ಮೈಸೂರು: ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಅಮಾನತು ಮಾಡಿದರೂ ನಾನು ಹೆದರುವುದಿಲ್ಲ, ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ ಎಂದು ಕಾಂಗ್ರೆಸ್ ಶಾಸಕ ತನ್ವೀರ ಸೇಠ್ ಪಕ್ಷದ ಮುಖಂಡರ ವಿರುದ್ಧ ಆಕ್ರೋಷ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಅವರ ಬೆಂಬಲಿಗರು ತನ್ವೀರ್ ಸೇಠ್ ವಿರುದ್ಧ ಹರಿಹಾಯ್ದ ಮರುದಿನ ಸೇಠ್ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ನಾನು ಕೂಡ 5 ಬಾರಿ ಗೆದ್ದಿದ್ದೇನೆ . ಒಬ್ಬರ ಗೌರವ ಕಾಪಾಡುವ ಸಲುವಾಗಿ ಪಕ್ಷದ ಗೌರವ ಹರಾಜು ಹಾಕಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಪದೇ ಪದೇ ನನ್ನ ತೇಜೋವಧೆ ಮಾಡಿ ನನ್ನದೇ ಲೋಪ ಎಂದು ಹೇಳುತ್ತಿರುವುದು ಸರಿಯಲ್ಲ. ನನ್ನ ವಿರುದ್ಧದ ಪದಗಳ ಬಳಕೆಯೂ ಸರಿಯಾಗಿಲ್ಲ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆ ಅಲ್ಲ. ಇತ್ತೀಚೆಗೆ ಪಕ್ಷದಲ್ಲಿ ವ್ಯಕ್ತಿ ಪೂಜೆ ಆರಂಭವಾದಂತಿದೆ ಎಂದು ಅಭಿಪ್ರಾಯಪಟ್ಟರು.
ನನ್ನ ವಿರುದ್ದ ಕ್ರಮ ಕೈಗೊಂಡರೆ ಅದರ ಪರಿಣಾಮ ಎದುರಿಸಲು ಸಿದ್ದರಾಗಬೇಕು . ನಾನೇನು ಮಾರಾಟದ ವಸ್ತುವಲ್ಲ. ರಾಜಕೀಯ ತತ್ವ ಸಿದ್ದಾಂತ ಉಳಿಸಿಕೊಂಡಿದ್ದೇನೆ. ಅದಕ್ಕಾಗಿ ಹಲವು ತ್ಯಾಗ ಮಾಡಿದ್ದೇನೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗಬಾರದು ಅನ್ನೋ ಬಗ್ಗೆ ಮಾತುಕತೆ ನಡೆದಿತ್ತು. ಆದರೆ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡೋ ನಿಟ್ಟಿನಲ್ಲಿ ಮೈಸೂರು ಮೇಯರ್ ಆಯ್ಕೆ ಸಂದರ್ಭದಲ್ಲಿ ಮೈತ್ರಿ ಆಯ್ತು ಎಂದು ತನ್ವೀರ್ ಪುನರುಚ್ಚರಿಸಿದ್ದಾರೆ.
ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ವರದಿ ನೀಡುತ್ತೇನೆ. ಪಕ್ಷಕ್ಕಿಂತ ದೊಡ್ಡದು ಯಾವುದು ಇಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ತನ್ವೀರ್ ಸವಾಲು ಹಾಕಿದರು.
ನಿಮ್ಮ ಕಾಮೆಂಟ್ ಬರೆಯಿರಿ