ಪಾಕ್ ಯುದ್ಧವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ವಾಯುಪಡೆಯಿಂದ ನಿವೃತ್ತಿ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರ್ಪಡೆ ; ವರದಿ

ನವದೆಹಲಿ: 2019ರ ಭಾರತ-ಪಾಕಿಸ್ತಾನ ವೈಮಾನಿಕ ಕಾದಾಟದ ನಂತರ ಜಾಗತಿಕ ಮಟ್ಟದಲ್ಲಿ ಮನೆಮಾತಾಗಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಹಾಗೂ ವೀರ ಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ವಾಯುಪಡೆಯ ಸೇವೆಯಿಂದ ಅವಧಿಪೂರ್ವ ನಿವೃತ್ತಿ (Premature Retirement) ಪಡೆದಿದ್ದಾರೆ. ಪ್ರಸ್ತುತ ಅವರು  ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ‘ಫ್ಲೈ91’ (FLY91) ಗೆ ಕಮರ್ಷಿಯಲ್ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ಕೆಲವು ವರದಿಗಳು ತಿಳಿಸಿವೆ.
ವಾಯುಪಡೆಯಲ್ಲಿ ಒಟ್ಟು 22 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ‘ಗ್ರೂಪ್ ಕ್ಯಾಪ್ಟನ್’ ಹುದ್ದೆಯಲ್ಲಿದ್ದ, ವೀರ ಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ಅವರು ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ‘ಫ್ಲೈ91’ (FLY91) ಸೇರಿದ್ದಾರೆ ಎಂದು ವರದಿಯಾಗಿದೆ.  ವರದಿಯ ಪ್ರಕಾರ, ಅವರು ಕಳೆದ ಆಗಸ್ಟ್‌ನಲ್ಲೇ ಈ ಖಾಸಗಿ ಸಂಸ್ಥೆಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ.
ಈ ಬೆಳವಣಿಗೆಯ ಕುರಿತು ಅಭಿನಂದನ್ ವರ್ಧಮಾನ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಮತ್ತೊಂದೆಡೆ ‘ಫ್ಲೈ91’ ಸಂಸ್ಥೆಯ ವಕ್ತಾರರು ಸಹ, ಇದು ಉದ್ಯೋಗಿಗಳ ವೈಯಕ್ತಿಕ ವಿಚಾರ ಎಂಬ ಕಾರಣ ನೀಡಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮಾರ್ಚ್ 2024 ರಲ್ಲಿ ತನ್ನ ಹಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಫ್ಲೈ91 ಸಂಸ್ಥೆಯು, ಪ್ರಸ್ತುತ 6 ATR 72-600 ವಿಮಾನಗಳ ಸಮೂಹವನ್ನು ಹೊಂದಿದ್ದು, ಗೋವಾ ಮತ್ತು ಹೈದರಾಬಾದ್ ಅನ್ನು ತನ್ನ ಪ್ರಮುಖ ನೆಲೆಗಳನ್ನಾಗಿ ಮಾಡಿಕೊಂಡಿದೆ.
ಅಭಿನಂದನ್ ವರ್ಧಮಾನ್ ಅವರ ಸಾಹಸಗಾಥೆ:
ಫೆಬ್ರವರಿ 2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ (CRPF) ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಶ್-ಎ-ಮೊಹಮ್ಮದ್ (JeM) ಉಗ್ರರ ತರಬೇತಿ ಶಿಬಿರದ ಮೇಲೆ ಏರ್‌ಸ್ಟ್ರೈಕ್ ನಡೆಸಿ ಧ್ವಂಸಗೊಳಿಸಿತ್ತು.
ಇದರ ಬೆನ್ನಲ್ಲೇ ಮರುದಿನ ಪಾಕಿಸ್ತಾನಿ ವಾಯುಪಡೆಯು ಭಾರತೀಯ ಗಡಿಯೊಳಗೆ ನುಸುಳಲು ಯತ್ನಿಸಿದಾಗ, ಎರಡೂ ಅಣುವಸ್ತ್ರ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಫೆಬ್ರವರಿ 27, 2019 ರಂದು ನಡೆದ ತೀವ್ರ ವೈಮಾನಿಕ ಕಾದಾಟದಲ್ಲಿ (Dogfight) ಅಂದಿನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ತಮ್ಮ ಹಳೆಯ ಮಿಗ್‌-21 ಬೈಸನ್ (MiG-21 Bison) ವಿಮಾನದಲ್ಲೇ ಸಾಗಿ, ಪಾಕಿಸ್ತಾನದ ಅತ್ಯಾಧುನಿಕ ಎಫ್-16 (F-16) ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು.
ಈ ಪ್ರಕ್ರಿಯೆಯಲ್ಲಿ ಅವರ ವಿಮಾನಕ್ಕೂ ಹಾನಿಯಾಗಿ, ಸುರಕ್ಷಿತವಾಗಿ ಎಜೆಕ್ಟ್ ಆಗುವಾಗ ಗಾಯಗೊಂಡ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇಳಿದು ಪಾಕ್ ಪಡೆಗಳ ವಶವಾಗಿದ್ದರು. ಅತ್ಯಂತ ಉದ್ವಿಗ್ನ ಪರಿಸ್ಥಿತಿಯ ನಡುವೆ, ಮೂರು ದಿನಗಳ ಕಾಲ ಸೆರೆಯಲ್ಲಿದ್ದ ಅಭಿನಂದನ್ ಅವರನ್ನು ಪಾಕಿಸ್ತಾನವು ಮಾರ್ಚ್ 1 ರ ರಾತ್ರಿ ಭಾರತಕ್ಕೆ ಹಸ್ತಾಂತರಿಸಿತ್ತು. ಅವರ ಅಪಾರ ಕರ್ತವ್ಯನಿಷ್ಠೆ ಮತ್ತು ಧೈರ್ಯ ಸಾಹಸಗಳನ್ನು ಮೆಚ್ಚಿ ಭಾರತ ಸರ್ಕಾರ ಅದೇ ವರ್ಷ ಅವರಿಗೆ ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ‘ವೀರ ಚಕ್ರ’ ನೀಡಿ ಗೌರವಿಸಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement