ಸಿಡಿಗಾಗಿ ೧೫ ಕೋಟಿ ರೂ.ಖರ್ಚು, ನಾಲ್ಕು ತಂಡಗಳಿಂದ ಕೆಲಸ: ಬಾಲಚಂದ್ರ ಜಾರಕಿಹೊಳಿ ಮತ್ತೊಂದು ಬಾಂಬ್‌..!

ಬೆಂಗಳೂರು:ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದ ಬೆನ್ನಲ್ಲೇ ಮಾಜಿ ಸಚಿವ ಹಾಗೂ ರಮೇಶ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಕೆಕೆ ಗೆಸ್ಟ್ ಹೌಸ್ ನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿಡಿ ನಂಟು ಬೆಳಗಾವಿಯಿಂದ ಬೆಂಗಳೂರಿನ ವರೆಗೂ ಇರುವ ಸಾಧ್ಯತೆ ಇದೆ. ದಿನೇಶ್ ಕಲ್ಲಹಳ್ಳಿ ಅವರನ್ನು ದಿಕ್ಕುತಪ್ಪಿಸಿರುವ ಸಾಧ್ಯತಯಿದೆ ಎಂದು ಹೇಳಿದ್ದಾರೆ.
ರಮೇಶ ಜಾರಕಿಹೊಳಿ ಮಾಧ್ಯಮದವರ ಎದುರು ಬಂದು ಹೇಳಿಕೆ ನೀಡಬೇಕು ಎಂದು ವಿನಂತಿ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ದೂರು ನೀಡದಿದ್ದರೆ ನಾವೇ ದೂರು ನೀಡುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ನಕಲಿ ಸಿಡಿಗಾಗಿ 15 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಮಾಹಿತಿಯಿದೆ. ಈ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಹಲವು ಸಚಿವರು, ಶಾಸಕರ ಬಗ್ಗೆಯೂ ಇಂತಹ ನಕಲಿ ಸಿಡಿಗಳನ್ನು ಸೃಷ್ಟಿಸಿರುವ ಆರೋಪ ಕೇಳಿಬಂದಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಕಾಣದ ಕೈಗಳ ಕೈವಾಡ ಹೊರಬರಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಹನಿಟ್ರ್ಯಾಪ್ ರೀತಿ ಇದನ್ನು ಪ್ಲಾನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯಲು ನಿರ್ಧಾರ ಮಾಡಿದ್ದಾರೆ. ಯುವತಿಗೆ 50 ಲಕ್ಷ ರೂ. ನೀಡಿ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಲಾಗಿದೆ ಎನ್ನುವ ಮಾತುಗಳಿವೆ. ಪೊಲೀಸರು ತನಿಖೆ ಮುಂದುವರೆಸಬೇಕು. ಇದರ ಹಿಂದಿನ ಸತ್ಯ ಹೊರಗೆಳೆಯಲು ಸಿಬಿಐ ತನಿಖೆಗೆ ವಹಿಸಬೇಕಿದೆ ಎಂದು ಆಗ್ರಹಿಸಿದರು.
ಮರ್ಯಾದೆ, ಗೌರವ ಹೋದದ್ದು ವಾಪಸ್ ಬರುತ್ತಾ? ನಾವು ಸತತವಾಗಿ ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ರಮೇಶ ಜಾರಕಿಹೊಳಿ ಸಚಿವ ಸ್ಥಾನದಿಂದ ತೆಗೆಯಬೇಕೆಂಬ ಒಂದೇ ಉದ್ದೇಶದಿಂದಲೇ ಪ್ರಕರಣಕ್ಕೆ ನಾಲ್ಕು ತಂಡಗಳು ಕೆಲಸ ಮಾಡಿದೆ. 15 ಕೋಟಿ ರೂ. ಖರ್ಚು ಮಾಡಿ 17 ಸರ್ವರ್ ಬುಕ್ ಮಾಡಿ ವಿದೇಶಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ದಿನೇಶ್ ಕಲ್ಲಹಳ್ಳಿ ದೂರು ನೀಡುವ ಮೂರು ದಿನ ಮೊದಲು ಯೂಟ್ಯೂಬ್ ಸೇರಿದಂತೆ ಹಲವು ಆನ್ಲೈನ್ ಸೈಟ್ ಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ ಎಂದು ಹೇಳಿದರು.ಪ್ರಕರಣ ನಾಳೆಯಿಂದ ಇದು ಯಾವ ಟರ್ನ್ ಪಡೆಯುತ್ತದೆಯೋ ಗೊತ್ತಿಲ್ಲ. ಫೇಕ್ ವಿಡಿಯೋ ಇದೆ. ಲ್ಯಾಬ್ ಟೆಸ್ಟ್ ನಡೆದರೆ ಅದರ ಸತ್ಯಾಸತ್ಯತೆ ಹೊರ ಬರಲಿದೆ ಎಂದು ತಿಳಿಸಿದ್ದಾರೆ.ಪ್ರಕರಣದ ತನಿಖೆಗೆ ರಮೇಶ್ ಜಾರಕಿಹೊಳಿ ದೂರು ನೀಡಬೇಕು. ಅವರು ಮನೆಯಲ್ಲಿ ಕೂರದೆ ಹೊರಗೆ ಬರಬೇಕು. ಸಿಡಿಯನ್ನು ಲ್ಯಾಬ್ ಗೆ ಕಳುಹಿಸಿ ಟೆಸ್ಟ್ ಮಾಡಿಸಬೇಕು. ಗೃಹಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ತನಿಖೆ ಆಗಲೇಬೇಕು. ಅದು ನಕಲಿ ಸಿಡಿ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಆದ್ದರಿಂದ ಸಿಡಿ ಬಗ್ಗೆ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement