ಕೊಪ್ಪಳ: ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ಸ್ಪೋಟಕ ವಸ್ತುಗಳನ್ನು ಮೂರು ದಿನದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂದಿತಿರುಗಿಸಬೇಕೆಂದು ಎಂದು ರಾಜ್ಯ ಗಣಿ ಸಚಿವ ಮುರುಗೇಶ ನಿರಾಣಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇಲ್ಲು ಶನಿವಾರ ಸಭೆ ನಡೆಸಿ ಮಾತನಾಡಿದ ಅವರು, ಯಾರ್ಯಾರು ತಮ್ಮ ತಮ್ಮ ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ಸ್ಫೋಟಕ್ಕಾಗಿ ಸಂಗ್ರಹಿಸಿರುವ ಸ್ಪೋಟಕಗಳನ್ನು ಮೂರು ದಿನದಲ್ಲಿ ಹಿಂತಿರುಗಿಸದಿದ್ದರೆ ಕಾನೂನು ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾನೂನು ಬಾಹಿರವಾಗಿ ನಡೆಯುವ ಕಲ್ಲು ಕ್ವಾರಿಗಳ ಮೇಲೆ ಹದ್ದಿನ ಕಣ್ಣಿಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಒಂದು ವೇಳೆ ಯಾರಾದರೂ ಹಿಂತಿರುಗಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಖಚಿತ ಎಂದರು.
ಮೂರು ದಿನದ ನಂತರ ನಮ್ಮ ಇಲಾಖೆ ಅಧಿಕಾರಿಗಳು ಎಲ್ಲ ಕಡೆ ತಪಾಸಣೆ ನಡೆಸಲಿದ್ದಾರೆ. ಹಾಗೊಂದು ವೇಳೆ ಯಾರಾದರೂ ಸಂಗ್ರಹಿಸಿಟ್ಟಿಕೊಂಡಿರುವುದು ಕಂಡುಬಂದರೆ ಕ್ರಷರ್ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇನ್ನು ಮುಂದೆ ಸ್ಫೋಟಕ ವಸ್ತುಗಳನ್ನು ಬಳಸಬೇಕಾದರೆ ಸರ್ಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.ಇದಕ್ಕಾಗಿ ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗುವುದು. ಶಿವಮೊಗ್ಗ ಮತ್ತು ಗುಡಿಬಂಡೆ ಘಟನೆಯ ನಂತರ ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಬಸವರಾಜ್ ದಡೆಸೂಗೂರು, ಪರಣ್ಣಮನವಳ್ಳಿ, ಜಿಲ್ಲಾಪಂಚಾಯತ್ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್, ಮುಖಂಡ ಅಮರೇಶ್ ಕರಡಿ ಮತ್ತಿತರರು ಭಾಗವಹಿಸಿದ್ದರು.
ಕ್ವಾರಿ ಮಾಲೀಕರು -ನೌಕರರಿಗೆ ತರಬೇತಿ:
ಶಿವಮೊಗ್ಗ ಕ್ವಾರಿಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದ ಬಳಿಕ ಕ್ವಾರಿಯಲ್ಲಿ ಸಂಗ್ರಹಿಸಿದ್ದ ಸ್ಪೋಟಕಗಳನ್ನು ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಲಾಗಿತ್ತು. ಸರಿಯಾದ ತರಬೇತಿ ಇಲ್ಲದೆ ಕ್ವಾರಿಗಳಲ್ಲಿ ಸೋಟಕ ಬಳಸುತ್ತಿರುವುದರಿಂದ ಇಂತಹ ದುರಂತಗಳು ನಡೆಯುತ್ತಿವೆ. ಹೀಗಾಗಿ ಕ್ವಾರಿ ಮಾಲೀಕರು ಮತ್ತು ಕೆಲಸಗಾರರಿಗೆ ಮೂರರಿಂದ ಏಳು ದಿನಗಳ ಕಾಲ ತರಬೇತಿ ನೀಡಲು ಇಲಾಖೆ ಮುಂದಾಗಿದೆ. ಅಕ್ರಮವಾಗಿ ಪೂರೈಸಿದ ಹಾಗೂ ಸಾಗಾಣಿಕೆ ಮಾಡಿದವರನ್ನು ಪತ್ತೆ ಮಾಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ