಿದ್ದರೂ ಸಚಿವ ಶ್ರೀರಾಮುಲು ಮಾತನಾಡಿ, ಆಸ್ಪತ್ರೆಯಲ್ಲಿ ಕೆಲ ಅವಧಿಗಳ ಕಾಲ ಕರೆಂಟ್ ಹೋಗಿತ್ತು. ಈ ಬಗ್ಗೆ ವಿಮ್ಸ್ ಡೈರೆಕ್ಟರ್ ಜೊತೆ ಮಾತನಾಡಿದ್ದೇನೆ. ಆದರೆ ಕರೆಂಟ್ ಹೋದ ಕಾರಣಕ್ಕೆ ಸಾವು ಆಗಿಲ್ಲ. ಜನರೇಟರ್ ಬ್ಯಾಕಪ್ ಕೂಡಾ ಇದೆ. ಬೇರೆ ಕಾರಣರಿಂದ ಸಾವು ಆಗಿದೆ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ವೆಂಟಿಲೇಟರ್ ಆಸ್ಪತ್ರೆಯಲ್ಲಿ ಇದೆ ಎಂದರೆ ಅದಕ್ಕೆ ಬ್ಯಾಕಪ್ ಇದ್ದೇ ಇರುತ್ತದೆ. ಒಂದೂವರೆ ಗಂಟೆ ಜನರೇಟರ್ ಬ್ಯಾಕಪ್ ಇರುತ್ತದೆ. ಇದಕ್ಕೂ ಮೀರಿ ಅನುಮಾನ ಇದ್ದರೆ ತನಿಖೆ ಮಾಡಿ ಸದನಕ್ಕೆ ವರದಿ ಕೊಡುತ್ತೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದರು. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ