ವಿದ್ಯುತ್ ಬಿಕ್ಕಟ್ಟು: ಕಲ್ಲಿದ್ದಲು ಸಾಗಾಟಕ್ಕೆ ದಾರಿ ಮಾಡಿಕೊಡಲು ಭಾರತದಲ್ಲಿ 240 ಪ್ಯಾಸೆಂಜರ್ ರೈಲುಗಳು ರದ್ದು…!

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಉಂಟಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಮಧ್ಯೆ, ದೇಶಾದ್ಯಂತ ಕನಿಷ್ಠ 400 ರೇಕ್‌ಗಳ ಚಲನೆಗೆ ಅನುಕೂಲವಾಗುವಂತೆ 240 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಕಳೆದ ವರ್ಷ, ರೈಲ್ವೆ 347 ಕಲ್ಲಿದ್ದಲು ರೇಕ್‌ಗಳನ್ನು ಬಳಸಿತ್ತು. ಈ ವರ್ಷದ 400 ಕಲ್ಲಿದ್ದಲು ರೇಕ್‌ಗಳನ್ನು ಬಳಸುತ್ತಿದ್ದು, ಇದು ಇದುವರೆಗಿನ ಅತಿ ಹೆಚ್ಚು ಎಂದು ರೈಲ್ವೇ ಮೂಲಗಳು ತಿಳಿಸಿವೆ.

ಅನೇಕ ರಾಜ್ಯಗಳು ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ. ಇದಕ್ಕೂ ಮೊದಲು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 16 ರಾಜ್ಯಗಳಲ್ಲಿ ಹೆಚ್ಚುತ್ತಿರುವ ಉಷ್ಣತೆ ಹೆಚ್ಚಳದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ, ಇದು ವಿದ್ಯುತ್ ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆ. ಪರಿಸ್ಥಿತಿ ರಾಷ್ಟ್ರೀಯ ಬಿಕ್ಕಟ್ಟು ಎಂದು ಅವರು ಹೇಳಿದರು.
ತಕ್ಷಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸರಬರಾಜು ಮಾಡದಿದ್ದರೆ ಆಸ್ಪತ್ರೆಗಳಂತಹ ಪ್ರಮುಖ ಸಂಸ್ಥೆಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಬೇಕಾಗುತ್ತದೆ ಎಂದು ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, “ದೇಶದಲ್ಲಿ ವಿದ್ಯುತ್ ಕೊರತೆಯಿದೆ. ಇಲ್ಲಿಯವರೆಗೆ ನಾವು ಅದನ್ನು ಹೇಗಾದರೂ ದೆಹಲಿಯಲ್ಲಿ ನಿಭಾಯಿಸಿದ್ದೇವೆ. ಇಡೀ ಭಾರತದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಾವು ಒಟ್ಟಾಗಿ ಅದರ ಪರಿಹಾರವನ್ನು ಕಂಡುಹಿಡಿಯಬೇಕು. ಶೀಘ್ರ, ಈ ಸಮಸ್ಯೆಯನ್ನು ನಿಭಾಯಿಸಲು ಕಾಂಕ್ರೀಟ್ ಕ್ರಮಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿಯೂ ಕಲ್ಲಿದ್ದಲು ಕೊರತೆ ಉಂಟಾಗಿದೆ. ಕೆಪಿಟಿಸಿಎಲ್‌ ಅಧಿಕೃತ ಮಾಹಿತಿ ಪ್ರಕಾರ ಕಳೆದ ಬುಧವಾರ ಆರ್‌ಟಿಪಿಎಸ್‌ನ 6 ಹಾಗೂ 7ನೇ ಘಟಕ ಸೇರಿ 4 ಘಟಕಗಳು ಕಲ್ಲಿದ್ದಲು ಕೊರತೆಯಿಂದಾಗಿ ಸ್ಥಗಿತಗೊಂಡಿದೆ. ಪರಿಣಾಮ ವಿದ್ಯುತ್‌ ಉತ್ಪಾದನೆಯಲ್ಲಿ ವ್ಯತ್ಯಯ ಮುಂದುವರೆದಿದೆ. ಏ.16ರಿಂದ ರಾಜ್ಯದಲ್ಲಿ ಕಲ್ಲಿದ್ದಲಿಗೆ ತೀವ್ರ ಅಭಾವ ಸೃಷ್ಟಿಯಾಗಿದ್ದು ಕಲ್ಲಿದ್ದಲು ಕೊರತೆಯಿಂದ ಬರೋಬ್ಬರಿ ಆರು ಶಾಖೋತ್ಪನ್ನ ವಿದ್ಯುತ್‌ ಘಟಕಗಳು ಸ್ಥಗಿತಗೊಂಡಿದ್ದವು. ಇದೀಗ ಬುಧವಾರ ಪೂರೈಕೆ ತುಸು ಹೆಚ್ಚಾಗಿದ್ದರೂ ಕೊರತೆ ಮುಂದುವರೆದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement