ಬೇರೆ ಪಕ್ಷದಿಂದ ಬಂದು ಸಿಎಂ ಆಗಬಹುದು, ನಾವು ಮಂತ್ರಿಯಾಗೋದು ತಪ್ಪಾ..?

ಬೆಂಗಳೂರು: ಬೇರೆ ಬೇರೆ ಪಕ್ಷದಿಂದ ಬಂದು ಮುಖ್ಯಮಂತ್ರಿಗಳೇ ಆಗಿರುವಾಗ, ನಾವು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಮಂತ್ರಿ ಆದರೆ ತಪ್ಪೇನು ಎಂದು ಗುರುವಾರ ಸಚಿವ ಎಂಟಿಬಿ ನಾಗರಾಜು ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಸಂದರ್ಭದಲ್ಲಿ ಜೆಡಿಎಸ್‌ನ ಬಂಡೆಪ್ಪಕಾಶಂಪುರ ಮಾತನಾಡುತ್ತ ಕಾಂಗ್ರೆಸ್-ಜೆಡಿಎಸ್‌ನಿಂದ ಬಂದವರಿಂದ ಈ ಸರ್ಕಾರ ಆಗಿದೆ ಎಂದು ತಿವಿದರು. ಆಗ ತಕ್ಷಣವೇ ಎದ್ದು ನಿಂತ ಎಂಟಿಬಿ ನಾಗರಾಜು, ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜು ಪದೇ ಪದೇ ಈ ವಿಷಯ ಪ್ರಸ್ತಾಪಿಸುತ್ತೀರಿ. ಇದು ಸರಿಯಲ್ಲ. ಬೇರೆ ಬೇರೆ ಪಕ್ಷದಿಂದ ಬಂದು ಮುಖ್ಯಮಂತ್ರಿಗಳೇ ಆಗಿರುವಾಗ, ನಾವು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಮಂತ್ರಿ ಆದರೆ ತಪ್ಪೇನು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದರು.
ನಾವೇನು ಖರೀದಿಯಾಗಿಲ್ಲ. ಬೇರೆ ಪಕ್ಷದಿಂದ ಬಂದವರು ಮುಖ್ಯಮಂತ್ರಿ ಆಗಿಲ್ಲವೆ? ನಾವು ಆದರೆ ತಪ್ಪೇನು ಎಂದು ಎಂಟಬಿ ನಾಗರಾಜು ಸಿಟ್ಟಿನಿಂದ ಹೇಳಿದಾಗ, ಬಂಡೆಪ್ಪ ಕಾಶಂಪೂರ್, ನೀವು ಖರೀದಿಯಾಗಿದ್ದೀರಿ ಎಂದು ಹೇಳಿಲ್ಲ. ನೀವು ಬೇರೆ ಪಕ್ಷದಿಂದ ಬಂದಿದ್ದರಿಂದ ಸರ್ಕಾರ ಆಗಿದೆ ಎಂದಷ್ಟೇ ಹೇಳಿದ್ದು ಎಂದಾಗ, ಸಿಟ್ಟಿನಿಂದ ಕುದಿಯುತ್ತಿದ್ದ ನಾಗರಾಜು, ನೀವು ಹೇಳಿಲ್ಲರೀ ಸಿದ್ಧರಾಮಯ್ಯ ನಾವೆಲ್ಲ ಖರೀದಿಯಾಗಿದ್ದೇವೆ ಎಂದು ಹೇಳಿಲ್ಲವೇ? ಅವರು ಬೇರೆ ಪಕ್ಷದಿಂದ ಬಂದು ಮುಖ್ಯಮಂತ್ರಿ ಆಗಲಿಲ್ಲವಾ ಎಂದು ಖಾರವಾಗಿ ಹೇಳಿದರು.
ಆಗ ಬಂಡೆಪ್ಪ ಕಾಶಂಪುರ, ನಾನಂತೂ ಹಾಗೆ ಹೇಳಿಲ್ಲ ನಾನು ಒಳ್ಳೆಯ ಸರ್ಕಾರ ಆಗಬೇಕೆಂಬ ದೃಷ್ಟಿಯಿಂದ ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement