ಕರ್ನಾಟಕದ ಆರು ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಮುನ್ಸೂಚನೆ; ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಜುಲೈ 23ರಿಂದ 26ರ ವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ , ಉಡುಪಿ, ದಕ್ಷಿಣ ಕನ್ನಡದ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.
ಆದರೆ ಕಳೆದ ಕೆಲವು ದಿನಗಳಿಂದ ಅತಿ ಭಾರೀ ಮಳೆಯ ರೆಡ್‌ ಅಲರ್ಟ್‌ ನೀಡುತ್ತ ಬಂದಿದ್ದ ಹವಾಮಾನ ಇಲಾಖೆ ಈಗ ಮಳೆಯ ಮಟ್ಟವನ್ನು ಈಗ ಯೆಲ್ಲೋ ಅಲರ್ಟ್‌ಗೆ ಇಳಿಕೆ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಜುಲೈ 23ರಿಂದ 24ರ ವರೆಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಜು.26ರ ವರೆಗೆ ಹಲವು ಕಡೆಗಳಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 20 ಸೆಂ.ಮೀ. ಮಳೆ 
ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ ರಾಕ್‌ ನಲ್ಲಿ 20 ಸೆಂ.ಮೀ. ಮಳೆ ಸುರಿದಿದೆ. ಅದೇರೀತಿ ಹೊನ್ನಾವರ ಹಾಗೂ ಆಗುಂಬೆಯಲ್ಲಿ ತಲಾ 11 ಸೆಂ.ಮೀ ಮಳೆ ಬಿದ್ದಿದೆ. ಸಿದ್ದಾಪುರ 10 ಸೆಂಮೀ , ಧರ್ಮಸ್ಥಳ, ಲಿಂಗನಮಕ್ಕಿ 8 ಸೆಂಮೀ, ಕುಮಟಾ, ಬೆಳಗಾವಿ ಜಿಲ್ಲೆ ಲೋಂಡಾದಲ್ಲಿ 7 ಸೆಂ.ಮೀ. ಮಳೆ ಸುರಿದಿದೆ.

ಪ್ರಮುಖ ಸುದ್ದಿ :-   ವಾಟ್ಸಾಪ್​ನಲ್ಲಿ ಮದುವೆ ಆಮಂತ್ರಣ ಕಾರ್ಡ್‌ ಬಂದ್ರೆ ಕ್ಲಿಕ್ ಮಾಡುವ ಮುನ್ನ ಎಚ್ಚರ ; ಕ್ಲಿಕ್ ಮಾಡಿ 10 ಲಕ್ಷ ರೂ. ಕಳೆದುಕೊಂಡ ಅಧಿಕಾರಿ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement