ನವದೆಹಲಿ: ಕೇಂದ್ರ ಸಚಿವರೊಬ್ಬರ ಪತ್ನಿ ಹಾಗೂ ನಿವೃತ್ತ ರಾಜತಾಂತ್ರಿಕ ಅಧಿಕಾರಿಯಾಗಿರುವ ಲಕ್ಷ್ಮೀ ಪುರಿ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಅಲ್ಲದೆ, ಅವರ ಬಳಿ ಕ್ಷಮೆಯಾಚನೆ ಮಾಡಿ ಎಂದು ಸೂಚಿಸಿದೆ.
ಎಂಟು ವಾರದೊಳಗೆ ಆದೇಶ ಪಾಲಿಸಬೇಕು ಎಂದು ಸೂಚಿಸಿರುವ ನ್ಯಾಯಮೂರ್ತಿ ಅನೂಪ ಜೈರಾಮ ಭಂಭಾನಿ ಅವರು ಪತ್ರಿಕೆಯಲ್ಲಿ ಮತ್ತು ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕ್ಷಮೆಯಾಚನೆ ಪ್ರಕಟಿಸುವಂತೆ ಗೋಖಲೆ ಅವರಿಗೆ ಸೂಚಿಸಿದ್ದಾರೆ. ಈ ಸಂಬಂಧ ಗೋಖಲೆ ಅವರು ಯಾವುದೇ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ನಿರ್ಬಂಧ ಹೇರಿದ್ದಾರೆ.
ಲಕ್ಷ್ಮೀ ಪುರಿ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾಗಿರುವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ. ಆದಾಯ ಮೀರಿ ಸ್ವಿಟ್ಸರ್ಲೆಂಡ್ನಲ್ಲಿ ಲಕ್ಷ್ಮೀ ಪುರಿ ಅವರು ಆಸ್ತಿ ಗಳಿಸಿದ್ದಾರೆ ಎಂದು ಗೋಖಲೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಸಿ ಲಕ್ಮೀ ಅವರು ₹5 ಕೋಟಿ ಮಾನನಷ್ಟ ಕೋರಿ 2021ರಲ್ಲಿ ಗೋಖಲೆ ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು.
ಗೋಖಲೆ ಅವರ ಟ್ವೀಟ್ಗಳು ಮಾನಹಾನಿಕರ, ದುರುದ್ದೇಶಪೂರಿತ ಮತ್ತು ಸುಳ್ಳು ಮಾಹಿತಿಯನ್ನು ಆಧರಿಸಿವೆ ಎಂದು ಅವರು ದೂರಿದ್ದರು.
ವಾದ ಆಲಿಸಿದ ನ್ಯಾಯಮೂರ್ತಿ ಭಂಭಾನಿ ಅವರು ಗೋಖಲೆ ಅವರ ಆರೋಪಗಳು “ಸುಳ್ಳು ಮತ್ತು ಅಸತ್ಯದಿಂದ ಕೂಡಿವೆ. ಗೋಖಲೆ ಟ್ವೀಟ್ಗಳು ಮಾನಹಾನಿಕರವಾಗಿದ್ದು ಲಕ್ಷ್ಮಿ ಅವರು ತಮ್ಮ ಪ್ರತಿಷ್ಠೆಗೆ ಧಕ್ಕೆ ಆಗುವಂತಿವೆ” ಎಂದು ಹೇಳಿದ್ದಾರೆ. ಗೋಖಲೆ ಅವರು, ಮೊದಲಿಗೆ ತಾವು ಈ ಹಿಂದೆ ಟ್ವೀಟ್ ಮಾಡಿದ್ದ ಖಾತೆಯ ಮೂಲಕ ಮತ್ತು ದಿನಪತ್ರಿಕೆಗಳ ಮೂಲಕ ಕ್ಷಮೆಯಾಚನೆ ಮಾಡಬೇಕು. ಆ ಟ್ವೀಟ್ ಅನ್ನು 6 ತಿಂಗಳು ಅಳಿಸಿ ಹಾಕುವಂತಿಲ್ಲ. ದೂರುದಾರರು ಅನುಭವಿಸಿರುವ ಮಾನಸಿಕ ವೇದನೆಗೆ ಪರಿಹಾರವಾಗಿ 8 ವಾರಗಳಲ್ಲಿ ₹50 ಲಕ್ಷ ಪರಿಹಾರ ನೀಡಬೇಕು’ ಎಂದು ಕೋರ್ಟ್ ಆದೇಶಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ