ನವದೆಹಲಿ: ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ ಇಬ್ಬರು ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಿರುವುದರಿಂದ ಪುದುಚೆರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿದಿದೆ.
ಇಬ್ಬರು ಶಾಸಕರ ರಾಜಿನಾಮೆಯೊಂದಿಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ಸಂಖ್ಯೆ ಸಮಬಲವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುದುಚೇರಿ ಭೇಟಿಗೂ ಮುನ್ನ ಇಬ್ಬರು ಶಾಸಕರು ರಾಜೀನಾಮೆ ನಿಡಿರುವುದರಿಂದ ಕಾಂಗ್ರೆಸ್ಗೆ ಭಾರೀ ಆಘಾತವಾಗಿದೆ. ಇದರೊಂದಿಗೆ ಕಳೆದ 20 ದಿನದಲ್ಲಿ ನಾಲ್ಕು ಮಂದಿ ಶಾಸಕರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿದ್ದಾರೆ. ಮೂರು ಮಂದಿ ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 33 ಮಂದಿ ಬಲ ಇರುವ ವಿಧಾನಸಭೆಯಲ್ಲಿ, ಸದ್ಯ ವಿಧಾನಸಭೆಯ ಬಲ 28ಕ್ಕೆ ಕುಸಿದಿದೆ. ಮತ್ತೊಬ್ಬ ಕಾಂಗ್ರೆಸ್ ಶಾಸಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಅನರ್ಹಗೊಂಡಿದ್ದಾರೆ.
ಕಾಂಗ್ರೆಸ್ನ ಹತ್ತು, ಡಿಎಂಕೆಯ ಮೂರು ಹಾಗೂ ಓರ್ವ ಪಕ್ಷೇತರ ಶಾಸಕ ಮಾತ್ರ ಆಡಳಿತ ಪಕ್ಷದಲ್ಲಿ ಉಳಿದಿದ್ದಾರೆ. ವಿರೋಧ ಪಕ್ಷದಲ್ಲಿ ಅಖಿಲ ಭಾರತ ಎನ್ಆರ್ ಕಾಂಗ್ರೆಸ್ನ ಏಳು, ಎಐಎಡಿಎಂಕೆಯ ನಾಲ್ಕು ಹಾಗೂ ಮೂವರು ಬಿಜೆಪಿಯ ನಾಮ ನಿರ್ದೇಶಿತ ಸದಸ್ಯರು ಇದ್ದಾರೆ.
2019 ರ ಉಪಚುನಾವಣೆಯಲ್ಲಿ ಕಾಮರಾಜ ನಗರ ಕ್ಷೇತ್ರದಿಂದ ಗೆದ್ದಿದ್ದ ಜಾನ್ ಕುಮಾರ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಜನವರಿ 25 ರಂದು ಸಚಿವರಾದ ಎ. ನಮಸ್ಸಿವಯಂ ಹಾಗೂ ಇ. ತಿಪ್ಪೈಯಂಜನ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಸೋಮವಾರ ಶಾಸಕ ಮಲ್ಲಡಿ ಕೃಷ್ಣ ರಾವ್ ಹಾಗೂ ಮಂಗಳವಾರ ಜಾನ್ ಕುಮಾರ್ ಪಕ್ಷ ತೊರೆದಿದ್ದಾರೆ. ಮುಖ್ಯಮಂತ್ರಿ ನಾರಾಯಣಸಾಮಿ ಆಪ್ತರೇ ಪಕ್ಷ ಬಿಟ್ಟಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಗುವ ಸಂಭವ ಇದೆ. 2016ರ ವಿಧಾನಸಭಾ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಡಿಎಂಕೆ ಹಾಗೂ ಪಕ್ಷೇತರರ ಬೆಂಬಲದಿಂದಾಗಿ ಅಧಿಕಾರಕ್ಕೇರಿತ್ತು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ