ದೇವೇಂದ್ರಪ್ಪ, ಆಪ್ತನ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದು ನೌಕರಿಯಿಂದ ಅಮಾನತುಗೊಂಡಿರುವ ಬಿಬಿಎಂಪಿ ನಗರ ಯೋಜನೆ ವಿಭಾಗದ ಸಹಾಯಕ ಅಭಿಯಂತರ ದೇವೇಂದ್ರಪ್ಪ ಆಪ್ತರ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
. ದೇವೇಂದ್ರಪ್ಪ ಅವರ ಆಪ್ತ ಶ್ರೀನಿವಾಸ ಮೂರ್ತಿ ಅವರ ಅಲಸೂರು ಗುಪ್ತ ಲೇ ಔಟ್‍ನಲ್ಲಿರುವ ನಿವಾಸದ ಮೇಲೆ ಹಾಗೂ ದೇವೇಂದ್ರಪ್ಪ ಅವರ ಅಮೃತನಗರದ ಸಿ ಸೆಕ್ಟರ್ ಮನೆ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ನಗರ ಯೋಜನೆ ವಿಭಾಗದಲ್ಲಿ ಪ್ರಭಾರ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರಪ್ಪ ಅವರು ಖಾಸಗಿ ಸಂಸ್ಥೆಯೊಂದರ ಕಟ್ಟಡ ಕಾಮಗಾರಿಗೆ ಒಸಿ ನೀಡಲು 20 ಲಕ್ಷದ ಹಣದ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಕಳೆದ ಫೆ.5ರಂದು ಎಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದರು. ದೇವೇಂದ್ರಪ್ಪ ಅವರನ್ನು ವಶಕ್ಕೆ ಪಡೆದಾಗ ಅವರ ನಿವಾಸದಲ್ಲಿ ಬಿಬಿಎಂಪಿಗೆ ಸಂಬಂಸಿದ ಹಲವಾರು ಕಡತಗಳು, ಕೋಟಿಗಟ್ಟಲೆ ಹಣ ಸಿಕ್ಕಿತ್ತು.
ಈಗ ಬಿಬಿಎಂಪಿ ಸೇವೆಯಿಂದ ಅವರನ್ನು ಅಮಾನತು ಪಡಿಸಲಾಗಿದೆ. ದೇವೇಂದ್ರಪ್ಪ ಅಕ್ರಮಗಳ ಬೆನ್ನತ್ತಿರುವ ಎಸಿಬಿ ಪೊಲೀಸರಿಗೆ ಬಗೆದಷ್ಟು ಕರ್ಮಕಾಂಡ ಬಯಲಾಗುತ್ತಿರುವುದರಿಂದ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಮಂಗಳವಾರ ಮುಂಜಾನೆ ಅವರ ಆಪ್ತ ಶ್ರೀನಿವಾಸ ಮೂರ್ತಿ ಅವರ ನಿವಾಸ ಹಾಗೂ ಅಮೃತ್‍ನಗರದಲ್ಲಿರುವ ದೇವೇಂದ್ರಪ್ಪ ಅವರ ನಿವಾಸಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದು, ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement