ಬಿಹಾರ್‌ ಚುನಾವಣೆಯಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಪಕ್ಷಗಳಿಗೆ ವಿಜಯೇಂದ್ರ ಹಣ ನೀಡಿದ ಬಗ್ಗೆ ತನಿಖೆಯಾಗಲಿ: ಯತ್ನಾಳ

ಬೆಂಗಳೂರು: ಬಿಜೆಪಿ ಸೋಲಿಸುವ ಮೂಲಕ ಪ್ರಧಾನಿ ಮೋದಿ ತಾಕತ್ತನ್ನು ಕುಗ್ಗಿಸುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಹಾರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಪಕ್ಷಗಳಿಗೆ ಹಣ ನೀಡಿದ್ದು, ಈ ಕುರಿತು ಸಮರ್ಪಕ ತನಿಖೆ ನಡೆಯಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ವಿಜಯೇಂದ್ರ ಬಿಹಾರ ಚುನಾವಣೆಯಲ್ಲಿ ಹಣ ನೀಡಿದ ಬಗ್ಗೆ ಕೇಂದ್ರ ಸರಕಾರಕ್ಕೂ ಮಾಹಿತಿಯಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರ ಮೂಲಕ ಹಣ ನೀಡಲಾಗಿದೆ. ಆದರೆ ನನಗೆ ಪಕ್ಷ ದ್ರೋಹಿ ಎಂಬ ಕಳಂಕ ತರಲು ಯತ್ನಿಸುತ್ತಿದ್ದಾರೆ. ನಾನು ಎಂದಿಗೂ ಪಕ್ಷದ ವಿರುದ್ಧ ಮಾತನಾಡಿಲ್ಲ. ನನ್ನ ಹೋರಾಟ ಭ್ರಷ್ಟಾಚಾರ ಹಾಗೂ ಕುಟುಂಬಶಾಹಿ ವಿರುದ್ಧ. ವಿಜಯೇಂದ್ರ ವಿರುದ್ಧ ಬಿಜೆಪಿ ರಾಷ್ಟ್ರೀಯ ಮುಖಂಡರಿಗೆ 45 ಪುಟಗಳ ಸುದೀರ್ಘ ಪತ್ರ ಬರೆದಿದ್ದೇನೆ. ಭ್ರಷ್ಟಾಚಾರ, ವರ್ಗಾವಣೆ ದಂಧೆ, ನಿಗಮ, ಮಂಡಳಿ ನೇಮಕ ಎಲ್ಲ ಕುರಿತು ಪತ್ರದಲ್ಲಿ ತಿಳಿಸಿದ್ದೇನೆ ಎಂದರು.
ಪಕ್ಷದಿಂದ ನೋಟಿಸ್ ಬಂದಿತ್ತು. ಇದಕ್ಕೆ ಈಗಾಗಲೇ 11 ಪುಟಗಳ ಉತ್ತರ ಬರೆದಿದ್ದು, ಇದರಲ್ಲಿ ಯಡಿಯೂರಪ್ಪ ಅವರ ಕುಟುಂಬದಿಂದ ಸರಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಸುದೀರ್ಘವಾಗಿ ವಿವರಿಸಿದ್ದೇನೆ ಎಂದು ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಕೆಲಸ ಮಾಡಿದ ಕಾರ್ಯಕರ್ತ ನಾನು. ಭ್ರಷ್ಟಾಚಾರ ರಹಿತ, ಕುಟುಂಬ ರಾಜಕಾರಣ ರಹಿತ ಆಡಳಿತ ನಡೆಯಬೇಕೆಂಬುದು ನರೇಂದ್ರ ಮೋದಿ ಅವರ ಉದ್ದೇಶ. ಆದರೆ ರಾಜ್ಯದಲ್ಲಿ ನಿರೀಕ್ಷೆಯಂತೆ ಆಡಳಿತ ನಡೆಯುತ್ತಿಲ್ಲ. ವಿಜಯೇಂದ್ರ ಅವ್ಯವಹಾರಗಳ ಕುರಿತು ವರಿಷ್ಠ ಮಂಡಳಿಯಿಂದ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಮಾರಿಷಸ್ ಪ್ರವಾಸದ ಬಗ್ಗೆ ಉತ್ತರ ನೀಡದ ಯಡಿಯೂರಪ್ಪ, ಡಿವಿ ಗುಂಡಪ್ಪನವರ, ಶಿವರಾಮ ಕಾರಂತರ ಮಾತುಗಳನ್ನು ಹೇಳಿ ತಪ್ಪಿಸಿಕೊಳ್ಳಲು ಆಗಲ್ಲ. ಕೋಟ್ಯಂತರ ಕಾರ್ಯಕರ್ತರ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಎಷ್ಟು ಹಣ ನೀಡಲಾಗಿದೆ ಎಂಬ ಬಗ್ಗೆ ಯಡಿಯೂರಪ್ಪ, ವಿಜಯೇಂದ್ರ ಉತ್ತರ ನೀಡಬೇಕು. ನಾನು ಆರೋಪ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement