
ಶಿರಸಿ : ಬೇಡ್ತಿ ಹಾಗೂ ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ಸಾರ್ವಜನಿಕರೊಂದಿಗೆ ನಾವು ಒಕ್ಕೊರಲಿನಿಂದ ವಿರೋಧಿಸುತ್ತಿದ್ದೇವೆ. ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿನ ಸಮಾವೇಶವನ್ನು ನಾವು ಬೆಂಬಲಿಸುತ್ತೇನೆ. ಸರ್ಕಾರ ಈ ಯೋಜನೆ ಕೈಬಿಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಮಾತನಾಡಿದ ಅವರು, ಬೇಡ್ತಿ – ವರದಾ ಹಾಗೂ ಅಘನಾಶಿನಿ – ವೇದಾವತಿ ನದಿ ಜೋಡಣೆ ಕುರಿತು ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗಿದೆ. ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿ ಯೋಜನೆಗಳಿಗೆ ತ್ಯಾಗ ಮಾಡಿದ ಜಿಲ್ಲೆಯಾಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಯೋಜನೆಗೆ ಭೂಮಿ ತ್ಯಾಗ ಮಾಡಿದೆ. ಶರಾವತಿ, ಕೈಗಾ ವಿದ್ಯುತ್ ಯೋಜನೆಗಳು, ಸೀಬರ್ಡ ಯೋಜನೆ ಹೀಗೆ ಸಾವಿರಾರು ಎಕರೆ ಜಾಗ ಯೋಜನೆಗಳಿದೆ ನೀಡಿದೆ. ಈಗ ಪುನಃ ಬೇಡ್ತಿ – ಅಘನಾಶಿ ನದಿಗಳ ಜೋಡಣೆ ಕುರಿತು ಪ್ರಸ್ತಾಪವಾಗಿದೆ. ಆದರೆ ಅದನ್ನು ಮಾಡುವಾಗ ಜಿಲ್ಲೆಯ ಜನರ ಜೀವನೋಪಾಯ, ಅರಣ್ಯಗಳು ಹಾಗೂ ಕೃಷಿಕರ ಸಮಸ್ಯೆಗಳ ಕುರಿತು ನೋಡಬೇಕಿದೆ ಎಂದರು.
ರೈಲ್ವೆ, ರಸ್ತೆಗಳಿಗೆ ಪರಿಸರದ ನೆಪವೊಡ್ಡಲಾಗುತ್ತಿದೆ. ಆದರೆ ಇಂತಹ ನದಿ ಜೋಡಣೆಗೆ ಇದು ಅನ್ವಯವಾಗುವುದಿಲ್ಲವೇ ? ಇದೇರೀತಿ ಯೋಜನೆಗಳನ್ನು ತಂದರೆ ಇಲ್ಲಿನ ಜನರನ್ನು ಸಮುದ್ರಕ್ಕೆ ಹಾಕಬೇಕೆ? ಅದು ಆಗಬಾರದು ಎಂದಾದಲ್ಲಿ ಶ್ರೀಗಳ ಹೋರಾಟದಲ್ಲಿ ನಾವು ಭಾಗಿಯಾಗಬೇಕು ಎಂದು ಕರೆ ನೀಡಿದರು.
ಬಸವರಾಜ ಬೊಮ್ಮಾಯಿ ಅವರು ಬೇಡ್ತಿ ನದಿ ನೀರನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜನರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಉದ್ದಟತನದ ಹೇಳಿಕೆ ನೀಡುತ್ತಿದ್ದಾರೆ. ಬೊಮ್ಮಾಯಿಯವರು ಯೋಚಿಸಿ ಮಾತನಾಡಬೇಕು. ಇದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಉತ್ತರ ಕನ್ನಡ ಜಿಲ್ಲೆಯ ಪರಿಸರ ಮತ್ತು ಜನರ ಹಿತಾಸಕ್ತಿಯ ಕಾಳಜಿಯಿಲ್ಲದೆ ಇಲ್ಲಿನ ನದಿಗಳ ನೀರು ಕೊಂಡೊಯ್ಯುವ ಬಗ್ಗೆ ಮಾತನಾಡುತ್ತಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಹೆಜ್ಜೆ ಇಡುವ ಮುನ್ನ ಯೋಚನೆ ಮಾಡಲಿ’ ಎಂದು ಎಚ್ಚರಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ