ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ತಂಡ ಪ್ರಕಟಿಸಿದ ಬಿಸಿಸಿಐ ; ಕನ್ನಡಿಗ ರಾಹುಲ್‌ ತಂಡದ ನಾಯಕ

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮುಂಬರುವ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತದ ತಂಡವನ್ನು ಭಾನುವಾರ ಪ್ರಕಟಿಸಿದೆ.
ಕೆ.ಎಲ್. ರಾಹುಲ್ ಅವರನ್ನು ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಹ ಇದ್ದು, ರವೀಂದ್ರ ಜಡೇಜಾ ಕೂಡ ಮರಳಿ ತಂಡ ಸೇರಿದ್ದಾರೆ. ಈವರೆಗೆ ನಾಯಕರಾಗಿದ್ದ ಶುಭಮನ್ ಗಿಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆಗೆ ಆದ ಗಾಯದಿಂದಾಗಿ ತಂಡದಲ್ಲಿ ಇಲ್ಲ. ಹೀಗಾಗಿ ಕೆ.ಎಲ್. ರಾಹುಲ್ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉಪನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಕೂಡ ಈ ತಂಡದಲ್ಲಿ ಇಲ್ಲ. ಅವರು ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ ಆದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಬುಮ್ರಾಗೆ ವಿಶ್ರಾಂತಿ, ಮರಳಿದ ಪಂತ್‌…
ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಆಗಸ್ಟ್ 2024 ರಲ್ಲಿ ಕೊನೆಯ ಬಾರಿಗೆ ಭಾರತದ 50-ಓವರ್ ಸ್ವರೂಪದಲ್ಲಿ ಆಡಿದ್ದರು. ಇದೀಗ ಅವರು ಏಕದಿನ ತಂಡಕ್ಕೆ ಮರಳಿದ್ದಾರೆ. ಅವರು ತಂಡದಲ್ಲಿರುವ ಮೂವರು ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರಾಗಿದ್ದು, ತಂಡದಲ್ಲಿ ಧ್ರುವ್ ಜುರೆಲ್ ಕೂಡ ಸ್ಥಾನ ಪಡೆದಿದ್ದಾರೆ.
ಇದೇ ವೇಳೆ, ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯಿಂದಾಗಿ ವಿಶ್ರಾಂತಿ ನೀಡಲಾಗಿದೆ. ಅವರು ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ. ಏಷ್ಯಾ ಕಪ್ 2025 ರ ಭಾಗವಾಗಿದ್ದ ಬುಮ್ರಾ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ ಆಡಿದ್ದರು. ನಂತರ, ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ T20I ಸರಣಿಯಲ್ಲಿ ಆಡಿದ್ದರು, ಆದರೆ ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಏಕದಿನ ಸರಣಿಯಲ್ಲಿ ಆಡಿರಲಿಲ್ಲ. ಇದೀಗ ತಂಡಕ್ಕೆ ಮರಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025 ರ ನಂತರ ಅವರು ಆಡುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಲಿದೆ. ಅಕ್ಷರ್ ಪಟೇಲ್ ಅವರಿಗೆ ಈ ತಂಡದಲ್ಲಿ ಸ್ಥಾನ ದೊರೆತಿಲ್ಲ ಎಂಬುದು ಗಮನಾರ್ಹ.
ಮೂರು ಏಕದಿನ ಪಂದ್ಯಗಳು ನವೆಂಬರ್ 30, ಡಿಸೆಂಬರ್ 3 ಮತ್ತು ಡಿಸೆಂಬರ್ 6 ರಂದು ಕ್ರಮವಾಗಿ ರಾಂಚಿ, ರಾಯ್ಪುರ ಮತ್ತು ವಿಶಾಖಪಟ್ಟಣಂನಲ್ಲಿ ನಡೆಯಲಿವೆ. ಈ ಏಕದಿನ ಪಂದ್ಯಗಳ ನಂತರ ಡಿಸೆಂಬರ್ 9 ರಿಂದ ಐದು T20I ಪಂದ್ಯಗಳು ನಡೆಯಲಿವೆ.
ಭಾರತದ ಏಕದಿನ ತಂಡ:
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ ಕೊಹ್ಲಿ, ತಿಲಕ ವರ್ಮಾ, ಕೆ.ಎಲ್. ರಾಹುಲ್ (ನಾಯಕ) (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ, ರವೀಂದ್ರ ಜಡೇಜಾ, ಕುಲದೀಪ ಯಾದವ್, ನಿತೀಶಕುಮಾರ ರೆಡ್ಡಿ, ಹರ್ಷಿತ್ ರಾಣಾ, ಋತುರಾಜ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುವ ಜುರೆಲ್.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement