ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಅಂದಿದ್ಯಾಕೆ ನಟ ಅನಂತ ನಾಗ್ ?

ಬೆಂಗಳೂರು: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕನ್ನಡದ ಹಿರಿಯ ನಟ ಅನಂತ ನಾಗ್ (Anant Nag) ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award) ಬಂದ ಹಿನ್ನೆಲೆಯಲ್ಲಿ ಎನ್‌ಡಿಟಿವಿಯ ದೀಪಕ ಬೋಪಣ್ಣ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ 78 ವರ್ಷದ ಅನಂತ ನಾಗ್, ನಟನೆ ತೊರೆಯುವ ತಮ್ಮ ನಿರ್ಧಾರಕ್ಕೆ ಆರೋಗ್ಯ ಸಮಸ್ಯೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿನಿಮಾಗಳ ಸ್ಕ್ರಿಪ್ಟ್‌ಗಳ ಗುಣಮಟ್ಟ ಕುಸಿಯುತ್ತಿರುವುದು, ಕಳಪೆ ಕಂಟೆಂಟ್ ಹಾಗೂ ಚಿತ್ರರಂಗದ ಬದಲಾಗುತ್ತಿರುವ ಆದ್ಯತೆಗಳಿಂದಾಗಿ ತಾವು ನಟನೆಗೆ ವಿದಾಯ ಹೇಳುವ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
“ಯಾವುದೇ ಆರೋಗ್ಯ ಸಮಸ್ಯೆ ಇಲ್ಲ” ಎಂದು ಸ್ಪಷ್ಟಪಡಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಸಿನಿಮಾಗಳನ್ನು ನಿರ್ಮಿಸುವ ರೀತಿಯ ಬಗ್ಗೆ ತಮಗೆ ಅಸಮಾಧಾನವಿದೆ ಎಂದು ಹೇಳಿದ್ದಾರೆ.
2021-22ರಲ್ಲಿ ತಾವು ಐದು ಸಿನಿಮಾಗಳಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಅನಂತ ನಾಗ್, ಆ ಚಿತ್ರಗಳಿಗಾಗಿ ತಮ್ಮ ಸಂಪೂರ್ಣ ಶ್ರಮ ಹಾಕಿದ್ದಲ್ಲದೆ, ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಯುವ ನಿರ್ದೇಶಕರು ಹಾಗೂ ಚಿತ್ರತಂಡಕ್ಕೆ ಹಲವು ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ, ಆ ಸಿನಿಮಾಗಳು ಅಂತಿಮವಾಗಿ ಮೂಡಿಬಂದ ರೀತಿಯಿಂದ ತಾನು ತೃಪ್ತನಾಗಿರಲಿಲ್ಲ ಎಂದು ಹೇಳಿದ್ದಾರೆ.

“ನಾನು ಚಿತ್ರದಲ್ಲಿ ನಟಿಸುವಾಗ ಮತ್ತು ಶೂಟಿಂಗ್ ನಡೆಯುವಾಗ ನನ್ನ ಭಾಗಗಳು ನನ್ನ ತೃಪ್ತಿಗೆ ತಕ್ಕಂತೆ ಇರುತ್ತಿದ್ದವು. ಆದರೆ, ನಂತರ ನನ್ನ ಹಿಂದೆ ಏನು ನಡೆಯುತ್ತಿತ್ತು ಎಂಬುದು ನನಗೆ ತಿಳಿಯುತ್ತಿರಲಿಲ್ಲ. ಕೊನೆಗೆ ಆ ಐದೂ ಸಿನಿಮಾಗಳು ವಿಫಲವಾದವು” ಎಂದು ಅವರು ಹೇಳಿದ್ದಾರೆ.
ಈ ಅನುಭವವೇ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸಬಾರದು ಎಂಬ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣವಾಯಿತು ಎಂದು ಅನಂತ ನಾಗ್ ತಿಳಿಸಿದ್ದಾರೆ.
ಸಮಕಾಲೀನ ಚಿತ್ರರಂಗದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆಯೂ ಮಾತನಾಡಿದ ಅವರು, ಚಿತ್ರರಂಗದಲ್ಲಿ ಅಹಂ ಮತ್ತು ಹಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಪ್ರೇಕ್ಷಕರ ಬಗ್ಗೆ ಹಾಗೂ ಅವರಿಗೆ ನೀಡಲಾಗುತ್ತಿರುವ ಕಥಾವಸ್ತುವಿನ ಗುಣಮಟ್ಟದ ಬಗ್ಗೆ ನಿರ್ಮಾಪಕರು ಸಾಕಷ್ಟು ಗಮನ ಹರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ. “ನೀವು ಏನು ಮಾಡುತ್ತಿದ್ದೀರಿ? ಪ್ರೇಕ್ಷಕರು ಎಲ್ಲಿದ್ದಾರೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ಕಲ್ಲು ಕ್ವಾರಿ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ.ದಂಡ

₹1,000 ಕೋಟಿ, ₹2,000 ಕೋಟಿ ಹಾಗೂ ₹5,000 ಕೋಟಿ ಗಳಿಕೆಯಂತಹ ಭಾರಿ ಬಾಕ್ಸ್‌ಆಫೀಸ್ ಕಲೆಕ್ಷನ್‌ಗಳ ಕುರಿತ ಹೇಳಿಕೆಗಳ ಬಗ್ಗೆಯೂ ಅನಂತ ನಾಗ್ ಪ್ರಶ್ನೆ ಎತ್ತಿದ್ದಾರೆ. “ಮೊದಲು ₹1,000 ಕೋಟಿ, ₹2,000 ಕೋಟಿ, ₹5,000 ಕೋಟಿ ಕಲೆಕ್ಷನ್ ಎಂದು ಹೇಳುತ್ತಾರೆ. ಆದರೆ ಅದು ಎಲ್ಲಿದೆ? ಎಲ್ಲಿಂದ ಬರುತ್ತದೆ? ಹಾಗಾದರೆ ನಿರ್ಮಾಪಕ ಏಕೆ ದಿವಾಳಿಯಾಗುತ್ತಿದ್ದಾನೆ?” ಎಂದು ಅವರು ಪ್ರಶ್ನಿಸಿದ್ದಾರೆ.

ನಿರ್ಮಾಪಕರ ಆರ್ಥಿಕ ಯಶಸ್ಸಿನ ಜೊತೆಗೆ ಸಿನಿಮಾದ ಗುಣಮಟ್ಟಕ್ಕೂ ಮಹತ್ವ ನೀಡಬೇಕು ಎಂದು ಹೇಳಿದ ಅವರು, ಪ್ರೇಕ್ಷಕರಿಗೆ ನಿಜವಾಗಿಯೂ ನೋಡಲು ಯೋಗ್ಯವಾದ ಗುಣಮಟ್ಟದ ಸಿನಿಮಾ ನೀಡಲಾಗುತ್ತಿದೆಯೇ ಎಂಬುದನ್ನೂ ಮುಂದಿಟ್ಟಿದ್ದಾರೆ.
ಒಂದು ಕಾಲದಲ್ಲಿ ಸಿನಿಮಾಗಳು ಕೇವಲ ಮನರಂಜನೆಗೆ ಸೀಮಿತವಾಗಿರಲಿಲ್ಲ. ಮನರಂಜನೆಯ ಜೊತೆಗೆ ಪ್ರೇಕ್ಷಕರಿಗೆ ಜ್ಞಾನ, ಶಿಕ್ಷಣ ಹಾಗೂ ಮಾಹಿತಿಯನ್ನೂ ನೀಡುತ್ತಿದ್ದವು. ಆದರೆ, ಕ್ರಮೇಣ ಆ ಮೌಲ್ಯಗಳು ಚಿತ್ರರಂಗದಿಂದ ಕಣ್ಮರೆಯಾಗಿವೆ ಎಂದು ಅನಂತ ನಾಗ್ ಅಭಿಪ್ರಾಯಪಟ್ಟಿದ್ದಾರೆ.
“ಅದೆಲ್ಲವೂ ಕಣ್ಮರೆಯಾಯಿತು. ಎಲ್ಲ ಮೌಲ್ಯಗಳೂ ಇಲ್ಲದಂತಾದವು. ಅವುಗಳ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ” ಎಂದು ಅವರು ಹೇಳಿದ್ದಾರೆ.
ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಹಿರಿಯ ನಟ ಅನಂತ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. 2026ರ ಸೆಪ್ಟೆಂಬರ್ 22ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ತಮ್ಮ ವೃತ್ತಿಜೀವನದಲ್ಲಿ ಅನಂತ ನಾಗ್ ಅವರು ಐದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2025ರಲ್ಲಿ ಭಾರತ ಸರ್ಕಾರವು ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿ ಅವರನ್ನು ಗೌರವಿಸಿತ್ತು.

ಪ್ರಮುಖ ಸುದ್ದಿ :-   ರೇಷನ್ ಕಾರ್ಡುದಾರರಿಗೆ ಗುಡ್ ನ್ಯೂಸ್: ರೇಷನ್‌ ಕಾರ್ಡ್‌ ಇ ಕೆವೈಸಿ ಗಡುವು ವಿಸ್ತರಿಸಿದ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement