ಪಂಚ ರಾಜ್ಯಗಳಿಗೆ ಚುನಾವಣೆ ದಿನಾಂಕ ಪ್ರಕಟ: ಪಶ್ಚಿಮ ಬಂಗಾಳದಲ್ಲಿ ೮ಹಂತ, ಅಸ್ಸಾಂನಲ್ಲಿ 3ಹಂತ, ತಮಿಳುನಾಡು- ಕೇರಳ, ಪುದುಚೇರಿಯಲ್ಲಿ ಒಂದೇ ಹಂತದ ಚುನಾವಣೆ

ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.
ಅಸ್ಸಾಂ ಚುನಾವಣೆ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮೂರು ಹಂತಗಳಲ್ಲಿ ನಡೆಯಲಿದ್ದು, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏ.೬ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕೇರಳದ ಮಲಪ್ಪುರಂ ಲೋಕಸಭಾ ಕ್ಷೇತ್ರದ ಖಾಲಿ ಸ್ಥಾನಕ್ಕೆ ಉಪಚುನಾವಣೆ ಏ.೬ರಂದೇ ಏಕಕಾಲದಲ್ಲಿ ನಡೆಯಲಿದೆ. ಆದರೆ ಪಶ್ಚಿಮ ಬಂಗಾಳ ಚುನಾವಣೆ ಎಂಟು ಹಂತಗಳಲ್ಲಿ ನಡೆಯಲಿದ್ದು, ಮಾರ್ಚ್ 27 ರಿಂದ ಆರಂಭವಾಗಿ ಏಪ್ರಿಲ್ 29ಕ್ಕೆ ಕೊನೆಗೊಳ್ಳಲಿದೆ.
ಪಶ್ಚಿಮ ಬಂಗಾಳದಲ್ಲಿ, ಮೊದಲ ಹಂತದ ಚುನಾವಣೆ ಮಾರ್ಚ್ 27 ರಂದು, ಎರಡನೇ ಹಂತ ಏಪ್ರಿಲ್ 1 ರಂದು, 3 ನೇ ಹಂತ ಏ. 6 ರಂದು, 4 ನೇ ಹಂತ ಏಪ್ರಿಲ್ 10 ರಂದು ನಡೆಯಲಿದೆ. 5 ನೇ ಹಂತ ಏಪ್ರಿಲ್ 17 ರಂದು ನಡೆಯಲಿದೆ – ಏಪ್ರಿಲ್ 22 ರಂದು 6 ನೇ ಹಂತ, ಏಪ್ರಿಲ್ 26 ರಂದು 7 ನೇ ಹಂತ ಮತ್ತು ಏಪ್ರಿಲ್ 29 ರಂದು 8 ನೇ ಹಂತ ಹೀಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಹಾಗೂ ಐದೂ ರಾಜ್ಯಗಳ ಮತಗಳ ಎಣಿಕೆ ಮೇ 2ರಂದು ನಡೆಯಲಿದೆ.
ಈ ಚುನಾವಣೆಗಳಲ್ಲಿ ಸ್ಪರ್ಧಿಸುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಇದು ತಮ್ಮ ಜನಪ್ರಿಯತೆ ಹಾಗೂ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಮಯ. ಭಾರತದ ದಕ್ಷಿಣದ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಸ್ತರಣಾ ಯೋಜನೆಗಳ ಯಶಸ್ಸುನೀಡುತ್ತದೆಯೋ ಅಥವಾ ಈ ಮೊದಲಿನಂತೆಯೇ ಇರುತ್ತದೆಯೋ ಎಂದು ಈ ಚುನಾವಣೆ ನಿರ್ಧರಿಸಲಿದೆ. ಅಸ್ಸಾಂ ಹೊರತು ಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಇದು ಮೊದಲ ಬಾರಿಗೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಅ ಮೂಲಕ ಈ ರಾಜ್ಯಗಳಲ್ಲಿಯೂ ತನ್ನ ಬಲವರ್ಧನೆಗೆ ಮುಂದಾಗಿದೆ. ಅಲ್ಲದೆ, ಇದು ಕಾಂಗ್ರೆಸ್‌ಗೂ ಸಹ ಇದು ಅಸ್ತಿತ್ವದ ಪ್ರಶ್ನೆಯೇ ಆಗಿದೆ. ಅಸ್ಸಾಂ ಹೊರತು ಪಡಿಸಿ ಅಸ್ತಿತ್ವವೇ ಇಲ್ಲದ ಬಿಜೆಪಿ ಬಲವರ್ಧಿಸಿಕೊಂಡರೆ ಅದರ ನೇರ ಪರಿಣಾಮ ಆಗುವುದು ಗಾಂಧಿ ಪರಿವಾರವನ್ನೇ ನಂಬಿರುವ ಕಾಂಗ್ರೆಸ್‌ ಮೇಲೆ. ಹೀಗಾಗಿ ಈ ಚುನಾವಣೆಗಳು ಹಲವಾರು ಕಾರಣಗಳಿಂದ ಹೆಚ್ಚು ಮಹತ್ವ ಪಡೆದಿವೆ.
2014ರಲ್ಲಿ ಮೊದಲ ಬಾರಿಗೆ ಅಸ್ಸಾಂನಲ್ಲಿ ಸರ್ಕಾರ ರಚಿಸಿದ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪಶ್ಚಿಮ ಬಂಗಾಳವು ತನ್ನ ಪ್ರಮುಖ ಗುರಿಯಾಗಿದ್ದು, ಅಲ್ಲಿ ಈಗಾಗಲೇ ಎಡ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹಿಂದಿಕ್ಕಿದ ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಮಾರ್ಪಟ್ಟಿದೆ.
ಇತ್ತ ದಕ್ಷಿಣದ ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿಗಳಲ್ಲಿಯೂ ಬಿಜೆಪಿ ತನ್ನ ಮತ ಬ್ಯಾಂಕ್‌ ಹೆಚ್ಚಿಸಕೊಳ್ಳುವ ತೀವ್ರ ಪ್ರಯತ್ನದಲ್ಲಿದೆ.
ತಮಿಳುನಾಡಿನಲ್ಲಿ ಪಾದ ಮುದಿಟ್ಟಿರುವ ಬಿಜೆಪಿ ತನ್ನ ಮಿತ್ರಪಕ್ಷ ಎಐಎಡಿಎಂಕೆ ಜೊತೆಗೂಡಿ ನೆಲೆಯೂರಲು ಹೊರಟಿದೆ.
ಕಾಂಗ್ರೆಸ್‌ಗೆ ಈ ಐದು ರಾಜ್ಯಗಳಲ್ಲಿ ಹೆಚ್ಚು ಭರವಸೆಯಿರುವುದು ಹಾಗೂ ಅದು ಗೆಲ್ಲೇಬೇಕಾದ ರಾಜ್ಯವೆಂದರೆ ಅದು ಕೇರಳ. ಅಲ್ಲಿ ಎಡ ರಂಗದ ಒಕ್ಕೂಟದ ಸರ್ಕಾರವು ಆಡಳಿತ ವಿರೋಧಿ ಎದುರಿಸುತ್ತಿದೆ. ಮತ್ತು ಬಿಜೆಪಿ ಇನ್ನೂ ದೊಡ್ಡ ಸ್ಪರ್ಧಿಯಾಗಿ ಹೊರಹೊಮ್ಮಬೇಕಿದೆ. ಅಸ್ಸಾಂನಲ್ಲಿ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದೆ. ಅಲ್ಲಿ ಅದು ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಮತ್ತು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಸ್ಥಳೀಯ ಸಮುದಾಯಗಳಿಂದ ಹಿನ್ನಡೆ ಎದುರಿಸುತ್ತಿರುವ ಅಸ್ಸಾಂನಲ್ಲಿ ಬಿಜೆಪಿಗೆ ದೊಡ್ಡ ಪಾಲುಗಳಿವೆ.
ಪುದುಚೇರಿಯ ಕೇಂದ್ರಾಡಳಿತ ಪ್ರದೇಶ ಸಣ್ಣದಾಗಿದ್ದರೂ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಸರ್ಕಾರವನ್ನು ಉಚ್ಚಾಟಿಸಿದ ಹಿನ್ನೆಲೆಯಲ್ಲಿ ಚುನಾವಣೆಯು ಮಹತ್ವವನ್ನು ಪಡೆದುಕೊಂಡಿದೆ. ಬಿಜೆಪಿಗೆ ಇಲ್ಲಿ ಶಾಸಕರು ಇಲ್ಲ ಆದರೆ ಅಧಿಕಾರಕ್ಕೆ ಪ್ರವೇಶ ಪಡೆಯಲು ತನ್ನ ಮಿತ್ರಪಕ್ಷಗಳಾದ ಎನ್ಆರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಮೇಲೆ ಪಿಗ್ಗಿಬ್ಯಾಕ್ ಮಾಡಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಪತನದ ನಂತರ ಪುದುಚೇರಿಯ ಮೇಲೆ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ.

ಪ್ರಮುಖ ಸುದ್ದಿ :-   ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಿಂತೆಗೆದುಕೊಂಡ ಆಸ್ಟ್ರಾಜೆನೆಕಾ : ವರದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement