ಮುಂಬೈ: ಹೊಸ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕೊನೆಗೂ ಇತ್ಯರ್ಥಗೊಂಡಿದ್ದು, ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಇಂದು ಸಂಜೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೊದಲು ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಮುಂದಿನ ರಾಜಕೀಯ ಲೆಕ್ಕಾಚಾರದ ಬೆಳವಣಿಗೆಯಲ್ಲಿ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೇವೇಂದ್ರ ಫಡ್ನವಿಸ್ ಹಾಗೂ ಏಕನಾಥ ಶಿಂಧೆ ರಾಜ್ಯಪಾಲ ಕೋಶಿಯಾರಿ ಅವರನ್ನು ಭೇಟಿಯಾದ ನಂತರ ಈ ನಿರ್ಧಾರ ಹೊರಬಿದ್ದಿದೆ.
ಮುಖ್ಯಮಂತ್ರಿಯಾ ಶೀವಸೇನೆ ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ್ ಶಿಂಧೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಹೇಳಿದ್ದಾರೆ. ರಾಜಭವನದಲ್ಲಿ ಗುರುವಾರ ಸಂಜೆ 7:30ಕ್ಕೆ ಮುಖ್ಯಮಂತ್ರಿಯಾಗಿ ಏಕನಾಥ ಶಿಂಧೆ ಹಾಗೂ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.
ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ಘೋಷಿಸಿದ ಬೆನ್ನಲ್ಲೇ, ಶಿಂಧೆ ಅವರು, “ನಾವು ಇಂದು ತೆಗೆದುಕೊಂಡ ನಿರ್ಧಾರವು ಬಾಳಾಸಾಹೇಬರ ಹಿಂದುತ್ವ ಮತ್ತು ಜೊತೆಗೆ ನಮ್ಮ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯ ಕಾರ್ಯಸೂಚಿಯಾಗಿದೆ” ಎಂದು ಹೇಳಿದರು.
ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ಅವರನ್ನು ಸಿದ್ಧಾಂತದ ಗೂಗ್ಲಿ ಮೂಲಕ ಕ್ಲೀನ್ ಬೌಲ್ಡ್ ಮಾಡಿದ ನಂತರ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಶಿಂಧೆ ಹೆಸರು ಘೋಷಿಸುವ ಮೂಲಕ ‘ದೂಸ್ರಾ’ ಎಸೆದ ಎಂವಿಎ ಮೈತ್ರಿಕೂಟಕ್ಕೆ ಅಚ್ಚರಿ ಮೂಡಿಸಿದ್ದಾರೆ. ಫಡ್ನವಿಸ್ ತಾವು ಸರ್ಕಾರದ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ, ಮಹಾ ವಿಕಾಸ್ ಅಘಾಡಿ ಆಡಳಿತದ 2.5 ವರ್ಷಗಳ ದುಃಸ್ಥಿತಿಯ ಬಗ್ಗೆ ವಿವರಿಸಿದರು. 50 ಶಾಸಕರು ಬೇರೆ ದಾರಿಯಲ್ಲಿ ಹೋಗಲು ನಿರ್ಧರಿಸಿದಾಗ, ಆತ್ಮಾವಲೋಕನವು ಈ ಸಮಯದ ಅಗತ್ಯವಾಗಿತ್ತು, ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ಎಂದರು.
ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಹುದ್ದೆಗೆ ನನ್ನನ್ನು ಆಯ್ಕೆ ಮಾಡುವ ನಿರ್ಧಾರ ಕೈಗೊಂಡರು. ಬಿಜೆಪಿಗೆ ಹೆಚ್ಚಿನ ಸಂಖ್ಯಾಬಲವಿದೆ ಮತ್ತು ಅದು ಸುಲಭವಾಗಿ ಮುಖ್ಯಮಂತ್ರಿ ಕುರ್ಚಿಯನ್ನು ಹಿಡಿಯಬಹುದಿತ್ತು, ಆದರೆ ಉದಾತ್ತತೆ ಪ್ರದರ್ಶಿಸಿ ಅವರು ಬಾಳಾಸಾಹೇಬ್ ಠಾಕ್ರೆಯ ಶಿವಸೈನಿಕರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ದೇವೇಂದ್ರ ಫಡ್ನವಿಸ್ ಸೇನಾ-ಬಿಜೆಪಿ ಮೈತ್ರಿಕೂಟದಲ್ಲಿ ಫಡ್ನವಿಸ್ ಅವರು ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಶಿಂಧೆ ಅವರ ಉಪನಾಯಕರಾಗುತ್ತಾರೆ ಎಂದು ಭಾವಿಸಲಾಗಿತ್ತು. ಬಿಜೆಪಿ ಶಿವಸೇನೆ ಬಂಡಾಯ ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಮಾಡುತ್ತದೆಯೇ ಎಂದು ಬಂಡಾಯ ಶಾಸಕರನ್ನು ಲೇವಡಿ ಮಾಡಿದ ಉದ್ಧವ್ ಠಾಕ್ರೆಗೆ ಈ ಟ್ವಿಸ್ಟ್ ಮತ್ತೊಂದು ಕಠಿಣ ಸವಾಲಾಗಿದೆ. ಮುಖ್ಯವಾಗಿ ಬೃಹನ್ ಮುಂಬೈ ಪಾಲಿಕೆ (ಬಿಎಂಸಿ) ಚುನಾವಣೆ ಗಮನದಲ್ಲಿಟ್ಟು ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬಿಎಂಸಿಯಲ್ಲಿ ಪ್ರಬಲ ಹಿಡಿತ ಹೊಂದಿರುವ ಶಿವಸೇನೆಯ ಬಲವನ್ನು ಏಕನಾಥ ಶಿಂಧೆ ಮೂಲಕವೇ ಕಡಿಮೆ ಮಾಡುವುದು ಇದರ ಹಿಂದಿನ ಮಾಸ್ಟರ್ ಪ್ಲ್ಯಾನ್ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ