ಬಿಎಸ್‌ವೈ ದೂರಿನ ಹಿನ್ನೆಲೆ ಯತ್ನಾಳಗೆ ದೆಹಲಿ ಬುಲಾವ್‌: ಎಲ್ಲರ ಚಿತ್ತ ಬಿಜೆಪಿ ಹೈಕಮಾಂಡ್‌ನತ್ತ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ತಿರುಗಿಬಿದ್ದಿರುವ ವಿಜಯಪುರ ನಗರ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಂದ ತುರ್ತು ಬುಲಾವ್‌ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಭಾನುವಾರ ರಾತ್ರಿ ದಿಢೀರ್‌ ತೆರಳಿದ್ದಾರೆ.

ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಂಚಾಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕು ಎಂಬು ಹಕ್ಕೊತ್ತಾಯದ ಬೃಹತ್‌ ಸಮಾವೇಶದಲ್ಲಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತೀವ್ರವಾಗಿ ಟೀಕಿಸಿದ ನಂತರ ಈ ಬೆಳವಣಿಗೆಗೆ ನಡೆದಿದೆ.

ಇತ್ತ ಪಂಚಮಸಾಲಿಗಳ ಬೃಹತ್‌ ಸಮಾವೇಶ ಮುಕ್ತಾಯವಾಗುತ್ತಿದ್ದಂತೆ ಯತ್ನಾಳ ಅವರಿಗೆ ಅತ್ತ ದೆಹಲಿಯಿಂದ ಬುಲಾವ್‌ ಬಂದಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೀಂದ್ರ ಅವರು ಹೈಕಮಾಂಡಿಗೆ ದೂರು ನೀಡಿದ್ದೇ ಕಾರಣ ಎಂದು ಬಿಜೆಪಿ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಪಕ್ಷದ ಶಿಸ್ತು ಉಲ್ಲಂಘಿಸಿ ತಮ್ಮ ಹಾಗೂ ಕುಟುಂಬದ ವಿರುದ್ದ ವಾಚಾಮಗೋಚರ ಹರಿಹಾಯುತ್ತಿರುವ  ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಟ್ಟು ಹಿಡಿದಿದ್ದಾರೆ.ಎನ್ನಲಾಗಿದೆ.

ಈ ಬಗ್ಗೆ ದೆಹಲಿ ವರಿಷ್ಠರಿಗೆ  ಪತ್ರದ ಮುಖೇನ ತಿಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಯತ್ನಾಳ ಬಾಯಿಗೆ ಬೀಗ ಹಾಕಬೇಕು ಇಲ್ಲವೇ ಪಕ್ಷದಿಂದಲೇ ಉಚ್ಚಾಟಿಸುವಂತೆಸಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಭಾನುವಾರವೇ ಹೈಕಮಾಂಡಿನಿಂದ ಯತ್ನಾಳ ಅವರಿಗೆ ಬುಲಾವ್‌ ಬಂದಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂಲಕ  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಪಟ್ಟು ಹಿಡಿದಿರುವ ಯಡಿಯೂರಪ್ಪ, ಯತ್ನಾಳ ಅವರ ಮಾತು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ ಎಂದು ಹೈಕಾಂಡ್‌ಗೆ ತಿಳಿಸಿದ್ದಾರಂತೆ.

ಪಕ್ಷ ನೋಟಿಸ್ ನೀಡಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಟೀಕಿಸುವುದನ್ನು ಮುಂದುವರಿಸಿರುವ ಯತ್ನಾಳ, ಭಾನುವಾರ ನಡೆದ ಪಂಚಮಸಾಲಿ ಸಮಾವೇಶದಲ್ಲಿ ನೋಟಿಸ್‌ ನೀಡಿ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಹಾಗೂ ಅದಕ್ಕೆ ನಾನು ಹೆರುವವನೂ ಅಲ್ಲ ಎಂದು ಮತ್ತೊಮ್ಮೆ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದರು.

ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಗಳು, ವಿಡಿಯೋ ತುಣುಕುಗಳು ಸೇರಿದಂತೆ ಹಲವು ದಾಖಲೆಗಳನ್ನು ಯಡಿಯೂರಪ್ಪ ದೆಹಲಿ ಹೈಕಮಾಂಡಿಗೆ ಈ ಮೊದಲೇ ಕಳುಹಿಸಿದ್ದರು. ಇದರ ನಂತರ ಭಾನುವಾರದ ಸಮಾವೇಶದಲ್ಲಿನ ಯತ್ನಾಳ ಮಾತುಗಳು ಯಡಿಯೂರಪ್ಪ ಅವರನ್ನು ಕೆರಳಿಸಿದ ಪರಿಣಾಮ ಹೈಕಮಾಂಡಿನಿಂದ ಯತ್ನಾಳ ಅವರಿಗೆ ತಕ್ಷಣ ಬುಲಾವ್‌ ಬಂದಿದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿಯವರೇ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ. ನೋಟಿಸ್ ಕೊಟ್ಟು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮೀಸಲಾತಿ ನೀಡದಿದ್ದಲ್ಲಿ ಕುರ್ಚಿ ಖಾಲಿ ಮಾಡಿಸುತ್ತೇವೆ ಎಂದು ಭಾನುವಾರದ ಸಮಾವೇಶದಲ್ಲಿ ಯತ್ನಾಳ ಮತ್ತೆ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದರಿಂದ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ..

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

ಯತ್ನಾಳ ಮೇಲೆ ಕ್ರಮ ಜರುಗಿಸದಿದ್ದರೆ ಯಡಿಯೂರಪ್ಪ ಅವರು ಹಾಗೂ ಅವರ ಬೆಂಬಲಿಗರು ದೆಹಲಿಗೇ ಹೋಗಿ ಪಟ್ಟು ಹಿಡಿಯಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಅಷ್ಟೊಂದು ಸಿದ್ಧತೆಯನ್ನು ಯಡಿಯೂರಪ್ಪ ಅವರ ಬೆಂಬಲಿಗರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಯತ್ನಾಳ ಅವರ ವಿಷಯ ಈಗ ದೆಹಲಿ ಅಂಗಳಕ್ಕೆ ಹೋಗಿದ್ದು, ತುರ್ತಾಗಿ ಬರುವಂತೆ ಸೂಚನೆ ಬಂದ ಹಿನ್ನೆಲೆ ಭಾನುವಾರ ರಾತ್ರಿ 9.30ರ ವಿಮಾನದಲ್ಲಿ ಯತ್ನಾಳ್ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.   ಕೆಲವು ದಿನಗಳ ಹಿಂದೆ ಹೈಕಮಾಂಡ್ ಶೋಕಾಸ್ ನೋಟಿಸಿಗೆ ನೀಡಿತ್ತು 11 ಪುಟಗಳ ಉತ್ತರ ನೀಡಿದ್ದ ಯತ್ನಾಳ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವ್ಯಾಮೋಹ, ಬಿ.ವೈ.ವಿಜಯೇಂದ್ರ ಅವರಿಂದ ನಡೆಯುತ್ತಿರುವ ಆಡಳಿತ ಹಸ್ತಕ್ಷೇಪ ಇತ್ಯಾದಿಗಳ ಕುರಿತು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಆದರೆ ಈಗ ಬಿಜೆಪಿ ಹೈಕಮಾಂಡ್‌ ತುರ್ತು ಬುಲಾವ್‌ ಹಿನ್ನೆಲೆಯಲ್ಲಿ ಯತ್ನಾಳ ದೆಹಲಿಗೆ ಹೋಗಿದ್ದು ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಮೂಡಿಸಿದೆ.

 

 

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement