ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಅವರು ಗುರುಗ್ರಾಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 69 ವರ್ಷ ವಯಸ್ಸಿಯ ಚೌಹಾಣ್ ಅವರು ಈ ಕ್ಷೇತ್ರದಿಂದ ಆರು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.
ಇತ್ತೀಚೆಗೆ ಕೋವಿಡ್-19 ಪಾಸಿಟಿವ್ ಸೋಂಕಿನಿಂದ ಗುರುಗ್ರಾಮ್ದ ಮೇದಾಂತ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ ತೀವ್ರ ಉಸಿರಾಟ ತೊಂದರೆಯುಂಟಾಗಿ ಆರೋಗ್ಯ ಕಳವಳ ಸ್ಥಿತಿಗೆ ತಲುಪಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಂಗಳವಾರ (ಮಾ.೨) ಮುಂಜಾನೆ ಮೃತಪಟ್ಟ ಚೌಹಾಣ್ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರವು ಬುರ್ಹಾನ್ಪುರ ಜಿಲ್ಲೆಯ ಶಾಹ್ಪುರದ ತಮ್ಮ ಪೂರ್ವಜರ ಸ್ಥಳದಲ್ಲಿ ಬುಧವಾರ ನೆರವೇರಲಿದೆ ಎಂದು ತಿಳಿದುಬಂದಿದೆ.
ಸಂತಾಪ: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿ, ನಂದು ಭೈಯ್ಯ ಅವರು ಪಕ್ಷಕ್ಕಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರಿಗೆ ನನ್ನ ಕೊನೆಯ ನಮನಗಳನ್ನು ಸಲ್ಲಿಸುತ್ತೇನೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಕೇಂದ್ರ ಸಚಿವೆ ಮತ್ತು ಹಿರಿಯ ಬಿಜೆಪಿ ಮುಖಂಡೆ ಉಮಾ ಭಾರತಿ ಮತ್ತು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಸಂತಾಪ ಸೂಚಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ