ಶ್ರೀ ಸ್ವರ್ಣವಲ್ಲೀಯಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ : ಯಾಗ ಶಾಲೆಯಲ್ಲಿ ಧರ್ಮ ಯಜ್ಞ; ಪ್ರಾಂಗಣದಲ್ಲಿ ಸೇವಾ ಯಜ್ಞ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ  ಸ್ವರ್ಣವಲ್ಲೀ‌ ಮಠದಲ್ಲಿ ಶಿಷ್ಯ ಸ್ವೀಕಾರ ‌ಮಹೋತ್ಸವಕ್ಕೆ ಧಾರ್ಮಿಕ ಸಂಭ್ರಮ ಧರ್ಮ ಯಜ್ಞದ ಜೊತೆಗೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ, ಸೌಕರ್ಯ ಒದಗಿಸಲು ಕಾರ್ಯಕರ್ತರು ಸೇವಾ ಯಜ್ಞಕ್ಕೆ ಕಂಕಣ ತೊಟ್ಟಿದ್ದಾರೆ.
ಯಾಗ, ಹವನ …….
ಶಿಷ್ಯ ಸ್ವೀಕಾರ ಮಹೋತ್ಸವದ ಅಂಗವಾಗಿ ಸೋಮವಾರ ನಾಗರಾಜ ಭಟ್ಟರಿಂದ ಮಹಾರುದ್ರ ಹವನದ ಪೂರ್ಣಾಹುತಿ ನಡೆಯಿತು. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ ನೀಡಿದರು. ಚಿನ್ಮಯ ಜೋಶಿ ಬಾಡಲಕೊಪ್ಪ ಹವನದ ಅಧ್ವರ್ಯುವಾಗಿ ಪ್ರಭಾಕರ ಉಪಾಧ್ಯರು ಗೋಕರ್ಣ ಬ್ರಹ್ಮರಾಗಿ, ಭಾಲಚಂದ್ರ ಶಾಸ್ತ್ರಿಗಳು ಸದಸ್ಯರಾಗಿ, ಕೃಷ್ಣ ಜೋಯಿಸರು ಕಲಶಪೂಜೆ ಮಾಡಿದರು. 80ಕ್ಕೂ ಹೆಚ್ಚು ವೈದಿಕರು ಇದ್ದರು. 2500ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಹಾಗು ಅಕ್ಷರಾಯುತ (3.20ಲಕ್ಷ) ನೃಸಿಂಹ ಮಂತ್ರ ಜಪ ನಡೆಯಿತು.

ಕಾರ್ಯಕರ್ತರಿಂದ ಸೇವಾ ಕೈಂಕರ್ಯ…
ಭಾನುವಾರ (ಫೆ. ೧೮)ದಿಂದ ಆರಂಭಗೊಂಡ ಐದು ದಿನಗಳ ಕಾಲ ಸ್ವರ್ಣವಲ್ಲೀ‌ ಮಠದಲ್ಲಿ ನಡೆಯುತ್ತಿರವ ಶಿಷ್ಯ ಸ್ವೀಕಾರ ಕಾರ್ಯಕ್ರಮಕ್ಕೆ ಪ್ರತಿ‌ ದಿನ ೬೦೦ಕ್ಕೂ ಅಧಿಕ ಕಾರ್ಯಕರ್ತರು ಅವಿರತ ಕೆಲಸ ಮಾಡುತ್ತಿದ್ದಾರೆ. ಶ್ರೀ ಮಠದಲ್ಲಿಯೇ ೨೫೦ಕ್ಕೂ ಅಧಿಕ ಸ್ವಯಂ ಸೇವಕರು ಐದೂ ದಿನಗಳ ಕಾಲ ವಾಸ್ತವ್ಯ ಮಾಡಿ ಸೇವೆ ನೀಡಲು ಅಕ್ಷರಶಃ ‘ಪಣ’ ತೊಟ್ಟಿದ್ದಾರೆ.
ಸ್ವಯಂ ಸೇವಕರಾಗಿ ಹವ್ಯಕ, ರಾಮಕ್ಷತ್ರೀಯ, ಮರಾಠ, ಸಿದ್ಧಿ, ಹಾಲಕ್ಕಿ, ಗೌಳಿ, ಕುಣಬಿ ಹಾಗೂ ಇತರ‌ ಸಮಾಜದವರು ಸೇವಾ ಮನೋಭಾವದಲ್ಲಿ ಕೆಲಸ‌ ಮಾಡುತ್ತಿದ್ದಾರೆ. ೮೦ಕ್ಕೂ ಅಧಿಕ ವೈದಿಕರ ಜೊತೆಗೆ ೯೦ಕ್ಕೂ ಅಧಿಕ ಪರಿಚಾರಕರು, ದೇವತಾ ಸೇವೆಯಲ್ಲಿ ಪಾರಂಪರಿಕವಾಗಿ ದ್ರವ್ಯ, ಹಣ್ಣುಕಾಯಿ, ಪ್ರಸಾರ ಸೇವೆಯಲ್ಲಿ ೪೦ಕ್ಕೂ ಅಧಿಕ ಜನರು ಪಾಳಿಯ ಪ್ರಕಾರ ಕೆಲಸ ಮಾತ್ತಿದ್ದಾರೆ. ಆಯ್ದ ಕಡೆ ರಕ್ಷಣೆ, ಭದ್ರತೆಗೂ ಕೆಲಸ ಮಾಡುತ್ತಿದ್ದಾರೆ.
ಸ್ವಾಗತ ಹಾಗೂ ಮಾರ್ಗದರ್ಶನಕ್ಕೆ ೩೦ ಜನರಿದ್ದಾರೆ. ಕೊನೆಯ ಎರಡು‌ ದಿನ ಫೆ.೨೧, ೨೨ಕ್ಕೆ ೬೦೦ರಿಂದ ೭೦೦ ಕಾರ್ಯಕರ್ತರು ಅನ್ನ ಪ್ರಸಾದ, ಪಾನೀಯ ಸೇವೆ ನೀಡಲು ಸಜ್ಜಾಗುತ್ತಿದ್ದಾರೆ. ಭಕ್ತರಿಗೆ ಊಟೋಪಚಾರ ಒದಗಿಸಲು ೪೦ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ.
ಸರ್ವ ಸೇವೆಗೆ ಕಂಟ್ರೋಲ್ ರೂಂ ಮಾಡಲಾಗಿದೆ. ಆರೋಗ್ಯ, ಅಗ್ನಿ ಶಾಮಕ ದಳ, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳೂ ಸಹಕಾರ ನೀಡುತ್ತಿವೆ.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

ಪಾರ್ಕಿಂಗ್‌ ವ್ಯವಸ್ಥೆ…
ಆಗಮಿಸುವ ಭಕ್ತರಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು‌ ದಿನಗಳಿಂದ ಮಠಕ್ಕೆ ನಿತ್ಯ ಒಂದುವರೆ ಸಾವಿರಕ್ಕೂ ಅಧಿಕ ವಾಹನಗಳು ಬರುತ್ತಿವೆ. ಯತಿಗಳು, ಗಣ್ಯರು, ಋತ್ವಿಜರು, ಪದಾಧಿಕಾರಿಗಳಿಗೆ, ಮಾಧ್ಯಮಗಳಿಗೆ, ಭಕ್ತರು, ಕಾರ್ತಕರ್ತರು ಎಂಬ ಪ್ರತ್ಯೇಕ ವಿಭಾಗ ಮಾಡಲಾಗಿದ್ದು, ಸುಮಾರು ೧೧ ಕಡೆ ಸ್ಥಳ ನಿಯೋಜನೆ ಮಾಡಲಾಗಿದೆ. ಫೆ.೨೧, ೨೨ಕ್ಕೆ ಮಠದ ಗದ್ದೆಯಲ್ಲಿಯೂ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಮಠದ ಪ್ರವೇಶ ದ್ವಾರದ ಪಕ್ಕದಲ್ಲಿ ಹೊರೆಗಾಣಿಕೆ ಸ್ವೀಕರಿಸಲು ಮಳಿಗೆ ತೆರೆದಿದ್ದು, ಭಕ್ತರು ಮನೆಯಲ್ಲಿ ಬೆಳೆದ ದವಸ ಧಾನ್ಯ, ತರಕಾರಿ ನೀಡುತ್ತಿದ್ದಾರೆ.
ಬೆಳಿಗ್ಗೆ ೮:೩೦ರಿಂದ ರಾತ್ರಿ ೭ ತನಕ ಹೊರಗಾಣಿಕೆ ಸಲ್ಲಿಸಲು ರಥದ ಮನೆಯ ಪಕ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕರ್ತರ ವಿಭಾಗದ ಸಂಚಾಲಕರಾದ ಟಿ.ಎನ್.ಭಟ್ ನಡಿಗೆಮನೆ,‌ ರಮಾಕಾಂತ ಹೆಗಡೆ ವಾನಳ್ಳಿ ತಿಳಿಸಿದ್ದಾರೆ.

ವಾಹನ ಸೇವಾ ಕೈಂಕರ್ಯ!
ಸೋಂದಾ‌ ಕತ್ರಿಯಿಂದ ಮಠಕ್ಕೆ, ಮಠದಿಂದ ಊಟೋಪಚಾರ ವ್ಯವಸ್ಥೆಗೆ ವಾಹನ ಸೌಲಭ್ಯ ಮಾಡಲಾಗಿದೆ. ಉಚಿತವಾಗಿ ಭಕ್ತರ ಓಡಾಟಕ್ಕೆ ಸಹಕಾರ ನೀಡುತ್ತಿದ್ದಾರೆ. ಶಿರಸಿಯಿಂದ ವಾಯುವ್ಯ ಸಾರಿಗೆ ಬಸ್ಸಿನ ಸೌಲಭ್ಯವೂ ಇದೆ.
ಶ್ರೀಸ್ವರ್ಣವಲ್ಲೀಯಲ್ಲಿ ಮಂಗಳವಾರ…
ಶಿಷ್ಯ ಮಹೋತ್ಸವ ಹಿನ್ನಲೆಯಲ್ಲಿ ಮೂರನೇ ದಿ‌ನ ಮಂಗಳವಾರ ಅಷ್ಟಶ್ರಾದ್ಧ, ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನ, ಮಧ್ಯಾಹ್ನೋತ್ತರ ಲಕ್ಷ್ಮೀನೃಸಿಂಹ ಜಪ ನಡೆಯಲಿದೆ.ಸಂಜೆ‌ ಶ್ರೀಮಠದ ಇತಿಹಾಸದ ಕುರಿತು ಡಾ. ಲಕ್ಷ್ಮೀಶ ಸೋಂದಾ ಉಪನ್ಯಾಸ, ಭಜನೆ, ಶಂಕರ ಭಟ್ಟ ಉಂಚಳ್ಳಿ ಅವರ ಕೀರ್ತನೆ ನಡೆಯಲಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement