ನವದೆಹಲಿ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ಗೆ ಭಾರಿ ಹಿನ್ನಡೆಯಾಗಿದೆ. ಇಂಡಿಯಾ ಮೈತ್ರಿಕೂಟದ ಪ್ರಬಲ ಅಂಗಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಘೋಷಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಪ್ರಮುಖ ಕಾಂಗ್ರೆಸ್ನೊಂದಿಗೆ ಸೀಟು ಹಂಚಿಕೆಯ ಮಾತುಕತೆ ವಿಫಲವಾಗಿರುವುದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಹೋಗುವ ತನ್ನ ನಿರ್ಧಾರಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. “ನಾನು ಅವರಿಗೆ ಯಾವುದೇ ಪ್ರಸ್ತಾಪವನ್ನು ನೀಡಿದರೂ, ಅವರು ಎಲ್ಲವನ್ನೂ ನಿರಾಕರಿಸಿದ್ದಾರೆ. ಹೀಗಾಗಿ ನಾವು ಬಂಗಾಳದಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಎಲ್ಲ ಸ್ಥಾನಗಳಲ್ಲಿಯೂ ಸ್ಪರ್ಧಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ, ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ನಾನು ಯಾವಾಗಲೂ ಹೇಳುತ್ತೇನೆ, ದೇಶದಲ್ಲಿ ಏನು ಮಾಡಲಾಗುತ್ತದೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನಮ್ಮದು ಜಾತ್ಯತೀತ ಪಕ್ಷ ಮತ್ತು ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ನಾನು ಅನೇಕ ಪ್ರಸ್ತಾಪಗಳನ್ನು ನೀಡಿದ್ದೇನೆ ಆದರೆ ಅವರು ಅದನ್ನು ಮೊದಲಿನಿಂದಲೂ ತಿರಸ್ಕರಿಸುತ್ತ ಬಂದರು. ಅಂದಿನಿಂದಲೇ ನಾವು ಬಂಗಾಳದಲ್ಲಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.
ನ್ಯಾಯ ಯಾತ್ರೆ ಕುರಿತು ಮಮತಾ ಹೇಳಿಕೆ
ಯಾತ್ರೆಗೆ ಸೇರುವಂತೆ ಇಂಡಿಯಾ ಮೈತ್ರಿಕೂಟ ಪಕ್ಷಗಳನ್ನು ಆಹ್ವಾನಿಸಲಾಗಿದೆ ಎಂಬ ಕಾಂಗ್ರೆಸ್ಸಿನ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ರಾಹುಲ್ ಗಾಂಧಿಯವರ ಭಾರತ ಜೋಡಿ ನ್ಯಾಯ ಯಾತ್ರೆಯು ಪಶ್ಚಿಮ ಬಂಗಾಳದ ಮೂಲಕ ಹಾದುಹೋಗುವ ಬಗ್ಗೆ ನನಗೆ ತಿಳಿಸಲಾಗಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ,
“ನಾನು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ ಸೌಜನ್ಯಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಬರುವುದಾಗಿ ಅವರು ನನಗೆ ತಿಳಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ ಬಂಗಾಳಕ್ಕೆ ಸಂಬಂಧಿಸಿದಂತೆ ನನ್ನೊಂದಿಗೆ ಆ ಪಕ್ಷದ ಯಾವುದೇ ಸಂಬಂಧವಿಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
“ಅಖಿಲ ಭಾರತ ಮಟ್ಟದಲ್ಲಿ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ. ನಮ್ಮದು ಜಾತ್ಯತೀತ ಪಕ್ಷ. ಬಿಜೆಪಿಯನ್ನು ಸೋಲಿಸಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಮೈತ್ರಿ ಯಾವುದೇ ಒಂದು ಪಕ್ಷವನ್ನು ಒಳಗೊಂಡಿಲ್ಲ, ನಾವು ಅನೇಕ ಪಕ್ಷಗಳು ಸೇರಿ ಹೋರಾಡಬೇಕು ಎಂದು ನಾವು ಹೇಳಿದ್ದೇವೆ. ಪ್ರಾದೇಶಿಕ ಪಕ್ಷಗಳಿಗೆ ಅವರ ರಾಜ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಲು ಬಿಡಬೇಕು, ಅವರು ಹಸ್ತಕ್ಷೇಪ ಮಾಡಬಾರದು, ”ಎಂದು ಅವರು ಹೇಳಿದರು.
ಮಮತಾ ಈ ನಡೆಗೆ ಸಂಭಾವ್ಯ ಕಾರಣ
ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರು ಬಂಗಾಳ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ನಂತರ ತೃಣಮೂಲ ಮತ್ತು ಕಾಂಗ್ರೆಸ್ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಧೀರ್ ಚೌಧರಿ ಅವರು 2011 ರ ಚುನಾವಣೆಯಲ್ಲಿ ಕಾಂಗ್ರೆಸ್ ಕೃಪೆಯಿಂದ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದರು. “ಈ ಬಾರಿ ಮಮತಾ ಬ್ಯಾನರ್ಜಿ ಕೃಪೆಯಿಂದ ಚುನಾವಣೆ ನಡೆಯುವುದಿಲ್ಲ. ಚುನಾವಣೆಯನ್ನು ಹೇಗೆ ಎದುರಿಸಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದೆ. ಮಮತಾ ಬ್ಯಾನರ್ಜಿ ಅವಕಾಶವಾದಿ; ಅವರು 2011 ರಲ್ಲಿ ಕಾಂಗ್ರೆಸ್ ಕೃಪೆಯಿಂದ ಅಧಿಕಾರಕ್ಕೆ ಬಂದರು ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಂಗಳವಾರ ವಾಗ್ದಾಳಿ ನಡೆಸಿದ್ದರು.
ಜೈರಾಮ ರಮೇಶ ಪ್ರತಿಕ್ರಿಯೆ
ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಅವರ ಘೋಷಣೆಯ ನಂತರ, ಕಾಂಗ್ರೆಸ್ ನಾಯಕ ಜೈರಾಮ ರಮೇಶ ಅವರು ಪ್ರತಿಕ್ರಿಯಿಸಿ, ಟಿಎಂಸಿ ಪಕ್ಷವು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಪ್ರಮುಖ ಆಧಾರ ಸ್ತಂಭವಾಗಿದೆ ಮತ್ತು ಮಮತಾ ಬ್ಯಾನರ್ಜಿ ಇಲ್ಲದೆ ಮೈತ್ರಿಯನ್ನು ಕಲ್ಪಿಸಿಕೊಳ್ಳಲು ಆಗುವುದಿಲ್ಲ ಹೇಳಿದ್ದಾರೆ. “ನೀವು ಮಮತಾ ಬ್ಯಾನರ್ಜಿಯವರ ಸಂಪೂರ್ಣ ಹೇಳಿಕೆಗೆ ಕಿವಿಗೊಟ್ಟಿಲ್ಲ, ನಾವು ಬಿಜೆಪಿಯನ್ನು ಸೋಲಿಸಲು ಬಯಸುತ್ತೇವೆ ಮತ್ತು ನಾವು ಬಿಜೆಪಿಯನ್ನು ಸೋಲಿಸಲು ಒಂದು ಹೆಜ್ಜೆಯನ್ನೂ ಹಿಂದಿಡುವುದಿಲ್ಲ ಎಂಬುದು ಅವರ ಸಂಪೂರ್ಣ ಹೇಳಿಕೆಯಾಗಿದೆ. ಅದೇ ಭಾವನೆಯಿಂದ ನಾವು ಪಶ್ಚಿಮ ಬಂಗಾಳವನ್ನು ಪ್ರವೇಶಿಸುತ್ತಿದ್ದೇವೆ. ಪ್ರಯಾಣ ದೀರ್ಘವಾಗಿದೆ, ದಾರಿಯಲ್ಲಿ ಕೆಲವು ಸ್ಪೀಡ್ ಬ್ರೇಕರ್ಗಳು ಇರಬಹುದು, ಮತ್ತು ಕೆಂಪು ದೀಪವೂ ಇರಬಹುದು, ಆದರೆ ನಾವು ಪ್ರಯಾಣವನ್ನು ನಿಲ್ಲಿಸಬೇಕು ಎಂದು ಅರ್ಥವಲ್ಲ. ಪ್ರಯಾಣ ಮುಂದುವರಿಯುತ್ತದೆ; ನಾವು ಸ್ಪೀಡ್ ಬ್ರೇಕರ್ಗಳನ್ನು ಮತ್ತು ಕೆಂಪು ದೀಪಗಳನ್ನು ದಾಟಿ ಹಸಿರು ಬಣ್ಣಕ್ಕೆ ತಿರುಗಿಸುತ್ತೇವೆ ” ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆ 2024
18 ನೇ ಲೋಕಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಏಪ್ರಿಲ್ ಮತ್ತು ಮೇ ನಡುವೆ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಎಂದು ಗಮನಿಸಬೇಕು. 17ನೇ ಲೋಕಸಭೆಯ ಅಧಿಕಾರಾವಧಿಯು ಜೂನ್ನಲ್ಲಿ ಕೊನೆಗೊಳ್ಳಲಿದೆ. ಹಿಂದಿನ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್-ಮೇ 2019 ರಲ್ಲಿ ನಡೆದವು. ಚುನಾವಣೆಯ ನಂತರ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿತು, ನರೇಂದ್ರ ಮೋದಿ ಅವರು ಸತತ ಎರಡನೇ ಅವಧಿಗೆ ಪ್ರಧಾನಿಯಾದರು.
ನಿಮ್ಮ ಕಾಮೆಂಟ್ ಬರೆಯಿರಿ