ವಿಡಿಯೊ…| ಭಾರಿ ಮಳೆ : ಪಾತಾಳಗಂಗಾ ನದಿಗೆ ಕೊಚ್ಚಿಹೋದ 3 ಸಾವಿರದಷ್ಟು ಅಡುಗೆ ಅನಿಲ (LPG) ಸಿಲಿಂಡರ್‌ಗಳು….!

ಮುಂಬೈ : ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)ನ ಎಲ್‌ಪಿಜಿ ಬಾಟಲಿಂಗ್ ಘಟಕದಿಂದ ಸಾವಿರಾರು ಅಡುಗೆ ಅನಿಲ (LPG) ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ವರದಿಯಾಗಿದೆ.
ಪಾತಾಳಗಂಗಾ ನದಿಯಲ್ಲಿ ಸಿಲಿಂಡರ್‌ಗಳು ತೇಲುತ್ತಾ ಸಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಘಟನೆ ಪನವೇಲ್ ತಾಲ್ಲೂಕಿನ ಚವಾಣೆ ಗ್ರಾಮದಲ್ಲಿರುವ ಎಚ್‌ಪಿಸಿಎಲ್‌ (HPCL)ನ ಪಾತಾಳಗಂಗಾ ಎಲ್‌ಪಿಜಿ ಬಾಟಲಿಂಗ್ ಘಟಕದಲ್ಲಿ ಸಂಭವಿಸಿದೆ. ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಘಟಕದೊಳಗೆ ನೀರು ಹೊಕ್ಕಿ, ಅಲ್ಲಿದ್ದ ಸಾವಿರಾರು ಸಿಲಿಂಡರ್‌ಗಳು ಪ್ರವಾಹದ ನೀರಿನೊಂದಿಗೆ ಪಾತಾಳಗಂಗಾ ನದಿಗೆ ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ. ಇವುಗಳಲ್ಲಿ ಕೆಲವು ಸಿಲಿಂಡರ್‌ಗಳು ಅನಿಲದಿಂದ ತುಂಬಿದ್ದರೆ, ಇನ್ನೂ ಕೆಲವು ಖಾಲಿಯಾಗಿದ್ದವು ಎಂದು ವರದಿಗಳು ತಿಳಿಸಿವೆ.

ಪಾತಾಳಗಂಗಾ ನದಿಯಲ್ಲಿ ನೂರಾರು ಸಿಲಿಂಡರ್‌ಗಳು ತೇಲುತ್ತಾ ಸಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಘಟನೆಯ ಬೆನ್ನಲ್ಲೇ ರಾಯಗಡ ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ಎಚ್ಚರಿಕೆ ವಹಿಸಿವೆ. ರಾಯಗಡ ಜಿಲ್ಲಾಧಿಕಾರಿ ಕಿಶನ್ ಜವಳೆ ಸಾರ್ವಜನಿಕರಿಗೆ ತುರ್ತು ಸುರಕ್ಷತಾ ಸೂಚನೆ ನೀಡಿದ್ದು, ನದಿಯಲ್ಲಿ ತೇಲಿ ಬರುತ್ತಿರುವ ಅಥವಾ ನದಿ ತೀರಕ್ಕೆ ಕೊಚ್ಚಿಕೊಂಡು ಬಂದಿರುವ ಯಾವುದೇ ಎಲ್‌ಪಿಜಿ ಸಿಲಿಂಡರ್‌ನ ಬಳಿ ಹೋಗಬಾರದು ಎಂದು ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸಿಲಿಂಡರ್‌ಗಳನ್ನು ಎತ್ತಿಕೊಳ್ಳುವುದು, ಸ್ಥಳಾಂತರಿಸುವುದು ಅಥವಾ ಮನೆಗೆ ಕೊಂಡೊಯ್ಯುವುದು ಅಪಾಯಕಾರಿಯಾಗಿದ್ದು, ಇಂತಹ ಪ್ರಯತ್ನಗಳನ್ನು ಸಾರ್ವಜನಿಕರು ಮಾಡಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರವಾಹದಲ್ಲಿ ಕೊಚ್ಚಿಹೋಗಿರುವ ಸಿಲಿಂಡರ್‌ಗಳು ಅನಿಲದಿಂದ ತುಂಬಿವೆಯೋ ಅಥವಾ ಖಾಲಿಯಾಗಿವೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಅಲ್ಲದೆ, ಅವುಗಳ ಸುರಕ್ಷತಾ ಸ್ಥಿತಿಯ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ಸಿಲಿಂಡರ್‌ಗಳನ್ನು ಮುಟ್ಟುವುದು, ತೆರೆಯಲು ಪ್ರಯತ್ನಿಸುವುದು ಅಥವಾ ಬಳಸುವುದು ಜೀವಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ವರ್ತಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಯಾರಿಗಾದರೂ ನದಿಯಲ್ಲಿ ಅಥವಾ ನದಿ ತೀರದಲ್ಲಿ ಎಲ್‌ಪಿಜಿ ಸಿಲಿಂಡರ್ ಕಂಡುಬಂದರೆ, ಅದರಿಂದ ಸುರಕ್ಷಿತ ಅಂತರ ಕಾಯ್ದುಕೊಂಡು ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ರಾಯಗಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇನ್ನೂ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುತ್ತಿದ್ದು, ಸಾರ್ವಜನಿಕರು ಅನಗತ್ಯವಾಗಿ ಅಪಾಯಕ್ಕೆ ಒಳಗಾಗದಂತೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೋ | ರ್ಯಾಲಿ ಬಳಿಕ ಗದ್ದಲದ ನಡುವೆ ಜನರನ್ನು ನಿಯಂತ್ರಿಸುವಾಗ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಮಮತಾ ಬ್ಯಾನರ್ಜಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement